ರೈತರಿಗೆ ನಮೋ ನಮಃ ಎಂದ ಎಂಎಲ್ ಎ ಅಶೋಕ್ ಖೇಣಿ
ಬೆಂಗಳೂರು, ಅಕ್ಟೋಬರ್, 17: ರೈತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಕೆಂಗಣ್ಣಿಗೆ ಗುರಿಯಾಗಿದ್ದ ಶಾಸಕ, ಉದ್ಯಮಿ ಅಶೋಕ್ ಖೇಣಿ ರೈತರ ಕ್ಷಮೆ ಯಾಚಿಸಿದ್ದಾರೆ.
ರೈತರ ಆತ್ಮಹತ್ಯೆ ಬಗ್ಗೆ ಚಿಕ್ಕಬಳ್ಳಾಪುರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ನಂತರ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಅಶೋಕ್ ಖೇಣಿ ಅವರ ನೈಸ್ ಸಂಸ್ಥೆಯ ಟೋಲ್ ಗೇಟ್ಗೆ ನುಗ್ಗಿ ತೀವ್ರ ಪ್ರತಿಭಟನೆ ನಡೆಸಿದ್ದರು.[ಅಶೋಕ್ ಖೇಣಿ ರಾಜೀನಾಮೆಗೆ ಆಗ್ರಹಿಸಿ ರೈತರ ಪ್ರತಿಭಟನೆ]
ರೈತರು ನಡೆದಾಡುವ ದೇವರು, ಅವರಿಗೆ ನಾನು ಎಂದೂ ಅವಮಾನ ಮಾಡುವುದಿಲ್ಲ. ನನ್ನ ಹೇಳಿಕೆಯಿಂದ ನೋವಾಗಿದ್ದಗರೆ ಕ್ಷಮಿಸಬೇಕು ಎಂದು ಖೇಣಿ ಕೇಳಿಕೊಂಡಿದ್ದಾರೆ. ರೈತರು ಇಂದು ಹಲವು ಕಷ್ಟಗಳಿಗೆ ತುತ್ತಾಗಿ ಹೈರಾಣಾಗಿ ಹೋಗುತ್ತಿದ್ದಾರೆ. ಆದರೆ ಸರ್ಕಾರ ಅವರಿಗೆ ಪರಿಹಾರ ನೀಡುತ್ತಿಲ್ಲ. ಆದುದರಿಂದ ಆತ್ಮಹತ್ಯೆಯಂತಹ ದಾರಿ ಹಿಡಿಯುತ್ತಿದ್ದಾರೆ ಎಂದು ಖೇಣಿ ಹೇಳಿದ್ದಾರೆ.
ಚಲನಚಿತ್ರದ ಶೂಟಿಂಗ್ ಒಂದರ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಖೇಣಿ, ರೈತರು ಜೂಜಾಟ, ಕ್ರಿಕೆಟ್ ಬೆಟ್ಟಿಂಗ್, ಕಡಿತದಂತಹ ಅನೈತಿಕ ಚಟುವಟಿಕೆಗಳಿಗೆ ಮೊರೆ ಹೋಗುತ್ತಿದ್ದು, ಇದರ ಪರಿಣಾಮದಿಂದಲೇ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.