ಹಣಕೋಣ ಯೋಜನೆ ಸಾಧ್ಯವಿಲ್ಲ, ಪಾಟ್ಕರ್
ಕಾರವಾರ, ಡಿ. 20 : ಹಣಕೋಣ ಗ್ರಾಮದಲ್ಲಿ ಯಾವುದೇ ಕಾರಣಕ್ಕೂ ಉಷ್ಣವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ಹಣಕೋಣ ವಿಷಯದಲ್ಲಿ ಕಾನೂನು ಜನಪರವಾಗಿದ್ದರೆ ಸರಿ. ಜನಹಿತ ಕಡೆಗಣಿಸುವ ತೀರ್ಪುಗಳು ಬಂದರೆ ಕಾನೂನು ಕೈಗೆತ್ತಿಕೊಳ್ಳಲು ಹಿಂಜರಿಯುವುದಿಲ್ಲ ಎಂದು ಪರಿಸರವಾದಿ ಮೇಧಾ ಪಾಟ್ಕರ್ ಎಚ್ಚರಿಸಿದ್ದಾರೆ.
ಹಣಕೋಣದ ಸಾತೇರಿ ದೇವಸ್ಥಾನದಲ್ಲಿ ಹಣಕೋಣ ಉಷ್ಣಸ್ಥಾವರ ವಿರೋಧಿ ಹೋರಾಟಗಾರರನ್ನುದ್ದೇಶಿಸಿ ಶನಿವಾರ ಮಾತನಾಡಿದ ಅವರು, ಹಣಕೋಣ ಹೋರಾಟಗಾರರ ಮೇಲೆ ನಡೆಸಲಾದ ದೌರ್ಜನ್ಯ ಅಮಾನವೀಯ. ಹೋರಾಟಗಾರರ ಶಕ್ತಿ ಏನೆಂಬುದು ಸರಕಾರಕ್ಕೆ ಗೊತ್ತು. ಹೀಗಾಗಿ ಇಲ್ಲಿನ ಜೈಲಿನಲ್ಲಿಟ್ಟರೆ ತಾವೇ ತೊಂದರೆಗೆ ಒಳಗಾಗಬೇಕಾಗುತ್ತದೆ ಎಂಬುದನ್ನು ಅರಿತೇ ಎಲ್ಲರನ್ನು ಬಳ್ಳಾರಿ ಜೈಲಿನಲ್ಲಿ ಇರಿಸಲಾಗಿತ್ತು. ಉಷ್ಣ ಸ್ಥಾವರ ಇಲ್ಲಿಂದ ತೊಲಗುವವರೆಗೆ ಹೋರಾಟ ಮುಂದುವರಿಯುತ್ತದೆ. ಎಂಥ ದೌರ್ಜನ್ಯಕ್ಕೂ ನಾವು ಬಗ್ಗುವುದಿಲ್ಲ ಎಂದರು.
ವಿಕಾಸದ ಅನುಷ್ಠಾನ ಸುಳ್ಳಿನ ಆಧಾರದ ಮೇಲೆ ಆಗುತ್ತಿದ್ದು ಪರಿಸರ ಹಾಗೂ ಜನಜೀವನವನ್ನು ವಿನಾಶದತ್ತ ತಳ್ಳುತ್ತಿದೆ. ನಮಗೆ ವಿಕಾಸ ಬೇಕು. ಆದರೆ ವಿನಾಶ ಬೇಡ. ಕಾಳಿ ನದಿ ಇಲ್ಲಿನ ಜನರ ಜೀವನಾಡಿ. ಇಲ್ಲಿನ ವಿಕಾಸ ಯಾವ ರೀತಿಯದ್ದಿರಬೇಕು ಎಂಬುದನ್ನು ನಿರ್ಧರಿಸಬೇಕಾದದ್ದು ಈ ಕೊಳ್ಳವನ್ನು ಅವಲಂಬಿಸಿ ಜೀವಿಸುವ ಜನತೆ ಎಂದ ಮೇಧಾ, ಕೋಟ್ಯಂತರ ಜೀವಿಗಳಿಗೆ ಜೀವನ ನೀಡುವ ಸಮುದ್ರ ಮುಂದೆ ಬರದಂತೆ ತಡೆಯುವ ಶಕ್ತಿ ನದಿಗಳಿಗಿದೆ ಎಂದು ಹೇಳಿದರು.
ಹಣಕೋಣ ಹೋರಾಟದಲ್ಲಿ ಯಾರೂ ಕಲ್ಲು ತೂರಿಲ್ಲ, ಬಂದೂಕು ಎತ್ತಿಕೊಂಡಿಲ್ಲ. ತಮ್ಮ ಮೇಲೆ ದೌರ್ಜನ್ಯ ನಡೆದಾಗಲೂ ಹೋರಾಟಗಾರರು ಶಾಂತಿಯುತವಾಗಿ ಚಳವಳಿ ಮುಂದುವರಿಸಿರುವುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು. ಮೇಧಾ ಪಾಟ್ಕರ್ ಕೋಡಿಬಾಗದಿಂದ ಹಣಕೋಣದವರೆಗೆ ಕಾಳಿ ನದಿಯಲ್ಲಿ ಬೋಟ್ ಮೂಲಕವೇ ತೆರಳಿದರು.