ತಾತನ ನೆನೆದು ರೈತರ ಬಗ್ಗೆ ಸಂಸತ್ನಲ್ಲಿ ಪ್ರಜ್ವಲ್ ಮೊದಲ ಭಾಷಣ
Recommended Video
ನವದೆಹಲಿ, ಜೂನ್ 25 : ಮಾಜಿ ಪ್ರಧಾನಿ ದೇವೇಗೌಡ ಅವರು ಪ್ರತಿನಿಧಿಸುತ್ತಿದ್ದ ಹಾಸನದಿಂದ ಸಂಸತ್ಗೆ ಆಯ್ಕೆ ಆಗಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರು ಇಂದು ಸಂಸತ್ನಲ್ಲಿ ತಮ್ಮ ಮೊದಲ ಭಾಷಣ ಮಾಡಿದರು. ದೇವೇಗೌಡ ಅವರು ಸಂಸತ್ನಲ್ಲಿ ನಡೆಸಿದ್ದ ರೈತ ಪರ ಹೋರಾಟವನ್ನು ಮುಂದುವರೆಸುವ ಸೂಚನೆ ನೀಡಿದರು.
ಮೊದಲ ಬಾರಿಗೆ ಸಂಸತ್ನಲ್ಲಿ ಮಾತನಾಡಲು ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡ ಪ್ರಜ್ವಲ್ ರೇವಣ್ಣ ಅವರು, ಮಂಡ್ಯದಲ್ಲಿ ರೈತರ ಆತ್ಮಹತ್ಯೆ, ಕುಡಿಯುವ ನೀರಿನ ಸಮಸ್ಯೆ, ಮಳೆ ಕೊರತೆ ಬಗ್ಗೆ ಸದನದ ಗಮನ ಸೆಳೆದರು.
4 ದಿನದ ಬಳಿಕ ಪ್ರಮಾಣ ವಚನ ಸ್ವೀಕರಿಸಿದ ಪ್ರಜ್ವಲ್ ರೇವಣ್ಣ: ಕಾರಣವೇನು?
ಡೆತ್ ನೋಟ್ ಬರೆದಿಟ್ಟು ರೈತನೊಬ್ಬ ಮಂಡ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿಚಾರವನ್ನು ಪ್ರಜ್ವಲ್ ರೇವಣ್ಣ ಪ್ರಸ್ತಾಪಿಸಿದರು. ಹಾಸನ ಕ್ಷೇತ್ರದ ಬಗ್ಗೆಯೂ ಮಾತನಾಡಿದ ಪ್ರಜ್ವಲ್ ರೇವಣ್ಣ, ಹಾಸನಕ್ಕೆ ಡೆಡ್ ಸ್ಟೋರೆಜ್ನ ನೀರು ಬಳಸಲಾಗುತ್ತಿದೆ ಎಂದು ಜಿಲ್ಲೆಯಲ್ಲಿ ಜನರು ನೀರಿನ ಸಂಕಷ್ಟ ಎದುರಿಸುತ್ತಿರುವ ಬಗ್ಗೆ ವಿವರಿಸಿದರು.
ತಮಿಳುನಾಡು ಗೆಳೆಯರು ಸೇರಿದಂತೆ ಯಾರೂ ಈ ವಿಷಯವನ್ನು ರಾಜಕೀಯವಾಗಿ ಬಳಸದೆ, ಮಾನವೀಯತೆಯ ವಿಷಯವಾಗಿ ಪರಿಗಣಿಸಿ ಈ ಕೂಡಲೇ ಕರ್ನಾಟಕಕ್ಕೆ ಎರಡು ಟಿಎಂಸಿ ನೀರು ಒದಗಿಸಬೇಕು ಎಂದು ಪ್ರಜ್ವಲ್ ರೇವಣ್ಣ ಒತ್ತಾಯಿಸಿದರು. ಕೇಂದ್ರ ಸಚಿವ ಸದಾನಂದಗೌಡ ಅವರು ಈ ವಿಷಯವನ್ನು ಆದ್ಯತೆಯಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು.
ತೇಜಸ್ವಿ ಸೂರ್ಯಗೆ ಟಾಂಗ್ ನೀಡಿದ ಪ್ರಜ್ವಲ್ ರೇವಣ್ಣ
ಬಿಜೆಪಿಯ ಸಂಸದ (ಬೆಂಗಳೂರು ದಕ್ಷಿಣ) ತೇಜಸ್ವಿ ಸೂರ್ಯ ಅವರು ಸಹ ಇಂದು ಮೊದಲ ಬಾರಿಗೆ ಮಾತನಾಡಿ, ಕರ್ನಾಟಕದಲ್ಲಿ ಭ್ರಷ್ಟ ಸರ್ಕಾರ ಇದೆ ಎಂದು ಹೇಳಿದ್ದರು. ಇದಕ್ಕೆ ತೀವ್ರ ವಿರೋಧವನ್ನು ಪ್ರಜ್ವಲ್ ರೇವಣ್ಣ ಅವರು ಸದನದಲ್ಲಿ ವ್ಯಕ್ತಪಡಿಸಿದರು. ಮಾತಿನಲ್ಲಿ ತಾವೇನು ಕಡಿಮೆಯಿಲ್ಲ ಎಂದು ತೋರಿಸಿಕೊಟ್ಟರು.
'ಸದನವನ್ನು ಮಿಸ್ ಲೀಡ್ ಮಾಡಬೇಡಿ'
ಯುವ ಸಂಸದರೊಬ್ಬರು ಕರ್ನಾಟಕದ ಸರ್ಕಾರವನ್ನು ಭ್ರಷ್ಟ ಎನ್ನುವ ಮೂಲಕ ಸಂಸತ್ ಅನ್ನು ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ಐಎಂಎ ವಿಚಾರದಲ್ಲಿ ಆರೋಪಿ ಎನಿಸಿಕೊಂಡಿರುವ ಶಾಸಕ ರೋಶನ್ ಬೇಗ್ ಅವರನ್ನು ಈಗಾಗಲೇ ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಪ್ರಜ್ವಲ್ ರೇವಣ್ಣ ಅವರು ಕಾಲೆಳೆದರು.
ನಿಖಿಲ್-ಪ್ರಜ್ವಲ್ ಮಿಂಚಿದ್ದು ಸಾಕು: ಜೆಡಿಎಸ್ ಟಾಪ್ ಲೀಡರ್ ಅಸಮಾಧಾನ
ಸಂತೋಷ್ ಹೆಗಡೆ ತನಿಖೆ ಬಗ್ಗೆ ಉಲ್ಲೇಖ
ಮುಂದುವರೆದು ಮಾತನಾಡಿದ ಪ್ರಜ್ವಲ್ ರೇವಣ್ಣ ಅವರು, ಬಿಜೆಪಿಯು ಅಧಿಕಾರದಲ್ಲಿದ್ದಾಗ, 2009ರಲ್ಲಿ ಅಂದಿನ ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಸಂತೋಷ್ ಹೆಗಡೆ ನೇತೃತ್ವದಲ್ಲಿ ಲೋಕಾಯುಕ್ತವು ನಡೆಸಿದ ತನಿಖೆ ಪ್ರಕಾರ, ಆಗಿನ ಸಿಎಂ ಸೇರಿದಂತೆ 14 ಸಚಿವರು ಲಂಚ ಪಡೆದಿದ್ದಾರೆ ಎಂದು ತಿರುಗಿ ವಾಗ್ದಾಳಿ ನಡೆಸಿದರು.
ಪ್ರತಾಪ್ ಸಿಂಹ ಅವರನ್ನು ಸುಮ್ಮನಾಗಿಸಿದ ಪ್ರಜ್ವಲ್
ಇದಕ್ಕೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಆಕ್ಷೇಪ ವ್ಯಕ್ತಪಡಿಸಿದರಾದರೂ ಪ್ರಜ್ವಲ್ ರೇವಣ್ಣ ಅವರು ಪ್ರತಾಪ್ ಸಿಂಹ ಅವರನ್ನು ಸುಮ್ಮನಿರುವಂತೆ ಸೂಚಿಸಿದರು. ನೀವೇ ಈ ವಿಷಯ ಎತ್ತಿದ್ದೀರಿ, ನನಗೆ ಮಾತನಾಡಲು ಬಿಡಿ ಎಂದು ಪ್ರತಾಪ್ ಸಿಂಹ ಅವರನ್ನು ಸುಮ್ಮನಾಗಿಸಿದರು.
ಸಹೋದರ ಪ್ರಜ್ವಲ್ ರೇವಣ್ಣ ಬಗ್ಗೆ ನಿಖಿಲ್ ಕುಮಾರಸ್ವಾಮಿ ಫೇಸ್ಬುಕ್ ಪೋಸ್ಟ್