ಕೃಷಿ ಕಾಯ್ದೆ ಪರ 850ಕ್ಕೂ ಹೆಚ್ಚು ಶಿಕ್ಷಣ ತಜ್ಞರ ಮುಕ್ತ ಪತ್ರ
ನವದೆಹಲಿ, ಜನವರಿ 02: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ಬೆಂಬಲಿಸಿ ದೇಶದಾದ್ಯಂತ ಹಲವು ಶಿಕ್ಷಣ ಸಂಸ್ಥೆಗಳ 850ಕ್ಕೂ ಹೆಚ್ಚು ಶಿಕ್ಷಣ ತಜ್ಞರು ಮುಕ್ತ ಪತ್ರಕ್ಕೆ ಸಹಿ ಹಾಕಿದ್ದಾರೆ.
ದೆಹಲಿ ವಿಶ್ವವಿದ್ಯಾಲಯ, ಬನಾರಸ್ ಹಿಂದೂ ವಿಶ್ವವಿದ್ಯಾಲಯ, ಜವಹರಲಾಲ್ ನೆಹರು ವಿಶ್ವವಿದ್ಯಾಲಯದಂಥ ಪ್ರತಿಷ್ಠಿತ ಸಂಸ್ಥೆಗಳ ಶಿಕ್ಷಣ ತಜ್ಞರು, ಕೃಷಿ ಕಾಯ್ದೆಗಳಿಗೆ ಬೆಂಬಲ ವ್ಯಕ್ತಪಡಿಸಿದ್ದು, ಕೃಷಿ ಕಾಯ್ದೆಗಳ ಮೂಲಕ ರೈತರ ಜೀವನೋಪಾಯವನ್ನು ರಕ್ಷಿಸುತ್ತೇವೆ ಹಾಗೂ ರೈತರ ತಟ್ಟೆಯಿಂದ ಆಹಾರವನ್ನು ಕಿತ್ತುಕೊಳ್ಳುವುದಿಲ್ಲ ಎಂಬ ಸರ್ಕಾರದ ಭರವಸೆಯನ್ನು ಬಲವಾಗಿ ನಂಬುತ್ತೇವೆ ಎಂದು ತಿಳಿಸಿದ್ದಾರೆ.
ಭವಿಷ್ಯ ಹೇಳಲು ನಾನು ಜ್ಯೋತಿಷಿಯಲ್ಲ; ಕೃಷಿ ಸಚಿವ
ಕೃಷಿ ವ್ಯಾಪಾರ ವಹಿವಾಟನ್ನು ಎಲ್ಲಾ ನಿರ್ಬಂಧಗಳಿಂದ ಮುಕ್ತಗೊಳಿಸುವ ಹಾಗೂ ರೈತರಿಗೆ ಸ್ಪರ್ಧಾತ್ಮಕ ಬೆಲೆಯಲ್ಲಿ ತಮ್ಮ ಉತ್ಪನ್ನವನ್ನು ಮಾರಾಟ ಮಾಡಲು ಈ ಕಾಯ್ದೆಗಳು ಅನುಕೂಲ ಮಾಡಿಕೊಡುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
"ಈ ಮೂರು ಕೃಷಿ ಕಾಯ್ದೆಗಳನ್ನು ರೈತರ ಹಿತಾಸಕ್ತಿಯಿಂದ ರೂಪಿಸಲಾಗಿದೆ, ಕನಿಷ್ಠ ಬೆಂಬಲ ಬೆಲೆಗೆ ಯಾವುದೇ ಧಕ್ಕೆಯಿಲ್ಲ ಎಂದು ರೈತರಿಗೆ ಸರ್ಕಾರ ಪದೇ ಪದೇ ಭರವಸೆ ನೀಡುತ್ತಿದೆ. ಅಕ್ರಮ ಮಾರುಕಟ್ಟೆಯಿಂದ ರೈತರನ್ನು ಕಾಯ್ದೆಯು ಮುಕ್ತರನ್ನಾಗಿ ಮಾಡುತ್ತದೆ ಎಂದು ಹೇಳುತ್ತಿದೆ. ಇದು ಸಣ್ಣ ಹಾಗೂ ಮಧ್ಯಮ ರೈತರಿಗೆ ಅನುಕೂಲವಾಗಲಿದೆ ಎಂದು ಪತ್ರದ ಮೂಲಕ ಶಿಕ್ಷಣ ತಜ್ಞರು ತಿಳಿಸಿದ್ದಾರೆ.
ಈ ವಿಷಯದಲ್ಲಿ ಸರ್ಕಾರ ಹಾಗೂ ರೈತರು ಇಬ್ಬರ ಪರವಾಗಿಯೂ ನಿಲ್ಲುತ್ತೇವೆ. ಇಬ್ಬರ ಪರಿಶ್ರಮಕ್ಕೂ ನಮ್ಮ ಸೆಲ್ಯೂಟ್ ಎಂದಿದ್ದಾರೆ.
ಕೇಂದ್ರ ಪರಿಚಯಿಸಿರುವ ಕೃಷಿ ಮಾರುಕಟ್ಟೆ ಕಾಯ್ದೆ, ಬೆಲೆ ಭರವಸೆಗಳ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ, ಅಗತ್ಯ ಸರಕು (ತಿದ್ದುಪಡಿ) ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ನವೆಂಬರ್ 26ರಿಂದಲೂ ಸುಮಾರು 40 ರೈತ ಸಂಘಟನೆಗಳು ದೆಹಲಿ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿವೆ. ಈ ಕುರಿತು ಆರು ಸುತ್ತಿನ ಮಾತುಕತೆಗಳು ನಡೆದಿದ್ದು, ರೈತರ ಎರಡು ಬೇಡಿಕೆಗಳಲ್ಲಿ ಒಮ್ಮತಕ್ಕೆ ಬರಲಾಗಿದೆ.
ಇನ್ನು ಎರಡು ಪ್ರಮುಖ ಬೇಡಿಕೆಗಳ ಕುರಿತು ಚರ್ಚೆಗೆ ಜ.4ಕ್ಕೆ ಏಳನೇ ಸುತ್ತಿನ ಮಾತುಕತೆ ನಡೆಸಲಾಗುತ್ತಿದೆ.