ಯೂರಿಯ ರಿಪ್ಯಾಕಿಂಗ್ ಮಾಡಿ ಅಧಿಕ ದರಕ್ಕೆ ಮಾರಾಟ: ಮೂವರ ಬಂಧನ
ಮೈಸೂರು, ಆಗಸ್ಟ್ 27: ರೈತರಿಗೆ ಸಬ್ಸಿಡಿ ದರದಲ್ಲಿ ನೀಡುವ ಯೂರಿಯ ಗೊಬ್ಬರವನ್ನು ಖರೀದಿಸಿ ಅಕ್ರಮವಾಗಿ ಬೇರೆ ಕಂಪನಿಯ ಹೆಸರಿನಲ್ಲಿ ಮಾರಾಟ ಮಾಡಲು ದಾಸ್ತಾನು ಮಾಡಿದ್ದ 726 ಚೀಲ ರಸಗೊಬ್ಬರವನ್ನು ವಶಪಡಿಸಿಕೊಳ್ಳಲಾಗಿದೆ.
ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಯೂರಿಯ ರಸಗೊಬ್ಬರವನ್ನು ವಶಪಡಿಸಿಕೊಂಡು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದಿದೆ.
ಗೆಳತಿಯ ನಿಶ್ಚಿತಾರ್ಥದ ಸಮಯದಲ್ಲಿ ಒಡವೆ ಕಳ್ಳತನ; ಯುವತಿ ಬಂಧನ
ಬಂಧಿತರನ್ನು ಕೇರಳದ ರೋಹಿ ಅಂಥೋಣಿ, ನೌಶಾದ್, ಕೊಡಗು ಜಿಲ್ಲೆಯ ಸಿದ್ದಾಪುರದ ಅಂಶಾದ್ ಎಂದು ಗುರುತಿಸಲಾಗಿದ್ದು, ಇವರು ಪಿರಿಯಾಪಟ್ಟಣ ತಾಲೂಕಿನ ಕುಂದನಹಳ್ಳಿ ಸಮೀಪದ ಜಮೀನೊಂದರಲ್ಲಿ ಶೆಡ್ ಬಾಡಿಗೆಗೆ ಪಡೆದು, ನಾಲ್ಕು ಲಾರಿಗಳಲ್ಲಿ ರಸಗೊಬ್ಬರ ತಂದು ದಾಸ್ತಾನು ಮಾಡಿದ್ದರು.
ಅದರಲ್ಲಿ ಅರ್ಧದಷ್ಟು ಮೂಟೆಗಳನ್ನು ಬೇರೊಂದು ಹೆಸರಿನ ಕಂಪನಿಯ ಚೀಲಗಳಿಗೆ ಮರು ಪ್ಯಾಕಿಂಗ್ ಮಾಡಲು ತುಂಬಿಸಿಟ್ಟಿದ್ದರು. ಖಚಿತ ಸುಳಿವಿನ ಮೇರೆಗೆ ದಾಳಿ ನಡೆಸಿದ ತಹಶೀಲ್ದಾರ್ ಶ್ವೇತಾ ಎನ್.ರವೀಂದ್ರ ಹಾಗೂ ಪೊಲೀಸ್ ತಂಡ ಸ್ಥಳದಲ್ಲೇ ಮೂವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದೆ.