ಚಾಮರಾಜನಗರದಲ್ಲಿ ರೈತರ "ನಮ್ದು" ಮಾರುಕಟ್ಟೆ ಕಾರ್ಯಾರಂಭ
ಚಾಮರಾಜನಗರ, ಅಕ್ಟೋಬರ್ 3: ಮಧ್ಯವರ್ತಿಗಳ ಹಾವಳಿಯಿಂದ ತತ್ತರಿಸಿ ಹೋಗಿರುವ ರೈತ ಸಮುದಾಯಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರೈತ ಸಂಘಟನೆಗಳು ಮುಂದಾಗಿದ್ದು, ಈ ಆಲೋಚನೆಯ ಭಾಗವಾಗಿ ಚಾಮರಾಜನಗರದಲ್ಲಿ "ನಮ್ದು" ಎಂಬ ಮಾರುಕಟ್ಟೆಯನ್ನು ಆರಂಭಿಸಲಾಗಿದೆ.
ಮಧ್ಯವರ್ತಿಗಳಿಲ್ಲದ, ನೇರಮಾರುಕಟ್ಟೆಯ ಕನಸು ಕಂಡಿದ್ದ, ಪ್ರೊ.ಎಂ.ಡಿ ನಂಜುಂಡಸ್ವಾಮಿ ಅವರ ಆಶಯ ಈ ಮೂಲಕ ನೆರವೇರುವ ಹಾದಿಯಲ್ಲಿದೆ. ಸಹಕಾರಿ ವ್ಯವಸ್ಥೆಯಲ್ಲಿ ಯಶಸ್ಸು ಕಂಡಿರುವ ಹಾಲು ಮತ್ತು ಹಾಲಿನ ಉಪ ಉತ್ಪನ್ನಗಳ ರೀತಿಯೇ ರೈತರು ಬೆಳೆಯುವ ಎಲ್ಲಾ ರೀತಿಯ ದವಸ ಧಾನ್ಯಗಳು, ಹಣ್ಣು ತರಕಾರಿಗಳು ಮತ್ತು ಅದರ ಉಪ ಉತ್ಪನ್ನಗಳನ್ನು ಒಂದೇ ಬ್ರ್ಯಾಂಡಿನಡಿ ಗ್ರಾಹಕರಿಗೆ ನೇರ ಮಾರಾಟ ಮಾಡುವ ವ್ಯವಸ್ಥೆಯನ್ನು ಕಟ್ಟುವ ಕನಸು ಕಂಡಿದ್ದರು.
ವಿಶೇಷ ಲೇಖನ: ರೈತರಿಗೆ "ಕೊರೊನಾ ರಿಲೀಫ್ ಫಂಡ್" ಅತಿ ಅಗತ್ಯ
ಇದೀಗ ರೈತರು ತಾವು ಉತ್ಪಾದಿಸಿದ ಆಹಾರ ಬೆಳೆಗಳಿಗೆ ನಮ್ದು ಎಂಬ ಬ್ರಾಂಡ್ ನಡಿ ಗ್ರಾಹಕರಿಗೆ ನೇರ ಮಾರಾಟ ಮಾಡುವ ಕಲ್ಪನೆಯಲ್ಲಿ ರಾಜ್ಯದಲ್ಲೆ ಮೊದಲ ಬಾರಿಗೆ ಚಾಮರಾಜನಗರದಲ್ಲಿ ನಮ್ದು ಮಾರುಕಟ್ಟೆ ಮಳಿಗೆ ಆರಂಭಿಸಲಾಗಿದೆ. ಕರ್ನಾಟಕ ರಾಜ್ಯ ರೈತ ಸಂಘ, ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರೇ ಸ್ಥಾಪಿಸಿದ ಅಮೃತಭೂಮಿ ಅಂತಾರಾಷ್ಟ್ರೀಯ ಸುಸ್ಥಿರ ಅಭಿವೃದ್ಧಿ ಕೇಂದ್ರ, ಮೈಸೂರಿನ ನಿಸರ್ಗ ಟ್ರಸ್ಟ್, ಹೊನ್ನೂರಿನ ನಿಸರ್ಗ ನೈಸರ್ಗಿಕ ಸಾವಯವ ಕೃಷಿಕರ ಸಂಘ, ಮೇಲಾಜಿಪುರದ ಸಾವಯವ ಕೃಷಿಕರ ಸಂಘ, ವಡಕೆಹಳ್ಳದ ಮಹದೇಶ್ವರ ಸಾವಯವ ಕೃಷಿಕರ ಸಂಘಗಳ ಸಹಯೋಗದಲ್ಲಿ ನಮ್ದು ಮಾರುಕಟ್ಟೆ ಅಕ್ಟೋಬರ್ 2ರಿಂದ ಆರಂಭಗೊಂಡಿದೆ.
ಮಧ್ಯವರ್ತಿಗಳ ಹಾವಳಿಯಿಂದ ತತ್ತರಿಸಿರುವ ರೈತ ಸಮುದಾಯಕ್ಕೆ ಶಾಶ್ವತ ಪರಿಹಾರದ ಅವಶ್ಯಕತೆ ಹಿಂದೆಂದಿಗಿಂತ ಈಗ ಹೆಚ್ಚಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಎಪಿಎಂಸಿ ಕಾಯಿದೆಗೆ ತಂದಿರುವ ತಿದ್ದುಪಡಿಯೂ ರೈತರಿಗಿದ್ದ ಅಲ್ಪಸ್ವಲ್ಪ ಮಾರುಕಟ್ಟೆಯ ಭದ್ರತೆಯನ್ನು ಕಸಿದುಕೊಂಡು ಕೃಷಿ ಮಾರುಕಟ್ಟೆಯನ್ನು ಸಂಪೂರ್ಣ ಖಾಸಗೀಕರಣಗೊಳಿಸಲು ಹೊರಟಿದೆ. ಇಂಥ ಸಮಯದಲ್ಲಿ, ಈ ರೀತಿಯ ಹೊಸ ಆಲೋಚನೆಯನ್ನು ರೈತ ಸಂಘಟನೆಗಳು ಕಾರ್ಯರೂಪಕ್ಕೆ ತಂದಿವೆ.
ಗ್ರಾಹಕರಿಗೆ ವಿಷಮುಕ್ತ ಆಹಾರ ನೀಡುವುದು ನಮ್ದು ಮಾರುಕಟ್ಟೆ ಉದ್ದೇಶವಾಗಿದ್ದು, ಇಲ್ಲಿ ರೈತರು ಬೆಳೆದ ಸಿರಿಧಾನ್ಯಗಳು, ದವಸ ಧಾನ್ಯಗಳು, ಹಣ್ಣು, ತರಕಾರಿ, ಸೊಪ್ಪು, ಜೇನುತುಪ್ಪ, ಬೆಲ್ಲ, ಗಾಣದಲ್ಲಿ ತಯಾರಿಸಿದ ಎಣ್ಣೆ ಮೊದಲಾದ ಆಹಾರ ಪದಾರ್ಥಗಳನ್ನು ರೈತರೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಿದ್ದಾರೆ.