ಮುಂಗಾರು ಹಂಗಾಮಿನ ರೈತರ ಬೆಳೆ ಸಮಿಕ್ಷೆ ಆ್ಯಪ್ ಬಿಡುಗಡೆ
ಮೈಸೂರು,ಆಗಸ್ಟ್ 14: ಕೃಷಿ ಇಲಾಖೆಯು ಮುಂಗಾರು ಹಂಗಾಮಿನ ರೈತರ ಬೆಳೆ ಸಮಿಕ್ಷೆ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಬಿಡುಗಡೆ ಮಾಡಿದೆ.
2021-22ನೇ ಸಾಲಿನ ಬೆಳೆ ಸಮೀಕ್ಷೆ ಕಾರ್ಯಕ್ರಮದ ಭಾಗವಾಗಿ ಮುಂಗಾರು ಹಂಗಾಮಿನ ರೈತರ ಬೆಳೆ ಸಮಿಕ್ಷೆ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಬಿಡುಗಡೆ ಮಾಡಿದ್ದು, ರೈತರು ಆ್ಯಪ್ ಅನ್ನು ಬಳಸಿಕೊಂಡು ಸ್ವತಃ ರೈತರೇ ತಮ್ಮ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳ ಸಮೀಕ್ಷೆಯನ್ನು ಮಾಡಿ ವಿವರಗಳನ್ನು ಅಪ್ಲೋಡ್ ಮಾಡಬಹುದು.
ಆ್ಯಪ್ ವೈಶಿಷ್ಟ್ಯತೆಗಳು: ರೈತರ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ಮಾಹಿತಿಯನ್ನು ರೈತರೇ ನಿಖರವಾಗಿ ದಾಖಲಿಸಬಹುದು. ಸದರಿ ಬೆಳೆ ಸಮೀಕ್ಷೆ ಮಾಹಿತಿಯನ್ನು ಬೆಳೆ ವಿಮೆ ಪರಿಹಾರ, ಬೆಳೆ ನಷ್ಟ ಪರಿಹಾರ, ಬೆಂಬಲ ಬೆಲೆ ಯೋಜನೆ ಮತ್ತು ಸರ್ಕಾರದ ವಿವಿಧ ಯೋಜನೆಗಳಡಿ ರೈತರಿಗೆ ಸವಲತ್ತುಗಳನ್ನು ಒದಗಿಸಲು ಮತ್ತು RTCಯಲ್ಲಿ ಬೆಳೆ ಮಾಹಿತಿ ಅಳವಡಿಸಲು ಬಳಸಬಹುದು.
ಬೆಳೆ ಸಮೀಕ್ಷೆ ಮಾಹಿತಿ ದಾಖಲಿಸಲು ಅವಕಾಶ
ಆಗಸ್ಟ್ 31ರವರೆಗೆ ರೈತರೆ ತಮ್ಮ ಸ್ವಂತ ಜಮೀನಿನ ಬೆಳೆ ಸಮೀಕ್ಷೆ ಮಾಹಿತಿ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ರೈತರ ಮುಂಗಾರು ಬೆಳೆ ಸಮೀಕ್ಷೆ 2021-22 ಆ್ಯಪ್ ಅನ್ನು ಸಾರ್ವಜನಿಕರು ಗೂಗಲ್ ಪ್ಲೇ ಸ್ಟೋರ್ ನಲ್ಲಿ "Kharif Season Farmer Crop Survey 2021-22" ಎಂದು ಟೈಪ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬೇಕು.
ರೈತರು ತಾವು ಬೆಳೆದ ಬೆಳೆ ವಿವರಗಳನ್ನು ಅಪ್ಲೋಡ್ ಮಾಡದಿದ್ದಲ್ಲಿ ಸರ್ಕಾರದಿಂದ ವಿವಿಧ ಯೋಜನೆಗಳಡಿ ನೀಡುವ ಸವಲತ್ತುಗಳನ್ನು ಪಡೆಯುವುದರಿಂದ ವಂಚಿತರಾಗುವ ಸಂಭವವಿರುತ್ತದೆ. ಆದ್ದರಿಂದ, ಎಲ್ಲಾ ರೈತ ಬಾಂಧವರು ಹೆಚ್ಚಿನ ಆಸಕ್ತಿಯೊಂದಿಗೆ ಪ್ರಸಕ್ತ ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಂಡು ತಮ್ಮ ಜಮೀನಿನ ಬೆಳೆ ಮಾಹಿತಿಯನ್ನು ತಾವೇ ಖುದ್ದಾಗಿ ದಾಖಲಿಸಬೇಕು.
ರೈತ ಸಂಪರ್ಕ ಕೇಂದ್ರ ಸಂಪರ್ಕಿಸಿ
ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ, ಕೃಷಿ, ತೋಟಗಾರಿಕೆ, ರೇಷ್ಮೆ, ಕಂದಾಯ ಇಲಾಖೆ ಕಛೇರಿ ಅಥವಾ ಆಯಾ ಗ್ರಾಮಗಳಿಗೆ ನಿಯೋಜಿಸಲಾಗಿರುವ ಖಾಸಗಿ ನಿವಾಸಿಗಳನ್ನು ಅಥವಾ ಬೆಳೆ ಸಮೀಕ್ಷೆ ಸಹಾಯವಾಣಿ ಸಂಖ್ಯೆ: 8448447715 ಅನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳೆಗಳ ಮಾಹಿತಿ ಅಪ್ಲೋಡ್, ಅನುಕೂಲ ಅಧಿಕ
ಆಂಡ್ರಾಯ್ಡ್ ಮೊಬೈಲ್ ಇಲ್ಲದ ರೈತರು ಪಕ್ಕದ ಜಮೀನಿನ ರೈತರ ಮೊಬೈಲ್ನಲ್ಲೂ ಮಾಹಿತಿ ಆಪ್ಲೋಡ್ ಮಾಡಬಹುದಾಗಿದೆ. ಬೆಳೆ ಸಮೀಕ್ಷೆಯಿಂದಾಗಿ ಯಾವ ರೈತರು ಯಾವ ಬೆಳೆ ಬೆಳೆದಿದ್ದಾರೆ ಎಂಬ ನಿಖರವಾದ ಮಾಹಿತಿ ದೊರೆಯುತ್ತದೆ.
ರೈತ ಬೆಳೆ ಸಮೀಕ್ಷೆ ಅಪ್ಲಿಕೇಶನ್'ನಲ್ಲಿ ರೈತರು ಬೆಳೆಗಳ ಮಾಹಿತಿ ಅಪ್ಲೋಡ್ ಮಾಡಿದರೆ ಮುಂದಿನ ದಿನಗಳಲ್ಲಿ ಪ್ರಕೃತಿ ವಿಕೋಪದಿಂದಾಗಿ ಬೆಳೆಹಾನಿ ಆದ ಸಂದರ್ಭದಲ್ಲಿ ಬೆಳೆ ವಿಮೆ ನೀಡಲು ಸಹಕಾರಿಯಾಗಲಿದೆ. ಬೆಳೆ ನಾಶದ ಸಂದರ್ಭದಲ್ಲಿ ಪರಿಹಾರ ಧನ ವಿತರಣೆಗೂ ಸಹಕಾರಿಯಾಗುತ್ತದೆ.
ಕನ್ನಡದಲ್ಲಿ ಬೆಳೆಗಳ ಮಾಹಿತಿಗೆ ಆಗ್ರಹ
ರೈತರು ಬೆಳೆದ ಬೆಳೆಗಳ ಮಾಹಿತಿಗಳನ್ನು ಅಪ್ ಲೋಡ್ ಮಾಡಲು ಕನ್ನಡದಲ್ಲಿ ಪ್ರದರ್ಶನವಾದರೆ ಅನುಕೂಲವಾಗುತ್ತದೆ ಹಾಗೂ ಗುತ್ತಿಗೆ ಪಡೆದು ಬೆಳೆಯನ್ನು ಬೆಳೆದ ರೈತರಿಗೆ ಪರಿಹಾರ ದೊರೆತರೆ ಅನುಕೂಲವಾಗುತ್ತದೆ ಎಂದು ರೈತರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ರೈತ ಬೆಳೆ ಸಮೀಕ್ಷೆ ಅಪ್ಲಿಕೇಶನ್ ಗೂಗಲ್ ಪ್ಲೇಸ್ಟೋರ್ನಲ್ಲಿ ಉಚಿತವಾಗಿ ಲಭ್ಯವಿದೆ. ಡೌನ್ ಲೋಡ್ ಮಾಡಿಕೊಂಡ ಬಳಿಕ ನಂತರ ವರ್ಷ, ಮುಂಗಾರು / ಹಿಂಗಾರು ಬೆಳೆ, ದೂರವಾಣಿ ಸಂಖ್ಯೆ ನಮೂದಿಸಬೇಕು.
ಬೆಳೆಯ 3 ಛಾಯಾಚಿತ್ರ ಅಗತ್ಯ
ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್, ಲೋಕೇಶನ್, ಮಾಲೀಕರ ವಿವರ ದಾಖಲು ಮಾಡಬೇಕು. ರೈತರು ಬೆಳೆ ವಿವರ, ಬಳಕೆಯಾಗದ ಪ್ರದೇಶ, ಬೆಳೆ ವಿಧ, ನೀರಾವರಿ ವಿಧ, ಬೆಳೆ ವಿಸ್ತಿರ್ಣ, ಈ ಮಾಹಿತಿಯನ್ನು ನೀಡಿಬೇಕು. ನಂತರ ಬೆಳೆಯ 3 ಛಾಯಾಚಿತ್ರಗಳನ್ನು ತೆಗೆದು ಆಪ್ಲೋಡ್ ಮಾಡಬೇಕು.