ತಂಬಾಕು ಬೆಳೆಗಾರರ ಸಂಕಷ್ಟಕ್ಕೆ ಮಿಡಿದ ವಿದ್ಯಾರ್ಥಿಗಳ ಮನ
ಮೈಸೂರು, ಜುಲೈ 3: ಮೈಸೂರು ಜಿಲ್ಲೆಯ ಕೆಲವು ರೈತರಿಗೆ ತಂಬಾಕು ಬೆಳೆಯೇ ಜೀವನಾಧಾರವಾಗಿದೆ. ಪ್ರತಿ ವರ್ಷವೂ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಬೆಳೆ ಬೆಳೆಯುತ್ತಾರೆಯಾದರೂ ಒಂದಲ್ಲ ಒಂದು ರೋಗಗಳ ಕಾರಣದಿಂದ ಸಂಕಷ್ಟ ಅನುಭವಿಸುವಂತಾಗಿದೆ.
ಈಗ ತಂಬಾಕು ಬೆಳೆಗಾರರ ಸಂಕಷ್ಟಕ್ಕೆ ಈ ಬಾರಿ ಮೈಸೂರು ವಿಶ್ವವಿದ್ಯಾಲಯ ಹಿರಿಯ ವಿದ್ಯಾರ್ಥಿಗಳ ಸಂಘವು ಮುಂದಾಗಿದ್ದು, ರೋಗ ಗುಣಪಡಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿರುವುದು ರೈತರಲ್ಲಿ ಹರ್ಷ ತಂದಿದೆ.
ನಂಜನಗೂಡಿನಲ್ಲಿ ಮೆಕಾನಿಕಲ್ ಎಂಜಿನಿಯರ್ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ
ಮೈಸೂರು ಜಿಲ್ಲೆಯ ಹುಣಸೂರು, ಪಿರಿಯಾಪಟ್ಟಣ, ಕೆ.ಆರ್ ನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಇಲ್ಲಿನ ರೈತರು ಹಿಂದಿನಿಂದಲೂ ಹೆಚ್ಚಾಗಿ ತಂಬಾಕು ಬೆಳೆಯುತ್ತಿದ್ದು, ಕಳೆದ ವರ್ಷ ತಂಬಾಕು ಬೆಳೆದು ರೈತ ಒಂದಷ್ಟು ನಷ್ಟ ಅನುಭವಿಸಿದ್ದರೂ ಕೂಡ ಲೈಸನ್ಸ್ ಹೊಂದಿರುವ ಬೆಳೆಗಾರರು ಈ ಬಾರಿಯೂ ತಂಬಾಕು ಬೆಳೆದಿದ್ದಾರೆ. ಇದೀಗ ತಂಬಾಕು ಬೆಳೆ ಹುಲುಸಾಗಿ ಬೆಳೆದಿದೆ. ಆದರೆ ಇದೇ ಸಮಯದಲ್ಲಿ ಬೆಳೆಗೆ ಏನಾದರೊಂದು ರೋಗ ಬಂದು ಗಿಡ ಸಾಯುವುದು, ಎಲೆಗಳು ಒಣಗುವುದು ಸಹಜವಾಗಿ ನಡೆಯುತ್ತದೆ.
ಕೂಲಿ ಕಾರ್ಮಿಕರ ಸಮಸ್ಯೆ ತಂಬಾಕು ಬೆಳೆಗಾರರನ್ನು ಕಾಡುತ್ತಿದೆ
ಹಿಂದಿನ ದಿನಗಳಿಗೆ ಹೋಲಿಸಿದರೆ ಈಗ ತಂಬಾಕು ಬೆಳೆಯುವುದು ಅಷ್ಟು ಸುಲಭವಲ್ಲ. ಅದಕ್ಕೆ ತಗಲುವ ರೋಗವನ್ನು ನಿಯಂತ್ರಿಸುವುದಲ್ಲದೆ, ಗೊಬ್ಬರ ನೀರು ಹಾಕಿ ಬೆಳೆಸುವುದು ಕೂಡ ಕಷ್ಟವಾಗಿ ಪರಿಣಮಿಸುತ್ತಿದೆ. ಇತ್ತೀಚಿಗಿನ ದಿನಗಳಲ್ಲಿ ಕೂಲಿ ಕಾರ್ಮಿಕರ ಸಮಸ್ಯೆ ತಂಬಾಕು ಬೆಳೆಗಾರರನ್ನು ಕಾಡುತ್ತಿದೆ.
ಆದರೂ ಕೆಲವು ಜಮೀನುಗಳಲ್ಲಿ ತಂಬಾಕು ಬಿಟ್ಟರೆ ಬೇರೆ ಬೆಳೆ ಬೆಳೆಯುವುದು ಸಾಧ್ಯವಾಗದ ಮಾತಾಗಿರುವುದರಿಂದ ಅನಿವಾರ್ಯವಾಗಿ ಬೆಳೆಯುತ್ತಿದ್ದಾರೆ. ಇದೀಗ ಪಿರಿಯಾಪಟ್ಟಣ ತಾಲೂಕಿನ ಗೊರಳ್ಳಿ, ಸಾಲುಕೊಪ್ಪಲು, ಜೋಗನಹಳ್ಳಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬೆಳೆದಿದ್ದ ತಂಬಾಕು ಬೆಳೆಗೆ ವಿಚಿತ್ರವಾದ ರೋಗ ತಗುಲಿದೆ. ಇದರಿಂದ ಬೆಳೆ ಸಂಪೂರ್ಣ ಕೈಬಿಟ್ಟು ಹೋಗುವ ಹಂತಕ್ಕೆ ಬಂದಿರುವುದರಿಂದ ರೈತರು ಆತಂಕಕ್ಕೀಡಾಗಿದ್ದರು.
ತಂಬಾಕು ಬೆಳೆಗಾರರಿಗೆ ಪರಿಹಾರ ಕಂಡುಹಿಡಿಯಲು ನಿರ್ಧಾರ
ಸಾಲ ಮಾಡಿ ಬೆಳೆದ ಬೆಳೆ ತಮ್ಮ ಕೈಬಿಡುತ್ತಿದೆ ಎಂದರಿತ ರೈತರು ಮುಂದೇನು ಮಾಡುವುದೆಂದು ಯೋಚಿಸುವಂತಾಗಿತ್ತು. ಇದಕ್ಕೆ ಕಾರಣವೂ ಇತ್ತು ಈಗಾಗಲೇ ಕೊರೊನಾ ವೈರಸ್ ನಿಂದಾಗಿ ಈ ಹಿಂದೆ ಬೆಳೆದ ಬೆಳೆಯೂ ಅವರಿಗೆ ಕೈಕೊಟ್ಟಿತ್ತು. ಇದೀಗ ವಾಣಿಜ್ಯ ಬೆಳೆಯಾದ ತಂಬಾಕು ಕೈಕೊಟ್ಟರೆ ತಮ್ಮ ಬದುಕು ಬೀದಿಗೆ ಬೀಳುತ್ತದೆ ಎಂಬ ಚಿಂತೆಯಲ್ಲಿದ್ದರು.
ಇವರ ಕಷ್ಟವನ್ನರಿತ ಮೈಸೂರು ವಿಶ್ವವಿದ್ಯಾನಿಲಯದ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಡಾ.ವಸಂತ ಕುಮಾರ ತಿಮಕಾಪುರ ಅವರ ನೇತೃತ್ವದಲ್ಲಿ ಸಭೆ ನಡೆಸಿ ತಂಬಾಕು ಬೆಳೆಗಾರರಿಗೆ ಪರಿಹಾರ ಕಂಡು ಹಿಡಿದು ಅವರ ಜೀವನ ಸರಿಪಡಿಸಲು ನಿರ್ಧರಿಸಿದ್ದು, ಅದರಂತೆ ಸಂಘದ ಸದಸ್ಯರೊಡನೆ ರೈತರ ಜಮೀನಿಗೆ ಧಾವಿಸಿ ಬೆಳೆಯ ಪರಿಶೀಲನೆ ನಡೆಸಿದ್ದಾರೆ.
ರಾಸಾಯನಿಕ ಔಷಧಿ ಸಿಂಪಡಿಸುವ ಕೆಲಸ ಮಾಡಿದ್ದಾರೆ
ಅಲ್ಲದೆ, ತಂಬಾಕು ಬೆಳೆಗೆ ಬಂದಿದ್ದ ರೋಗವನ್ನು ತಕ್ಷಣ ಗುರುತಿಸಿ ಎಲ್ಲ ರೈತರಿಗೆ ಅವರ ಬೆಳೆಗೆ ಬಂದಿರುವ ರೋಗವನ್ನು ಸಂಘದ ಖರ್ಚಿನಲ್ಲಿ ಗುಣಪಡಿಸಿ ಬೆಳೆಯನ್ನು ಉಳಿಸಿಕೊಡಲು ಮುಂದಾಗಿದ್ದಾರೆ. ಇದು ರೈತರಲ್ಲಿ ನೆಮ್ಮದಿ ತಂದಿದೆ.
ಈಗಾಗಲೇ ಸಂಘದ ಸದಸ್ಯರು ಕಾರ್ಯಪ್ರವೃತ್ತವಾಗಿದ್ದು, ಸಹಾಯಕ ವಿಜ್ಞಾನಿಗಳ ಸಹಾಯದಿಂದ ರೋಗಪೀಡಿತ ತಂಬಾಕು ಬೆಳೆಗೆ ರಾಸಾಯನಿಕ ಔಷಧಿ ಸಿಂಪಡಿಸುವ ಕೆಲಸ ಮಾಡಿದ್ದಾರೆ. ಇದಾದ ಮೂರು ವಾರಗಳಲ್ಲಿ ರೋಗಪೀಡಿತ ಗಿಡಗಳು ಚೇತರಿಸಿಕೊಂಡಿರುವುದು ರೈತರಲ್ಲಿ ಸಂತಸ ತಂದಿದೆ.
ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯ ಶ್ಲಾಘನೀಯ
ಕಳೆದ ಐವತ್ತು ವರ್ಷಗಳಲ್ಲಿ ಕಾಣಿಸದಿದ್ದ ರೋಗಕ್ಕೆ ಸ್ಪಂದಿಸಿ ರೈತರಿಗೆ ಉಚಿತವಾಗಿ ರಾಸಾಯನಿಕ ಔಷಧಿಗಳನ್ನು ನೀಡಿ ಬೆಳೆಯನ್ನು ಉಳಿಸಿ, ರೈತರ ಬದುಕಿಗೂ ಆಸರೆಯಾಗಿರುವುದು ಮೈಸೂರು ವಿಶ್ವವಿದ್ಯಾನಿಲಯ ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯ ಶ್ಲಾಘನೀಯವಾಗಿದೆ. ಇನ್ನೊಂದೆಡೆ ಕಳೆನಾಶಕವನ್ನು ಕೀಟನಾಶಕವೆಂದು ತಿಳಿದು ಹೊಗೆಸೊಪ್ಪಿನ ಬೆಳೆಗೆ ಸಿಂಪಡಿಸಿ ಬೆಳೆಯನ್ನು ತನ್ನ ಕೈಯಾರ ಸುಟ್ಟುಕೊಂಡ ಹುಣಸೂರು ತಾಲ್ಲೂಕಿನ ಮಾರಗೋಡನಹಳ್ಳಿಯ ಒಬ್ಬ ಬಡರೈತರ ಬೆಳೆಗೆ, ಅದೇ ರೀತಿ ಪಿರಿಯಾಪಟ್ಟಣ ತಾಲೂಕಿನ ಅಂಕನಹಳ್ಳಿ ಗ್ರಾಮದ ಶುಂಠಿ ಬೆಳೆಗಾರನಿಗೂ ಸಹಾಯ ಮಾಡುವ ಮೂಲಕ ಅಪರೂಪದ ಸಮಾಜ ಸೇವೆ ಮಾಡಿ ರೈತರಿಗೆ ಆಸರೆಯಾಗಿರುವುದು ಉಳಿದವರಿಗೆ ಮಾದರಿಯಾಗಿದೆ.