ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಗರಹೊಳೆ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಯಿಂದ ಬೆಳೆ ನಾಶ

|
Google Oneindia Kannada News

ಮೈಸೂರು, ಸೆಪ್ಟೆಂಬರ್ 28: ಒಂದೆಡೆ ರೈತರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬೀದಿಗಿಳಿದು ಹೋರಾಡುತ್ತಿದ್ದರೆ, ಮತ್ತೊಂದೆಡೆ ಕಾಡಂಚಿನ ರೈತರು ವನ್ಯ ಪ್ರಾಣಿಗಳಿಂದ ತಮ್ಮ ಬೆಳೆಯನ್ನು ರಕ್ಷಿಸಲು ನಿತ್ಯ ಹೋರಾಟ ಮಾಡುತ್ತಿದ್ದಾರೆ. ಬೆಳೆಯನ್ನು ಉಳಿಸಿಕೊಳ್ಳುವುದೇ ರೈತರಿಗೆ ಸವಾಲಾಗಿದೆ.

ಮೈಸೂರು ಜಿಲ್ಲೆಯ ನಾಗರಹೊಳೆ ಅರಣ್ಯ ಪ್ರದೇಶದಂಚಿನ ಪ್ರದೇಶದಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರೈತರ ಬದುಕು ಒಂದು ಹೋರಾಟವಾಗಿದೆ ಎಂದರೆ ತಪ್ಪಾಗಲಾರದು. ಈ ವ್ಯಾಪ್ತಿಯಲ್ಲಿ ಹಲವು ಗ್ರಾಮಗಳು ಬರುತ್ತಿದ್ದು, ಇಲ್ಲಿನ ರೈತರು ಕಷ್ಟಪಟ್ಟು ವಿವಿಧ ಬೆಳೆಗಳನ್ನು ಬೆಳೆದರೂ ಅದು ಫಸಲಿಗೆ ಬರುತ್ತಿದ್ದಂತೆಯೇ ಕಾಡುಪ್ರಾಣಿಗಳು ದಾಳಿ ಮಾಡಿ ನಾಶ ಮಾಡುತ್ತಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಂಚಿನ ಹನಗೋಡು ಹೋಬಳಿಯ ಹಲವು ಗ್ರಾಮಗಳ ಜನರು ಕಾಡಾನೆ ಮತ್ತು ಚಿರತೆಯ ಹಾವಳಿಯಿಂದ ಬೇಸತ್ತಿದ್ದಾರೆ.

ಗುಂಡ್ಲುಪೇಟೆಯಲ್ಲಿ ಮನೆಯೊಳಗೇ ಅಡಗಿ ಕುಳಿತಿದ್ದ ಚಿರತೆ!ಗುಂಡ್ಲುಪೇಟೆಯಲ್ಲಿ ಮನೆಯೊಳಗೇ ಅಡಗಿ ಕುಳಿತಿದ್ದ ಚಿರತೆ!

ಹಿಂದೆ ಈ ವ್ಯಾಪ್ತಿಯ ಗ್ರಾಮಗಳ ರೈತರನ್ನು ಹುಲಿ ಕಾಟ ಇನ್ನಿಲ್ಲದಂತೆ ಕಾಡಿತ್ತು. ಆದರೆ ಅದನ್ನು ಸೆರೆಹಿಡಿದ ಬಳಿಕ ರೈತರು ನೆಮ್ಮದಿಯುಸಿರು ಬಿಟ್ಟಿದ್ದರು. ಆದರೆ ಕಾಡಾನೆಗಳ ಕಾಟ ಮಾತ್ರ ನಿಂತಿರಲಿಲ್ಲ. ರಾತ್ರಿ ವೇಳೆ ನಾಗರಹೊಳೆ ಅರಣ್ಯದಿಂದ ಬರುವ ಕಾಡಾನೆಗಳು ಜಮೀನಿಗೆ ನುಗ್ಗಿ ಬಾಳೆ ಸೇರಿದಂತೆ ಇತರೆ ಬೆಳೆಗಳನ್ನು ತಿಂದು, ತುಳಿದು ನಾಶ ಮಾಡಿ ಬಿಡುತ್ತಿದ್ದವು.

 ಕಾಡಾನೆಗಳಿಂದ ಬೆಳೆ ನಾಶ

ಕಾಡಾನೆಗಳಿಂದ ಬೆಳೆ ನಾಶ

ಕಾಡಾನೆಗಳ ಹಾವಳಿ ತಡೆಗೆ ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಮತ್ತೆ ಕಾಡಾನೆಗಳ ಉಪಟಳ ಮುಂದುವರಿದಿದ್ದು ಹಿಂಡು ಹಿಂಡಾಗಿ ಜಮೀನುಗಳಿಗೆ ನುಗ್ಗಿದ ಕಾಡಾನೆಗಳು ಅಪಾರ ಪ್ರಮಾಣದ ಬೆಳೆ ತಿಂದು ನಾಶಪಡಿಸಿವೆ. ಇದರಿಂದ ಬೆಳೆ ಬೆಳೆದ ರೈತರು ನಷ್ಟ ಅನುಭವಿಸುತ್ತಿದ್ದಾರೆ.

ಕಾಡಾನೆಗಳ ದಾಳಿಯಿಂದ ಹನಗೋಡು ಹೋಬಳಿಯ ಮುದಗನೂರು ಗ್ರಾಮದ ಲಕ್ಷ್ಮಮ್ಮ ಬಸವೇಗೌಡರಿಗೆ ಸೇರಿದ ಬಾಳೆತೋಟ ನಾಶವಾಗಿದೆ. ಬಾಳೆ ತೋಟಕ್ಕೆ ನುಗ್ಗಿದ ಕಾಡಾನೆಗಳು ಫಸಲಿಗೆ ಬಂದಿದ್ದ ಬಾಳೆ ತಿಂದು ತುಳಿದು ಅಪಾರ ಪ್ರಮಾಣದಲ್ಲಿ ಬೆಳೆಯನ್ನು ನಾಶಪಡಿಸಿವೆ. ಇದಲ್ಲದೆ ಇದೇ ಗ್ರಾಮದ ರೈತ ರಾಜೇಗೌಡ, ಪುಟ್ಟಮ್ಮರಿಗೆ ಸೇರಿದ ಶುಂಠಿಬೆಳೆ, ಚಲುವಯ್ಯ, ಸೋಮಶೇಖರ್, ಶಿವನಂಜೇಗೌಡ, ಜವರೇಗೌಡರಿಗೆ ಸೇರಿದ ಮುಸುಕಿನ ಜೋಳ ಬೆಳೆಯನ್ನು ತಿಂದು ತುಳಿದು ನಾಶಪಡಿಸಿದ್ದಲ್ಲದೆ, ತೋಟಕ್ಕೆ ಅಳವಡಿಸಿದ ಸ್ಪಿಂಕ್ಲರ್ ಪೈಪ್ ಗಳನ್ನು ತುಳಿದು ನಾಶಪಡಿಸಿವೆ.
 ಜಾನುವಾರುಗಳ ಮೇಲೆ ಚಿರತೆ ಕಣ್ಣು

ಜಾನುವಾರುಗಳ ಮೇಲೆ ಚಿರತೆ ಕಣ್ಣು

ಇನ್ನೊಂದೆಡೆ ಚಿರತೆಯ ಹಾವಳಿಯೂ ಆರಂಭವಾಗಿದ್ದು, ಅಬ್ಬೂರು ಗ್ರಾಮದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಕರುವಿನ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿರುವುದು ರೈತರಲ್ಲಿ ಭಯವನ್ನು ಹುಟ್ಟುಹಾಕಿದೆ.

ಚಿರತೆ ದಾಳಿಗೆ ಬಲಿಯಾದ ಕರು ಗ್ರಾಮದ ಯ.ಬೀರೇಗೌಡ ಎಂಬುವವರಿಗೆ ಸೇರಿದ್ದು, ಶೆಟ್ಟಹಳ್ಳಿ ಅರಣ್ಯ ಪ್ರದೇಶದಿಂದ ಹೊರ ಬಂದ ಚಿರತೆ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕರುವಿನ ಮೇಲೆ ದಾಳಿ ನಡೆಸಿ ಕೊಂದು ಭಾಗಶಃ ಕೊಟ್ಟಿಗೆಯಲ್ಲಿಯೇ ತಿಂದುಹಾಕಿದೆ. ಆದರೆ ಚಿರತೆಯನ್ನು ಕಂಡು ನಾಯಿಗಳು ಬೊಗಳಿದ್ದರಿಂದ ಮನೆಯವರು ಎಚ್ಚರಗೊಂಡು ಕೊಟ್ಟಿಗೆಗೆ ಬರುವಷ್ಟರಲ್ಲಿ ಚಿರತೆ ಕಾಡಿನತ್ತ ಓಡಿಹೋಗಿದೆ. ಆದರೆ ಜಾನುವಾರು ಬೇಟೆಯಾಡಿ ರಕ್ತದ ರುಚಿ ನೋಡಿರುವ ಚಿರತೆ ಮತ್ತೆ ರಾತ್ರಿ ಹೊತ್ತು ಕೊಟ್ಟಿಗೆಗೆ ನುಗ್ಗಿ ಜಾನುವಾರುಗಳ ಮೇಲೆ ದಾಳಿ ಮಾಡಬಹುದೆಂಬ ಭಯ ರೈತರನ್ನು ಕಾಡುತ್ತಿದೆ.

 ಗುಂಡ್ಲುಪೇಟೆ ಪಟ್ಟಣದಲ್ಲೇ ಪ್ರತ್ಯಕ್ಷವಾದ ಚಿರತೆ ಗುಂಡ್ಲುಪೇಟೆ ಪಟ್ಟಣದಲ್ಲೇ ಪ್ರತ್ಯಕ್ಷವಾದ ಚಿರತೆ

 ಭಯದಲ್ಲಿಯೇ ದಿನ ಕಳೆಯುತ್ತಿರುವ ರೈತರು

ಭಯದಲ್ಲಿಯೇ ದಿನ ಕಳೆಯುತ್ತಿರುವ ರೈತರು

ವಿಷಯ ತಿಳಿದು ಘಟನಾ ಸ್ಥಳಕ್ಕೆ ಹುಣಸೂರು ವನ್ಯಜೀವಿ ವಲಯದ ಡಿಆರ್ಎಫ್ಒ ಸಿದ್ದರಾಜು ಭೇಟಿ ನೀಡಿ ಮಹಜರು ನಡೆಸಿ ಕ್ರಮದ ಭರವಸೆ ನೀಡಿದ್ದಾರೆ. ಆದರೆ ಗ್ರಾಮದ ಜನರಲ್ಲಿ ಚಿರತೆಯ ಭಯ ಮಾತ್ರ ದೂರವಾಗಿಲ್ಲ. ಹೀಗಾಗಿ ಅವರು ಭಯದಲ್ಲಿಯೇ ದಿನ ಕಳೆಯುತ್ತಿದ್ದಾರೆ.

ಈ ಕುರಿತಂತೆ ಗ್ರಾಮದ ನಿವಾಸಿ ಕುಮಾರ್ ಎಂಬುವರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಭಾಗದಲ್ಲಿ ಚಿರತೆ ಸೇರಿದಂತೆ ವನ್ಯಜೀವಿಗಳ ಹಾವಳಿ ಮಿತಿ ಮೀರಿ, ಆಗಿಂದಾಗ್ಗೆ ಸಾಕು ಪ್ರಾಣಿಗಳನ್ನು ಹಾಡುಹಗಲೇ ಕೊಂದು ಹಾಕುತ್ತಿದೆ. ಈ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಬೋನಿಟ್ಟು ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ.

 ಅರಣ್ಯಾಧಿಕಾರಿಗಳಿಂದ ಸ್ಥಳ ಪರಿಶೀಲನೆ

ಅರಣ್ಯಾಧಿಕಾರಿಗಳಿಂದ ಸ್ಥಳ ಪರಿಶೀಲನೆ

ಕಾಡಾನೆ ದಾಳಿ ಮಾಡಿ ಬೆಳೆ ನಷ್ಟಪಡಿಸಿರುವ ಮುದಗನೂರು ಗ್ರಾಮಕ್ಕೆ ಭೇಟಿ ನೀಡಿರುವ ವೀರನಹೋಸಹಳ್ಳಿ ವಲಯದ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಆದರೆ ಈ ಕುರಿತಂತೆ ಮಾತನಾಡಿರುವ ಎಪಿಎಂಸಿ ಅಧ್ಯಕ್ಷ ಮುದಗನೂರು ಸುಭಾಷ್ ಅವರು ಬೆಳೆ ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರವನ್ನು ಶೀಘ್ರದಲ್ಲೇ ನೀಡಬೇಕೆಂದು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಇನ್ನಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ವನ್ಯ ಪ್ರಾಣಿಗಳು ಕಾಡಿನಿಂದ ನಾಡಿಗೆ ಬರುವುದನ್ನು ತಡೆಗಟ್ಟುವ ಮೂಲಕ ರೈತರ ಕಷ್ಟಪಟ್ಟು ಬೆಳೆಯನ್ನು ರಕ್ಷಿಸುವುದು ಅಗತ್ಯವಾಗಿದೆ.

English summary
The lives of the farmers who are living in the Nagarahole forest area of Mysuru district is a struggle due to wild animals attack,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X