ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾಲ್ಗುಣದಿಂದ ಹೆಚ್ಚು ಮಳೆಯಾಗಿದೆ!
ಬೆಂಗಳೂರು, ನ. 14: ಯಾವ ಜನ್ಮದ ಪುಣ್ಯವೋ ಕೆ.ಆರ್. ಪೇಟೆಯಲ್ಲಿ ಸಾಕಷ್ಟು ಪ್ರೀತಿ ಸಿಕ್ಕಿದೆ. ಮಂಡ್ಯ ಜನರ ಪ್ರೀತಿ ಮರೆಯಲು ಸಾಧ್ಯವೇ ಇಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು. ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನನಲ್ಲಿ ರೈತರೊಂದಿಗೆ ಕೃಷಿ ಭೂಮಿಯಲ್ಲಿ ಕೆಲಸ ಮಾಡುವ ಮೂಲಕ ವಿಶಿಷ್ಟವಾಗಿ ತಮ್ಮ ಹುಟ್ಟುಹಬ್ಬ (ನ.14 ರಂದು)ವನ್ನು ಆಚರಿಸಿಕೊಂಡರು.
ನನಗೂ ಮಂಡ್ಯ ಜಿಲ್ಲೆಗೂ ಅವಿನಾಭಾವ ನಂಟಿದೆ. ಹಿಂದೆ 1999ರಲ್ಲಿ ಕೌರವ ಚಿತ್ರದ ಚಿತ್ರೀಕರಣ ಮಂಡ್ಯದಲ್ಲಿ ಆರಂಭವಾಗಿತ್ತು. ಸಿಎಂ ಯಡಿಯೂರಪ್ಪ ಅವರು ಹುಟ್ಟಿದ ತಾಲೂಕು ಕೆ.ಆರ್. ಪೇಟೆ. ಅವರ ಕನಸನ್ನು ನನಸು ಮಾಡಲು ನಾನು ಹಾಗೂ ಸಚಿವ ನಾರಾಯಣಗೌಡ ಅವರು ಪ್ರಯತ್ನಿಸಿ ಕೆಲಸ ಮಾಡುತ್ತಿದ್ದೇವೆ ಎಂದರು. ಬೇರೆ ಉದ್ಯಮಗಳಂತೆ ರೈತರು ಮನೆಯಿಂದಲೇ ಕೆಲಸ (work from home) ಮಾಡಲು ಸಾಧ್ಯವಿಲ್ಲ. ಹೀಗಾಗಿ ಲಾಕ್ಡೌನ್ ಸಂಕಷ್ಟದಲ್ಲಿ ಕೃಷಿ ರೈತನ ಸಂಕಷ್ಟವನ್ನು ಅರಿತು ನನ್ನೊಂದಿಗೆ ನಾರಾಯಣಗೌಡ ಅವರು ಶ್ರಮಿಸಿದ್ದಾರೆ.
ಕೃಷಿ ಎಲ್ಲಾ ಕ್ಷೇತ್ರಗಳಿಗಿಂತಲೂ ಹೆಚ್ಚು ಪ್ರಮುಖವಾಗಿದೆ. ಎಂದಿಗೂ ನಿಲ್ಲಿಸದ ಕಾಯಕ ಕೃಷಿ. ಲಾಕ್ಡೌನ್ನಲ್ಲಿ ಕೃಷಿಕರಿಗೆ ನಿರ್ಬಂಧ ಹಾಕಿದ್ದರೆ ಇಂದಿಗೆ ತಿನ್ನಲು ಅನ್ನ ಸಿಗುತ್ತಿರಲಿಲ್ಲ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತೆಗೆದುಕೊಂಡ ನಿರ್ಧಾರದಿಂದ ಹೆಚ್ಚು ಬಿತ್ತನೆಯಾಗಿದೆ. ಅವರ ಕಾಲ್ಗುಣದಿಂದಲೇ ಹೆಚ್ಚು ಮಳೆಯಾಗಿದೆ ಎಂದರು.
ರೈತರ ಶಕ್ತಿಗಾಗಿ ದಿನ
ಹುಟ್ಟುಹಬ್ಬ ಆಚರಿಸಲು ರೈತರೊಂದಿಗೊಂದು ದಿನ ಆರಂಭಿಸಿಲ್ಲ. ರೈತರ ಶಕ್ತಿಗಾಗಿ ದಿನ ಆರಂಭಿಸಿದ್ದೇನೆ. ರೈತರ ಕಷ್ಟನಷ್ಟ ಅರಿಯಲು ಅನುಭವ ಅರಿಯಲು ಸಮಸ್ಯೆಗೆ ಪರಿಹಾರ ಏನೆಂಬುದನ್ನು ಅರಿಯಲು ಮಂಡ್ಯಕ್ಕೆ ಬಂದಿದ್ದೇನೆ. ರೈತರ ಶಕ್ತಿಯಾಗಲು ಬಯಸಿದ್ದೇನೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಇದೇ ಸಂದರ್ಭದಲ್ಲಿ ಹೇಳಿದರು.
ರೈತರ ಮನೆ ಬಾಗಿಲಿಗೆ ಸರ್ಕಾರ ತರುವ ಉದ್ದೇಶದಿಂದ ಈ ರೈತರೊಂದಿಗೊಂದು ದಿನ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮ ಇಲ್ಲಿಗೆ ನಿಲ್ಲುವುದಿಲ್ಲ. ನಿರಂತರವಾಗಿ ನಡೆಯಲಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಧಾನ್ಯದ ರಾಶಿಗೆ ಪೂಜೆ
ಮಡುವಿನಕೋಡಿಯಲ್ಲಿ ಧಾನ್ಯದ ರಾಶಿಗೆ ಪೂಜೆ ನೆರವೇರಿಸುವ ಮೂಲಕ "ರೈತರೊಂದಿಗೊಂದು ದಿನ" ಕಾರ್ಯಕ್ರಮ ಉದ್ಘಾಟಿಸಿ ಬಿಸಿ ಪಾಟೀಲ್ ಮಾತನಾಡಿದರು. ಸರ್ಕಾರ ರೈತರ ಮನೆಗೆ ಬರಬೇಕೇ ವಿನಃ ರೈತ ಸರ್ಕಾರದ ಹತ್ತಿರ ಹೋಗಿಲ್ಲ ಎಂದರು. ಜೊತೆಗೆ ನಾನು ಇಂದು ಮಾಡಿರುವ ಟ್ರ್ಯಾಕ್ಟರ್ ಚಾಲನೆ, ಬಿತ್ತನೆ ಇತರ ಇತರ ಕೆಲಸಗಳನ್ನು ಬೇರೆ ಯಾರೂ ಮಾಡುವುದಿಲ್ಲ ಎಂದಲ್ಲ. ಇತರರಿಗೂ ಕೃಷಿ ಮಾಡುವ ಸ್ಫೂರ್ತಿ ಬರಲಿ ಎಂಬ ಉದ್ದೇಶದಿಂದ ಕೃಷಿಕರೊಂದಿಗೆ ಇದೆಲ್ಲವನ್ನು ಮಾಡಿದ್ದೇನೆ ಎಂದರು.
ಒಡೆಯನಾಗಿ ದುಡಿಯುವುದೇ ಪುಣ್ಯ
ಇನ್ನೊಬ್ಬರಿಗೆ ಗುಲಾಮರಾಗಿ ಹೋಗುವುದಕ್ಕಿಂತ ಹೊಲದಲ್ಲಿ ಒಡೆಯನಾಗಿ ದುಡಿಯುವುದೇ ಪುಣ್ಯ. ಕೋವಿಡ್ ಸಾಕಷ್ಟು ಪಾಠ ಕಲಿಸಿದೆ. ಯುವಕರ ಉತ್ಸಾಹ ಕೃಷಿ ಉದ್ಯಮ ರೈತೋದ್ಯಮವಾಗಬೇಕು. ಸಮಗ್ರ ಕೃಷಿಯತ್ತ ಆಹಾರ ಸಂಸ್ಕರಣೆಯಾಗಬೇಕು. ಆತ್ಮನಿರ್ಭರ್ ಯೋಜನೆಯಡಿ ಅನುದಾನವನ್ನು ನೀಡಲಾಗುತ್ತಿದೆ ಎಂದರು.
ಸಂಘಗಳು ಆಹಾರ ಸಂಸ್ಕರಣಾ ಘಟಕ ಮಾಡಿದರೆ ಅದಕ್ಕೆ ನಮ್ಮ ಸರ್ಕಾರ ಅನುದಾನ, ಸಹಕಾರ ನೀಡುತ್ತದೆ. ಮಧ್ಯವರ್ತಿಗಳನ್ನು ಬಿಟ್ಟು ರೈತ ಯುವಕರು ನೇರ ಮಾರ್ಕೆಟಿಂಗ್ ಮಾಡಬೇಕು. ಬರೀ ಬೆಳೆ ಬೆಳೆದರೆ ಸಾಲದು, ನಮ್ಮ ಉತ್ಪನ್ನಕ್ಕೆ ನಾವೇ ಮಾರ್ಕೆಟಿಂಗ್ ಮಾಡಬೇಕು ಎಂದು ಬಿಸಿ ಪಾಟೀಲ್ ಸಲಹೆ ನೀಡಿದರು.
ಪಂಚಾಯಿತಿಗೊಂದು ಮಣ್ಣು ಪರೀಕ್ಷಾ ಕೇಂದ್ರ
ರೈತರು ಬರೀ ಕಬ್ಬು, ಬತ್ತವನ್ನೆ ನೆಚ್ಚಿಕೊಂಡರೆ ಸಾಲದು. ಸಮಗ್ರ ಕೃಷಿಯತ್ತ ಮಂಡ್ಯದ ರೈತರು ಮುಂದಾಗಬೇಕು. ಬತ್ತದ ಜೊತೆ ಇತರೆ ಕೃಷಿಯನ್ನು ಮಾಡಬೇಕು. ಮಿಶ್ರಬೆಳೆ ಬೆಳೆಯಬೇಕು. ನೀರೇ ಬರದ ಕೋಲಾರದಲ್ಲಿ ಸಮಗ್ರ ಕೃಷಿ ಅಳವಡಿಸಿ, ನೇರ ಮಾರ್ಕೆಟಿಂಗ್ ಮಾಡುತ್ತಿರುವ ರೈತರು, ನಾವು ಆತ್ಮಹತ್ಯೆ ಮಾಡಿಕೊಳ್ಳಲ್ಲ ಎಂಬ ಆತ್ಮವಿಶ್ವಾಸ ಹೊಂದಿದ್ದಾರೆ. ಅದರಂತೆ ಮಂಡ್ಯದವರು ಆತ್ಮವಿಶ್ವಾಸಿಗಳಾಗಬೇಕು ಎಂದು ಬಿ.ಸಿ. ಪಾಟೀಲ್ ರೈತರಲ್ಲಿ ಮನವಿ ಮಾಡಿದರು.
ರೈತರು ತಮ್ಮ ಜಮೀನಿನ ಮಣ್ಣು ಪರೀಕ್ಷೆ ಮಾಡಿಸಬೇಕು. ರಾಜ್ಯದಲ್ಲಿ ಸದ್ಯ ಒಟ್ಟು 242 ಮಣ್ಣಿನಪರೀಕ್ಷಾ ಕೇಂದ್ರಳಿವೆ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿಗೊಂದು ಮಣ್ಣುಪರೀಕ್ಷಾ ಕೇಂದ್ರ ಆರಂಭಿಸುವ ಚಿಂತನೆ ಮಾಡಲಾಗಿದೆ. ನಗರದಲ್ಲಿರುವವರು ಕೂಡ ವೀಕೆಂಡ್ ಅಗ್ರಿಕಲ್ಚರ್ ಆರಂಭಿಸಿ, ಕೃಷಿ ಹವ್ಯಾಸ ಮೂಡಿಸಿ ಕೊಳ್ಳಬೇಕೆಂದರು.