ಕನಿಷ್ಠ ಬೆಂಬಲ ಬೆಲೆ ಮುಂದುವರಿಯಲಿದೆ: ಕೇಂದ್ರ ಸಚಿವ ಡಿ.ವಿ ಸದಾನಂದಗೌಡ
ಮೈಸೂರು, ಅಕ್ಟೋಬರ್ 8: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರ ಆದಾಯ ದ್ವಿಗುಣಗೊಳಿಸಬೇಕು ಎಂಬ ಉದ್ದೇಶದಿಂದಲೇ ಕೃಷಿ ತಿದ್ದುಪಡಿ ಮಸೂದೆ ಜಾರಿಗೆ ತಂದಿದೆ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಡಿ.ವಿ ಸದಾನಂದಗೌಡ ತಿಳಿಸಿದರು. ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ, ವಿವಿಧ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ, ಕಿಸಾನ್ ಕಾರ್ಡ್, ಸೊಯ್ಲ ಹೆಲ್ತ್ ಕಾರ್ಡ್, ಕಡಿಮೆ ಬಡ್ಡಿದರದ ಸಾಲ, ಆನ್ ಲೈನ್ ಮೂಲಕ ಕೃಷಿ ಉತ್ಪನ್ನ ಮಾರಾಟಕ್ಕಾಗಿ ಇ-ನ್ಯಾಮ್ ಡಿಜಿಟಲ್ ಪ್ಲಾಟ್ ಫಾರ್ಮ್ ಜಾರಿಗೊಳಿಸಲಾಗಿದೆ ಎಂದರು.
ಪಿಎಂ ಕಿಸಾನ್ ಯೋಜನೆಯಡಿ ಪ್ರತಿ ರೈತರಿಗೆ ವರ್ಷಕ್ಕೆ 6 ಸಾವಿರದಂತೆ ನೇರ ನಗದು ವರ್ಗಾವಣೆ ಸಮಯಕ್ಕೆ ಸರಿಯಾಗಿ ಸಮರ್ಪಕ ಗೊಬ್ಬರ ಸರಬರಾಜು, ವೃದ್ಧಾಪ್ಯ ಪಿಂಚಣಿ, ಬೆಳೆ ವಿಮೆ, ನೀರಾವರಿ ಸೌಲಭ್ಯ ಹೆಚ್ಚಳ, ಕೋಲ್ಡ್ ಸ್ಟೋರೇಜ್ ಸರಪಣಿ ವಿಸ್ತರಣೆ ರಫ್ತಿಗೆ ಪ್ರೋತ್ಸಾಹ ಸೇರಿದಂತೆ ಹಲವು ಯೋಜನೆ ನೀಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಸದಾನಂದಗೌಡರು ತಿಳಿಸಿದರು.
ಕೇಂದ್ರ ಸರ್ಕಾರ ಕೃಷಿಯಲ್ಲಿ ಐತಿಹಾಸಿಕ ಬದಲಾವಣೆ ತಂದಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಕೃಷಿ ವಲಯದ ಅಮೂಲಾಗ್ರ ಸುಧಾರಣೆಗಾಗಿ ಮಸೂದೆ
ಸ್ವಾವಲಂಬಿ ಭಾರತ ಯೋಜನೆಯಲ್ಲೂ ಕೃಷಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಒಂದು ಲಕ್ಷ ಕೋಟಿ ರುಪಾಯಿ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು. ಕೃಷಿ ವಲಯದ ಅಮೂಲಾಗ್ರ ಸುಧಾರಣೆಗಾಗಿ ನಮ್ಮ ಸರ್ಕಾರ ಕೃಷಿ ಸಂಬಂಧಿತ ಮೂರು ಮಸೂದೆಗಳನ್ನು ರಚಿಸಲು ಮುಂದಾಯಿತು. ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ಸುಗಮೀಕರಣ) ಮಸೂದೆ 2020, ರೈತರ(ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಒಪ್ಪಂದ ಮಸೂದೆ 2020, ಅಗತ್ಯ ಸರಕುಗಳ(ತಿದ್ದುಪಡಿ) ಮಸೂದೆ 2020 ಕೃಷಿ ಮಸೂದೆಗಳು ದಶಕಗಳಿಂದ ವಿವಿಧ ಸಂಕೋಲೆಗಳಿಂದ ಬಳಲುತ್ತಿದ್ದ ರೈತರ ಸಮುದಾಯವನ್ನು ಬಂಧಮುಕ್ತಗೊಳಿಸಿವೆ ಎಂದು ಹೇಳಿದರು.
ವಿರೋಧ ಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಯತ್ನ
ಕೇಂದ್ರವು ಅಂಗೀಕರಿಸಿದ ಹೊಸ ಕಾಯ್ದೆಗಳಿಂದ ಎಲ್ಲ ಬಂಧಗಳಿಂದ ಮುಕ್ತಗೊಳಿಸಿದೆ. ರೈತರು ಈಗ ತಮ್ಮ ಉತ್ಪನ್ನಗಳನ್ನು ದೇಶದ ಯಾವುದೇ ಮೂಲೆಯಲ್ಲಿ ಯಾರಿಗೆ ಬೇಕಾದರೂ ತಮಗಿಷ್ಟ ಬಂದ ದರದಲ್ಲಿ ಮಾರಬಹುದು. ವಿರೋಧ ಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿರುವುದು ಮಾತ್ರ ವಿಷಾದನೀಯ ಎಂದು ವಾಗ್ದಾಳಿ ನಡೆಸಿದರು.
ಮಸೂದೆಗಳ ಬಗ್ಗೆ ಸುಳ್ಳಿನ ಮಹಾಪೂರ
ಈ ರೈತ ಪರ ಮಸೂದೆಗಳಲ್ಲಿ ವಿರೋಧ ಪಕ್ಷಗಳಿಗೆ ಏನೂ ಋಣಾತ್ಮಕ ಅಂಶಗಳು ಸಿಗುತ್ತಿಲ್ಲ. ಹಾಗಾಗಿ ಮಸೂದೆಗಳ ಬಗ್ಗೆ ಸುಳ್ಳಿನ ಮಹಾಪೂರವನ್ನೇ ಹರಿಸಿ ಸರ್ಕಾರದ ವಿರುದ್ಧ ರೈತರನ್ನು ಎತ್ತಿಕಟ್ಟುವ ಪ್ರಯತ್ನ ನಡೆಸಿದ್ದು, ಹೇಗಾದರೂ ಸರ್ಕಾರದ ಹೆಸರು ಕೆಡಿಸಬೇಕು ಎಂದು ಪ್ರಯತ್ನಿಸುತ್ತಿವೆ ಎಂದು ಸಚಿವ ಸದಾನಂದಗೌಡರು ಆರೋಪಿಸಿದರು.
ರೈತ ಸಮುದಾಯಕ್ಕೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ
ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಹಿಂತೆಗೆದುಕೊಳ್ಳಲಾಗುತ್ತದೆ ಎಂಬ ಹಸೀ ಸುಳ್ಳನ್ನು, ಮಸೂದೆ ವಿರೋಧಿಗಳು ರೈತ ಸಮುದಾಯದಲ್ಲಿ ಹರಡುತ್ತಿದ್ದಾರೆ. ಅಂತಹ ಯಾವ ಅಂಶವೂ ಮಸೂದೆಯಲ್ಲಿ ಇಲ್ಲ. ಭವಿಷ್ಯದಲ್ಲಿ ಅಂತಹ ಕ್ರಮ ಕೈಗೊಳ್ಳುವ ಯೋಚನೆ ಕೂಡ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು. ಕನಿಷ್ಠ ಬೆಂಬಲ ಬೆಲೆ ಮುಂದುವರಿಯುವುದಷ್ಟೇ ಅಲ್ಲ. ಆ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲಾಗುತ್ತದೆ ಸ್ಪಷ್ಟಪಡಿಸಿದರು.