‘ಪಿಎಂ ಕಿಸಾನ್ ಸಮ್ಮಾನ್’ ಹಣಕ್ಕಾಗಿ ‘ರೈತ’ರಾದ ತೆರಿಗೆ ಪಾವತಿದಾರರು!
ಕಾರವಾರ, ನವೆಂಬರ್ 13: ಬಡ ರೈತರಿಗೆ ಅನುಕೂಲವಾಗಲಿ ಎನ್ನುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಕೃಷಿಯನ್ನೇ ಅವಲಂಬಿಸಿರುವ ಬಡ ರೈತರಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ ಆರು ಸಾವಿರ ಹಣವನ್ನು ನೀಡುವುದು ಯೋಜನೆಯ ಉದ್ದೇಶ.
ಆದರೆ, ಜಿಲ್ಲೆಯಲ್ಲಿ ತೆರಿಗೆ ಪಾವತಿ ಮಾಡುವ ರೈತರೂ ಈ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುವಂತಾಗಿದೆ. ಕಷ್ಟಪಟ್ಟು ಕೃಷಿಕಾರ್ಯವನ್ನು ನಡೆಸುವ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರಗಳು ರೈತಪರ ಯೋಜನೆಗಳ ಮೂಲಕ ಬೆಂಬಲ ಒದಗಿಸುವ ಕೆಲಸವನ್ನು ಮಾಡುತ್ತವೆ. ಅದರಂತೆ ರೈತರ ಖಾತೆಗೆ ಸರ್ಕಾರವೇ ವರ್ಷಕ್ಕೆ ಆರು ಸಾವಿರದಂತೆ ಹಣ ನೀಡುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಜಾರಿಗೆ ತಂದಿತ್ತು. ಆದರೆ ಜಿಲ್ಲೆಯಲ್ಲಿ ಈ ಯೋಜನೆಯ ಲಾಭವನ್ನು ಬಡ ರೈತರಲ್ಲದಿರುವವರು ಸಹ ಪಡೆದುಕೊಳ್ಳುತ್ತಿರುವುದು ಇದೀಗ ಬೆಳಕಿಗೆ ಬಂದಿದೆ. ಮುಂದೆ ಓದಿ...
ಬಡವ, ರೈತ, ಮಹಿಳೆ, ಕಾರ್ಮಿಕರಿಗೆ ಮೋದಿ ಪ್ಯಾಕೇಜ್: ಬಿಎಸ್ವೈ ಪ್ರಶಂಸೆ
ಯೋಜನೆಯಡಿಯಲ್ಲಿ ಜಿಲ್ಲೆಯ 1.64 ಲಕ್ಷ ರೈತರು
ಪಿಎಂ ಕಿಸಾನ್ ಯೋಜನೆಗೆ ಜಿಲ್ಲೆಯಲ್ಲಿ ಒಟ್ಟು 1.72 ಲಕ್ಷ ರೈತರು ಅರ್ಜಿ ಸಲ್ಲಿಸಿದ್ದರು. ಅವರಲ್ಲಿ 1.64 ಲಕ್ಷ ರೈತರ ಪಟ್ಟಿಯನ್ನು ಕೃಷಿ ಇಲಾಖೆ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿತ್ತು. ಅದರಲ್ಲಿ ಈವರೆಗೆ ಮೂರು ಕಂತುಗಳಂತೆ ಆರು ಸಾವಿರ ರೂಪಾಯಿ ರೈತರ ಖಾತೆಗೆ ಜಮೆಯಾಗಿದೆ. ಆದರೆ ಕೇಂದ್ರಕ್ಕೆ ಸಲ್ಲಿಕೆಯಾಗಿದ್ದ ಪಟ್ಟಿಯಲ್ಲಿ ರೈತ ಕುಟುಂಬದ ತೆರಿಗೆ ಪಾವತಿದಾರರು ಸಹ ಇದ್ದು, ಸುಮಾರು 3,201 ಮಂದಿಯ ಪಟ್ಟಿಯನ್ನು ಕೃಷಿ ಇಲಾಖೆ ಸಿದ್ಧಪಡಿಸಿದೆ. ಬಡ ರೈತರಿಗಾಗಿ ರೂಪಿಸಲಾಗಿದ್ದ ಯೋಜನೆಯ ಲಾಭವನ್ನು ತೆರಿಗೆ ಪಾವತಿ ಮಾಡುವವರೂ ಪಡೆದುಕೊಂಡಿದ್ದಾರೆ.
ಕಿಸಾನ್ ಸಮ್ಮಾನ್ ಯೋಜನೆ, ತಿಂಗಳೊಳಗೆ ಮೊದಲ ಕಂತು ಪಾವತಿ: ಸಿಎಂ
ತೆರಿಗೆ ಪಾವತಿದಾರರೂ ಯೋಜನೆಯ ಫಲಾನುಭವಿಗಳು
ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಕೇಂದ್ರ ಸರ್ಕಾರ ರೈತರಿಗೆ ಬಿತ್ತನೆ ಬೀಜ, ಕೃಷಿ ಪರಿಕರಗಳ ಖರೀದಿಗೆ ಅನುಕೂಲವಾಗಲಿ ಎನ್ನುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೊಳಿಸಿದೆ. ಆದರೆ ರೈತ ಕುಟುಂಬದಲ್ಲಿನ ತೆರಿಗೆ ಪಾವತಿದಾರರೂ ಈ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ. ಇದರಿಂದಾಗಿ ಒಂದೆಡೆ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದ್ದು, ಇನ್ನೊಂದೆಡೆ ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ಸಿಗದಂತಾಗಿದೆ. ಹೀಗಾಗಿ ಅಂಥವರಿಗೆ ಇದೀಗ ಹಣವನ್ನು ವಾಪಸ್ ಕಟ್ಟುವಂತೆ ಕೃಷಿ ಇಲಾಖೆ ನೋಟೀಸ್ ನೀಡಲು ಮುಂದಾಗಿದೆ.
ಸರ್ಕಾರಿ ನೌಕರರೂ ಪಟ್ಟಿಯಲ್ಲಿದ್ದಾರೆ!
ಯೋಜನೆಗೆ ಅರ್ಜಿ ಸಲ್ಲಿಸಿದವರಲ್ಲಿ ವ್ಯಾಪಾರಸ್ಥರು, ಸರ್ಕಾರಿ ನೌಕರರೂ ಇರುವುದು ಬೆಳಕಿಗೆ ಬಂದಿದೆ. ಸರ್ಕಾರವೇನೋ ಬಡ ರೈತರ ಅನುಕೂಲಕ್ಕೆಂದು ಯೋಜನೆ ರೂಪಿಸಿದರೆ, ಉಳ್ಳವರು ರೈತರ ಹೆಸರಿನಲ್ಲಿ ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ನಿಜಕ್ಕೂ ದುರಂತವೇ ಆಗಿದೆ.
ಹಣ ವಾಪಸ್ ಪಡೆಯಲು ನೋಟೀಸ್
ಕಿಸಾನ್ ಸಮ್ಮಾನ್ ನಿಧಿಯ ಫಲಾನುಭವಿಗಳಾಗಿದ್ದ 3,201 ತೆರಿಗೆ ಪಾವತಿದಾರರ ಪಟ್ಟಿಯನ್ನು ಕೇಂದ್ರ ಸರ್ಕಾರ ನೀಡಿದೆ. ಈಗಾಗಲೇ ಮೊದಲ ಹಂತವಾಗಿ ಅವರಿಗೆ ನೋಟೀಸ್ ನೀಡಲಾಗಿದ್ದು, ಅವರಿಂದ ಹಣವನ್ನು ಮರುಭರ್ತಿ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ಹೊನ್ನಪ್ಪ ಗೌಡ.