'ಕಾಂಗ್ರೆಸ್ಗಿಂತಲೂ ಬಿಜೆಪಿಯಿಂದ ರೈತರ ಶೋಷಣೆ 4 ಪಟ್ಟು ಹೆಚ್ಚು'
ಚಂಡೀಗಡ, ಸೆಪ್ಟೆಂಬರ್ 25: ಕೇಂದ್ರ ಸರ್ಕಾರದ ಕೃಷಿ ಸಂಬಂಧಿ ಮಸೂದೆಗಳ ವಿರುದ್ಧ ವಿವಿಧ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ಗೆ ವಿವಿಧ ರಾಜ್ಯಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿವೆ. ಕೆಲವು ರಾಜ್ಯಗಳಲ್ಲಿ ತೀವ್ರ ಸ್ವರೂಪದ ಪ್ರತಿಭಟನೆಗಳು ನಡೆದಿವೆ.
ಕಾಂಗ್ರೆಸ್ಗಿಂತಲೂ ಭಾರತೀಯ ಜನತಾ ಪಕ್ಷವು ರೈತನ್ನು ನಾಲ್ಕು ಪಟ್ಟು ಹೆಚ್ಚು ಶೋಷಣೆ ಮಾಡುತ್ತಿದೆ ಎಂದು ಭಾರತೀಯ ಕಿಸಾನ್ ಒಕ್ಕೂಟದ ಹರಿಯಾಣ ಅಧ್ಯಕ್ಷ ಗುರ್ನಮ್ ಸಿಂಗ್ ಚಾರುಣಿ ಆರೋಪಿಸಿದರು.
ಭಾರತ್ ಬಂದ್; ಕರ್ನಾಟಕದ ಎಲ್ಲೆಲ್ಲಿ ಪ್ರತಿಭಟನೆ ನಡೆಯುತ್ತಿದೆ?
ಹರಿಯಾಣ ಪಂಚಕುಳದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಜತೆ ತಮ್ಮ ಸಂಸ್ಥೆ ಹೊಂದಾಣಿಕೆ ಮಾಡಿಕೊಂಡಿದೆ ಎಂಬ ಆರೋಪವನ್ನು ನಿರಾಕರಿಸಿದರು. ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳೆರಡೂ ರೈತರನ್ನು ಶೋಷಿಸಿವೆ. ಆದರೆ ಇದುವರೆಗೂ ಬಿಜೆಪಿ ಮಾಡುತ್ತಿರುವ ಕೆಲಸಗಳು ಕಾಂಗ್ರೆಸ್ಗಿಂತಲೂ ನಾಲ್ಕು ಪಟ್ಟು ಹೆಚ್ಚು ಶೋಷಣೆ ಮಾಡುತ್ತಿದೆ. ಸರ್ಕಾರವು ದೊಡ್ಡ ಕಾರ್ಪೊರೇಟ್ಗಳ ಅನುಕೂಲತೆಗಾಗಿ ಕಾನೂನುಗಳನ್ನು ಮಾಡುತ್ತಿದೆ. ರೈತರ ಸಂಕಷ್ಟಗಳನ್ನು ಕೇಳಿಸಿಕೊಳ್ಳುವ ಮನಸ್ಥಿತಿ ಇಲ್ಲ ಎಂದು ಟೀಕಿಸಿದರು.
ಜನರು ಹಾಗೂ ರಾಜ್ಯಸಭೆಯ ಜನಪ್ರತಿನಿಧಿಗಳ ವಿರೋಧದ ನಡುವೆಯೂ ಸರ್ಕಾರವು ಮುಂದುವರಿದು ಹೊಸ ಕಾನೂನುಗಳನ್ನು ಮಾಡುತ್ತಿದೆ. ಜನರ ಅಹವಾಲುಗಳನ್ನೂ ಸರ್ಕಾರ ಕೇಳಿಸಿಕೊಳ್ಳುತ್ತಿಲ್ಲ. ಅವರು ಯಾರಿಗಾಗಿ ಕಾನೂನುಗಳನ್ನು ಮಾಡುತ್ತಿದ್ದಾರೆ? ದೊಡ್ಡ ಕಾರ್ಪೊರೇಟ್ ಕಂಪೆನಿಗಳಿಂದ ಚುನಾವಣೆಯ ದೇಣಿಗೆ ರೂಪದಲ್ಲಿ ಹಣ ಪಡೆಯುತ್ತಾರೆ ಮತ್ತು ಅವರಿಗೆ ಅನುಕೂಲವಾಗುವಂತೆ ಕಾನೂನುಗಳನ್ನು ಮಾಡುತ್ತಾರೆ ಎಂದು ಆರೋಪಿಸಿದರು.
ಕೃಷಿ ಮಸೂದೆ ವಿರೋಧಿಸಿ ಭಾರತ ಬಂದ್: ಯಾವ ರಾಜ್ಯದಲ್ಲಿ ಹೇಗಿದೆ ಚಿತ್ರಣ?
ಹರಿಯಾಣದಲ್ಲಿ ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಕುರುಕ್ಷೇತ್ರದಲ್ಲಿ ಕೆಲವೆಡೆ ರಸ್ತೆ ತಡೆ ನಡೆದವು. ರಾಜ್ಯದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅಡ್ಡಿಯಾಗದೆ ಹೋದರೂ, ಕೆಲವು ಜಿಲ್ಲೆಗಳಲ್ಲಿ ಆಹಾರ ಮಾರುಕಟ್ಟೆಗಳು ಖಾಲಿ ಹೊಡೆಯುತ್ತಿದ್ದವು.