ಎಂಪಿಎಂ ಪೇಪರ್ ಮಿಲ್ಸ್, ನೀಲಗಿರಿ, ಅರಣ್ಯ, ಭೂ ಮಾಫಿಯಾ ಇತ್ಯಾದಿ
ಸ್ವತಂತ್ರ ಭಾರತದ ಇತಿಹಾಸದಲ್ಲೇ ದೊಡ್ಡದೆನಿಸಬಹುದಾದ "ಭೂ ಮಾಫಿಯಾ" ರಾಜ್ಯದಲ್ಲಿ ತಣ್ಣಗೆ ತಲೆಯೆತ್ತುತ್ತಿದೆ. ಬರೋಬ್ಬರಿ 32,000 ಹೆಕ್ಟೇರ್ ಅರಣ್ಯ ಭೂಮಿ ಖಾಸಗಿ ಕಂಪನಿಗಳ ಸ್ವತ್ತಾಗುವ ಹೊತ್ತು ಹತ್ತಿರವಿದೆ. ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಅರಣ್ಯ ಭೂಮಿಯ ಕರಾಳ ಕಥೆಯಿದು.
ಹಿನ್ನೆಲೆ:
1980ಕ್ಕೂ ಹಿಂದೆ ಎಂ.ಪಿ.ಎಂ ಪೇಪರ್ ಮಿಲ್ಸ್ ಕಾರ್ಖಾನೆಗೆ ಖಚ್ಚಾವಸ್ತುವಾಗಿ ಅರಣ್ಯ ಇಲಾಖೆಯಿಂದ ಬಿದಿರು ನೀಡಲಾಗುತ್ತಿತ್ತು. ಅದರಿಂದ ಪೇಪರ್ ಉತ್ಪಾದನೆ ನಡೆಯುತ್ತಿತ್ತು. ಕೆಲ ಕಾಲ ಹೀಗೇ ನಡೆಯಿತಾದರೂ ಫ್ಯಾಕ್ಟರಿಗೆ ಅಗತ್ಯವಿರುವಷ್ಟು ಖಚ್ಚಾವಸ್ತುವಿನ ಕೊರತೆ ಉಂಟಾಯಿತು.
ಬೇಡಿಕೆ ಈಡೇರದಿದ್ದರೆ ಗಣರಾಜ್ಯ ದಿನದಂದು ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ಮೆರವಣಿಗೆ
ಅರಣ್ಯ ಇಲಾಖೆ ಬ್ಯಾಂಬೂ ಒದಗಿಸಲು ಸಾಧ್ಯವಾಗಲಿಲ್ಲ. ಆಗ ನೀಲಗಿರಿ ಮರದ ಪಲ್ಪ ತೆಗೆದು ಪೇಪರ್ ತಯಾರಿಸುವ ತಂತ್ರಜ್ಞಾನವೂ ಎಂ.ಪಿ.ಎಂ ನೆರವಿಗೆ ಬಂತು. ಅದಕ್ಕಾಗಿ ಸರ್ಕಾರ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ನೀಲಗಿರಿ ಬೆಳೆಯಲು ಸುಮಾರು 32,000 ಹೆಕ್ಟೇರ್ ಅರಣ್ಯ ಭೂಮಿಯನ್ನು 40 ವರ್ಷಗಳ ಅವಧಿಗೆ ಎಂ.ಪಿ.ಎಂ ಗೆ ಗುತ್ತಿಗೆಗೆ ನೀಡಿತ್ತು.
ಆ ಸಂದರ್ಭದಲ್ಲಿ ಅರಣ್ಯ ಕಡಿದು ನೀಲಗಿರಿ ನೆಡುವ ಮೂರ್ಖ ಕೆಲಸವೂ ಆರಂಭವಾಯಿತು. ಅದನ್ನು ವಿರೋಧಿಸಿ ರೈತ ಸಂಘದ ಪ್ರೊ. ಎಂಡಿಎನ್, ಎನ್.ಡಿ ಸುಂದರೇಶ್, ಕೆ.ಟಿ ಗಂಗಾಧರ್ ನೇತೃತ್ವದಲ್ಲಿ ಪ್ರತಿಭಟನಾ ಧರಣಿಗಳು ನಡೆದವು. 'ಅದೇ ಹೋರಾಟದಲ್ಲಿ ನಾವು 18 ದಿನ ಜೈಲಿನಲ್ಲಿದ್ವಿ' ಎಂದು ಹಿರಿಯ ಹೋರಾಟಗಾರ ಕೆ.ಟಿ ಗಂಗಾಧರ್ ಸ್ಮರಿಸಿಕೊಳ್ಳುತ್ತಾರೆ.
ಇನ್ನು ನೀಲಗಿರಿಯ ಬಗ್ಗೆ ಮಾತನಾಡುವ ಗಂಗಾಧರ್ ಅದೆಂಥಾ ಮರ ರೀ, ಹಣ್ಣು ಬಿಡೋಲ್ಲ, ಹಕ್ಕಿ ಪಕ್ಷಿಗಳು ಗೂಡು ಕಟ್ಟಲ್ಲ. ಕಾಡಿನ ಕಲ್ಪನೆಯೇ ಅದರಲ್ಲಿ ನಾವು ನೋಡೋಕಾಗಲ್ಲವಲ್ಲ. ಹಾಗಾಗಿ ನಾವು ರಾಜ್ಯದೆಲ್ಲೆಡೆ ನೀಲಗಿರಿ ಕಿತ್ತೆಸೆದು ಚಳವಳಿ ಮಾಡಿದ್ವಿ ಎನ್ನುತ್ತಾರೆ.
ನೀಲಗಿರಿಯನ್ನು ಹೊರತುಪಡಿಸಿ ಮತ್ತಿನ್ನೇನಾದರೂ ಉಪಾಯ ಮಾಡಬೇಕೆಂದುಕೊಂಡಾಗ ಸಂಘ, ಸಂಸ್ಥೆಗಳು, ಕಾರ್ಖಾನೆ, ಸರ್ಕಾರಗಳಿಗೆ ಹೊಳೆದದ್ದು ಕಬ್ಬು ಬೆಳೆ. ಆಗ ನಾವು ರೈತರೆಲ್ಲ ಕಬ್ಬು ಬೆಳೆದು ಕೊಟ್ಟೆವು. ಕಬ್ಬಿನ ಸಿಪ್ಪೆಯಿಂದ ಪೇಪರ್ ಮಾಡುವ ಕೆಲಸವೂ ನಡೆಯಿತು. ಇವೆಲ್ಲದರ ನಡುವೆ ಕುಂಟುತ್ತಾ ತೆವಳುತ್ತಾ ನಡೆಯುತ್ತಿದ್ದ ಸಂಸ್ಥೆ ನಿಲ್ಲಬೇಕಾಗಿ ಬಂತು.
ಇದೇ ರೀತಿ ಇತ್ತೀಚಿನವರೆಗೆ ನಡೆದುಕೊಂಡು ಬಂದಿದ್ದ ಎಂ.ಪಿ.ಎಂ. ಫ್ಯಾಕ್ಟರಿ ಕಳೆದ ಐದಾರು ವರ್ಷಗಳಿಂದ ಕೆಲಸ ಸ್ಥಗಿತವಾಗಿದೆ. ನೌಕರರಿಗೆ ಮನೆಗೆ ಕಳುಹಿಸಿ ಆಗಿದೆ. ಫ್ಯಾಕ್ಟರಿ ಹರಾಜಿಗಿಟ್ಟಿದ್ದಾರೆ. ಏತನ್ಮಧ್ಯೆ 40 ವರ್ಷಗಳ ಕಾಲ ಗುತ್ತಿಗೆ ನೀಡಲಾಗಿದ್ದ ಅರಣ್ಯ ಭೂಮಿಯ ಕರಾರು ನವೆಂಬರ್ 2020ಕ್ಕೆ ಮುಗಿದಿದೆ.
ಆದರೂ ಈಗ 2060 ರವರೆಗೆ ಗುತ್ತಿಗೆಯನ್ನು ವಿಸ್ತರಿಸಿರುವುದು ಮತ್ತು ಎಂ.ಪಿ.ಎಂ. ಹರಾಜಿಗಿಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಆತಂಕ ವ್ಯಕ್ಯಪಡಿಸುತ್ತಾರೆ ಕೆ.ಟಿ ಗಂಗಾಧರ್.
'ಇಡೀ ಮಲೆನಾಡಿನ ಅರಣ್ಯ ಭೂಮಿಯನ್ನು ಖಾಸಗಿ ಸಂಸ್ಥೆಗಳು ತಮ್ಮ ಒಡೆತನಕ್ಕೆ ತೆಗೆದುಕೊಳ್ಳುವ ಹುನ್ನಾರವಿದೆ, ಎಂ.ಪಿ.ಎಂ ಸಂಸ್ಥೆಯನ್ನು ಮಾರಾಟಕ್ಕೆ ಇಟ್ಟಾಗಿದೆ, ಖಾಸಗಿ ಕಂಪನಿಗಳು ಬಂದೇ ಬರ್ತವೆ. ಹಾಗಾಗಿ ನಮ್ಮ ವಿರೋಧವಿದೆ ಎಂದು ಗಂಗಾಧರ್ ಸ್ಪಷ್ಟ ನುಡಿಗಳಲ್ಲಿ ಹೇಳುತ್ತಾರೆ.
ಈ ನಿಟ್ಟಿನಲ್ಲಿ ನಾಳೆ ಸತ್ಯಾಗ್ರಹ ಕೂಡಾ ಹಮ್ಮಿಕೊಳ್ಳಲಾಗಿದೆ.
ಮುಂದುವರೆಯುವುದು....