ರೈತರಿಗೆ ಎದುರಾಯ್ತು ಹೊಸ ಸಂಕಷ್ಟ, ಸಚಿವರು ಕೊಟ್ಟ ಎಚ್ಚರಿಕೆ ಏನು?
ಬೆಂಗಳೂರು, ಆ.27: ಯೂರಿಯಾ ಗೊಬ್ಬರದ ಕೃತಕ ಅಭಾವದ ಆರೋಪದ ಬೆನ್ನಲ್ಲೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ರಾಜ್ಯದ ರೈತರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ರೈತರ ಹಿತ ಕಾಯುವ ನಿಟ್ಟಿನಲ್ಲಿ ಪಾಟೀಲ್ ಅವರು ಎಚ್ಚರಿಕೆ ಕೊಟ್ಟಿದ್ದು, ರೈತರು ಎಚ್ಚರಿಕೆಯಿಂದ ಇರವಂತೆ ಮನವಿ ಮಾಡಿದ್ದಾರೆ.
ಅನಾಮಧೇಯ ಕಂಪೆನಿ ಹೆಸರಿನಲ್ಲಿ ರಸಗೊಬ್ಬರವಾಗಲೀ ಬಿತ್ತನೆ ಬೀಜವಾಗಲೀ ಮನೆ ಬಾಗಿಲಿಗೆ ಬಂದರೆ ಅಥವಾ ಯಾರಾದರೂ ನೀಡಿದರೆ ರೈತರು ಅದನ್ನು ಖರೀದಿಸಬಾರದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ರೈತರಿಗೆ ಮನವಿ ರೂಪದ ಎಚ್ಚರಿಕೆ ಕೊಟ್ಟಿದ್ದಾರೆ. ಸದ್ಯ ದೆಹಲಿ ಪ್ರವಾಸದಲ್ಲಿರುವ ಅವರು, ಕೆಲವು ಒಳಸಂಚು ಹಾಗೂ ಅನಾಮಧೇಯ ಕಂಪೆನಿಗಳು ರೈತರ ಮನೆ ಬಾಗಿಲಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಸರಬರಾಜು ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಕೃಷಿ ಇಲಾಖೆ ಈ ಬಗ್ಗೆ ನಿಗಾ ವಹಿಸಿದೆ.
ಕೋವಿಡ್ನಿಂದಾಗಿ ಕೃಷಿಯತ್ತ ಮುಖಮಾಡಿದ ಯುವಕರು
ರೈತರಿಗೆ ಅನ್ಯಾಯವಾಗುವಂತಹ ಯಾವುದೇ ಮೋಸವನ್ನಾಗಲೀ, ನಕಲಿ ಜಾಲವನ್ನಾಗಲೀ ತಾವು ಎಂದಿಗೂ ಸಹಿಸುವುದಿಲ್ಲ. ಈ ಬಗ್ಗೆ ಸೂಕ್ತಕ್ರಮ ವಹಿಸಲಾಗುವುದು. ರೈತರು ಆದಷ್ಟು ಅಧಿಕೃತ ಕಂಪೆನಿಗಳ ಇಲಾಖೆ ರೈತ ಸಂಪರ್ಕ ಕೇಂದ್ರ ಸೂಚಿಸಿದ ಬಿತ್ತನೆ ಬೀಜ ರಾಸಾಯನಿಕ ಗೊಬ್ಬರ ಔಷಧಿಗಳನ್ನೇ ಖರೀದಿಸಿ ಬಳಸಬೇಕು. ಇಂತಹ ಯಾವುದೇ ಅನಾಮಧೇಯ ಪ್ಯಾಕೆಟ್ ಬಂದಲ್ಲಿ ಅಥವಾ ಯಾರಾದರೂ ನೀಡಿದಲ್ಲಿ ಆ ಬಗ್ಗೆ ರೈತರು ಹಾಗೂ ಜನರು ಸಮೀಪದ ರೈತಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಯನ್ನು ಸಂಪರ್ಕಿಸಿ ಮಾಹಿತಿ ನೀಡಬೇಕೆಂದು ಬಿ.ಸಿ. ಪಾಟೀಲ್ ಅವರು ಮನವಿ ಮಾಡಿದ್ದಾರೆ.
ಬೀಜ ಭಯೋತ್ಪಾದನೆ: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ರೈತರಿಗೆ ಅನಾಮಧೇಯ ಹೆಸರಿನಲ್ಲಿ ಬೀಜಗಳು ಬರುತ್ತಿವೆ ಎಂಬ ವಿಚಾರ ಈಗ ಗೊತ್ತಾಯಿತು. ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ತಿಳಿದುಕೊಳ್ಳುತ್ತೇನೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಹೇಳಿದ್ದಾರೆ. ಬೆಂಗಳೂರಿನಲ್ಲಿ ಈ ಕುರಿತು ಪ್ರತಿಕ್ರಿಯೆ ಕೊಟ್ಟಿರುವ ಅವರು ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದಿದ್ದಾರೆ.