ರೈತ ಮುಖಂಡ ರಾಕೇಶ್ ಟಿಕಾಯತ್ಗೆ ಕೊಲೆ ಬೆದರಿಕೆ, ಇಂಜಿನಿಯರ್ ಬಂಧನ!
ಲಕ್ನೋ, ಮೇ 29: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಸಿಂಗ್ ಟಿಕಾಯತ್ಗೆ ಕೊಲೆ ಬೆದರಿಕೆ ಹಾಕಲಾಗಿದೆ.
ಸಂಯುಕ್ತ ಕಿಸಾನ್ ಮೋರ್ಚಾ ಭಾಗವಾಗಿರುವ ಭಾರತೀಯ ಕಿಸಾನ್ ಯೂನಿಯನ್ ಸಂಘಟನೆಯ ನಾಯಕ ರಾಕೇಶ್ ಸಿಂಗ್ ಟಿಕಾಯತ್ಗೆ ಕೆಲವು ದಿನಗಳಿಂದ ಕೊಲೆ ಬೆದರಿಕೆಯ ಕರೆಗಳು ಬರುತ್ತಿದ್ದು, ಉತ್ತರ ಪ್ರದೇಶದ ಗಾಝಿಯಾಬಾದ್ ಪೊಲೀಸರು ವ್ಯಕ್ತಿಯೊರ್ವನನ್ನು ಬಂಧಿಸಿದ್ದಾರೆ.
ಕೊಲೆ ಬೆದರಿಕೆಗೆ ಸಂಬಂಧಿಸಿದಂತೆ ಕೌಸಂಭಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಹಿಂದೆಯೂ ವಾಟ್ಸ್ಆಪ್ ಮೂಲಕ ಕರೆಗಳು ಬರುತ್ತಿರುವುದಾಗಿ ರಾಕೇಶ್ ಟಿಕಾಯತ್ ಪೊಲೀಸರ ಗಮನಕ್ಕೆ ತಂದಿದ್ದರು. ತನಿಖೆ ನಡೆಸಿದ ಪೊಲೀಸರು ಜಿತೇಂದ್ರ ಎಂಬ ಎಂ.ಟೆಕ್ ಪದವೀಧರನನ್ನು ಬಂಧಿಸಿದ್ದಾರೆ.
ಜನಕ್ಪುರಿಯ ವಾಸಿಯಾದ ಜಿತೇಂದ್ರ, ಕಳೆದ ಏಪ್ರಿಲ್ ತಿಂಗಳಿನಿಂದಲೂ ಟಿಕಾಯಿತ್ಗೆ, ಪ್ರತಿಭಟನೆ ನಿಲ್ಲಿಸುವಂತೆ, ಕೊಲೆ ಮಾಡುವುದಾಗಿ ಬೆದರಿಕೆಯ ಸಂದೇಶಗಳನ್ನು ಕಳಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಐಪಿಸಿ ಸೆಕ್ಷನ್ 507 ಮತ್ತು ಐಟಿ ಕಾಯ್ದೆಯಡಿ ಆರೋಪಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಕಳೆದ ಬುಧವಾರ ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತ ಹೋರಾಟ 6 ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ಕರಾಳ ದಿನ ಆಚರಿಸಲಾಗಿತ್ತು. ಇದೇ ವೇಳೆ ರಾಕೇಶ್ ಟಿಕಾಯತ್, ಕೃಷಿ ಕಾಯ್ದೆ ಜಾರಿ ವಿರುದ್ಧ ಹೋರಾಟ ಮುಂದುವರೆಸುವುದಾಗಿ ಘೋಷಿಸಿದರು. ಈ ವೇಳೆ ವೇಳೆ ಕಪ್ಪು ಬಾವುಟ ಪ್ರದರ್ಶನ ಮಾಡಿ, ಸರ್ಕಾರದ ಪ್ರತಿಕೃತಿ ದಹನ ಮಾಡಿದ್ದರು.