"ಬಹುರಾಷ್ಟ್ರೀಯ ಕಂಪನಿಗಳಿಂದ ಇಲ್ಲಿನ ಕೋಳಿ ಉದ್ಯಮಕ್ಕೆ ಪೆಟ್ಟು"
ದಾವಣಗೆರೆ, ಅಕ್ಟೋಬರ್ 12: ಹೈಬ್ರಿಡ್ ಕೋಳಿ ಮರಿ ತಳಿ ಉತ್ಪಾದನೆ ಹೆಸರಿನಲ್ಲಿ ಕೋಳಿ ಸಾಕಾಣಿಕೆ ಉದ್ಯಮಕ್ಕೆ ಕಾಲಿಟ್ಟಿರುವ ಬಹುರಾಷ್ಟ್ರೀಯ ಕಂಪನಿಗಳು ಕೋಳಿ ಉದ್ಯಮದಲ್ಲಿ ರೈತರನ್ನು ನಷ್ಟಕ್ಕೆ ಸಿಲುಕಿಸಿ ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿವೆ ಎಂದು ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘ ಆರೋಪಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಾಪುರ ದೇವರಾಜ್ ಮಾತನಾಡಿ, "ರೈತರು ವ್ಯವಸಾಯದ ಜತೆಗೆ ಕೋಳಿ ಸಾಕಾಣಿಕೆಯನ್ನು ಉಪ ಕಸುಬಾಗಿ ಮಾಡಿಕೊಂಡಿದ್ದಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಬಹುರಾಷ್ಟ್ರೀಯ ಮತ್ತು ದೇಶೀಯ ಬಂಡವಾಳಶಾಹಿ ಕಂಪನಿಗಳು ದೇಶದ ಆಹಾರ ಉದ್ಯಮವನ್ನು ಕಪಿಮುಷ್ಠಿಯಲ್ಲಿಟ್ಟುಕೊಳ್ಳುವ ಉದ್ದೇಶದಿಂದ ರೈತರನ್ನು ಶೋಷಣೆ ಮಾಡುತ್ತಿವೆ ಎಂದು ದೂರಿದರು.
ಕೋಳಿ ಉದ್ಯಮಕ್ಕೆ ಬರೆ ಎಳೆದ ಕೊರೊನಾ: 10 ಕೋಟಿ ರೂ. ನಷ್ಟ
'ಕರ್ನಾಟಕ ಪೌಲ್ಟ್ರಿ ಫಾರ್ಮಸ್ ಅಂಡ್ ಬ್ರೀಡರ್ಸ್ ಅಸೋಸಿಯೇಷನ್' ಸಂಸ್ಥೆಯ ಹೆಸರಿನಲ್ಲಿ ಕೆಲವು ಕಂಪನಿಗಳ ಮುಖ್ಯಸ್ಥರು, ಸಿಬ್ಬಂದಿ ರೈತರೆಂದು ಹೇಳಿಕೊಂಡು ಸರ್ಕಾರಕ್ಕೂ ತಪ್ಪು ಮಾಹಿತಿ ರವಾನಿಸಿ, ಉತ್ಪಾದಿಸುತ್ತಿರುವ ಒಂದು ದಿನದ ಹೈಬ್ರೀಡ್ ಕೋಳಿ ಮರಿಗಳ ದರವನ್ನು ಸಂಸ್ಥೆಯ ಹೆಸರಿನ ಅಂತರ್ಜಾಲದಲ್ಲಿ ಉತ್ಪಾದನಾ ವೆಚ್ಚಕ್ಕಿಂತ ಶೇಕಡ ನಾಲ್ಕು ಪಟ್ಟು ಹೆಚ್ಚು ಬೆಲೆಗೆ ರೈತರಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ಈಗಾಗಲೇ ಈ ಕಂಪನಿಗಳ ವಿರುದ್ಧ ಕ್ರಮ ಜರುಗಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಲಾಗಿದ್ದರೂ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದೇ ರೀತಿ ಕಂಪನಿಗಳ ಕಪಿಮುಷ್ಠಿಯಲ್ಲಿ ಉದ್ಯಮಗಳು ಸಿಲುಕಿದ್ದೇ ಆದಲ್ಲಿ ದೇಶದ ಆಹಾರ ಭದ್ರತೆ ಹಾಗೂ ಆರ್ಥಿಕ ಭದ್ರತೆಗೆ ಪೆಟ್ಟು ಬೀಳುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಕೂಡಲೇ ಈ ಕಂಪನಿಗಳನ್ನು ರಾಜ್ಯದಿಂದ ಗಡಿಪಾರು ಮಾಡಬೇಕು, ಕಂಪನಿಗಳು ವ್ಯವಹಾರದ ಲಾಭದಲ್ಲಿ ಸರ್ಕಾರಕ್ಕೆ ತೆರಿಗೆ ಕಟ್ಟಬೇಕು, ಕೂಡಲೇ ಈ ಕಂಪನಿಗಳ ವಿರುದ್ಧ ಕ್ರಮ ಕೈಗೊಂಡು ಕೋಳಿ ಸಾಕಾಣಿಕೆದಾರರ ರಕ್ಷಣೆಗೆ ಸರ್ಕಾರಗಳು ನಿಲ್ಲಬೇಕು ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಓ.ಬಿ. ಗುರುಮೂರ್ತಿ, ಬನ್ನಿಕೋಡು ಅಭಿಷೇಕ್, ಜಿ.ಟಿ. ನೂರುದ್ದೀನ್ ಇದ್ದರು.