ಭಾರತದ ಮಾನವ ಸಂಪನ್ಮೂಲ ಕೃಷಿಯಲ್ಲಿ ತೊಡಗಿಕೊಳ್ಳುವ ಅಗತ್ಯವಿದೆ
ನವದೆಹಲಿ ಜೂ. 25: ಕೃಷಿ ಪ್ರಧಾನ ದೇಶವಾದ ಭಾರತ ಅಪಾರ ಜನಸಂಖ್ಯೆ ಹೊಂದಿದೆ. ಈ ಮಾನವ ಶಕ್ತಿ ರೈತರ ರೂಪದಲ್ಲಿ ಕೃಷಿ ಕ್ಷೇತ್ರದಲ್ಲಿ ಸದ್ಭಳಕೆಯಾದರೆ ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕೆ (ಜಿಡಿಪಿ) ಅಪಾರ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ಭವಿಷ್ಯದ ಆಹಾರ ಭದ್ರತೆಯು ಸುಸ್ಥಿರವಾಗುತ್ತದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದರು.
ಶನಿವಾರ ಭಾರತೀಯ ಸುಸ್ಥಿರತೆಯ ಕಾನ್ ಕ್ಲೇವ್ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೃಷಿ ಪ್ರಧಾನ ದೇಶದಲ್ಲಿ ಕೃಷಿಯನ್ನೆ ಕಡೆಗಣಿಸಿದರೆ ಎಷ್ಟೇ ಆರ್ಥಿಕ ಅಭಿವೃದ್ಧಿ ಹೊಂದಿದರು ಎಲ್ಲವು ಶೂನ್ಯವಾಗುತ್ತದೆ. ಕೃಷಿಯತ್ತ ದಿನೇ ದಿನೆ ಒಲವು ಕಡಿಮೆಯಾಗುತ್ತಿದೆ. ಹೀಗೆ ನಿರ್ಲಕ್ಷಿಸದರೇ ನಮ್ಮಲ್ಲಿ ಎಷ್ಟೇ ಹಣವಿದ್ದರು ಕೃಷಿ ಉತ್ಪನ್ನಗಳ ಖರೀದಿಸದ ಸ್ಥಿತಿ ತಲುಪಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಸ್ವಾತಂತ್ರ್ಯದ ಸಮಯದಲ್ಲಿ ಕೇವಲ ಕೃಷಿ ಕೇತ್ರದಿಂದ ಒಟ್ಟು ದೇಶಿಯ ಉತ್ಪನ್ನ (ಜಿಡಿಪಿ) ಶೇ.50ರಷ್ಟು ಬರುತ್ತಿತ್ತು. ಆಗ ಇತರ ಉದ್ಯಮಗಳು ಅಷ್ಟಾಗಿ ಬೆಳೆದಿರಲಿಲ್ಲ. ನಂತರದ ದಿನಗಳಿಂದ ಈವರೆಗೆ ಕೃಷಿ ತೆವಳುತ್ತಾ ಸಾಗಿದರೆ, ಇತರ ಉದ್ಯಮಗಳು ಬೆಳೆದಿವೆ. ಪರಿಣಾಮ ಅವುಗಳಿಂದ ಹೆಚ್ಚು ಜಿಡಿಪಿ ಸಂದಾಯವಾಗುತ್ತಿದೆ. ಇದು ಬದಲಾಗಬೇಕಾದರೆ ದೇಶದ ಮಾನವ ಶಕ್ತಿ ಕೃಷಿಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.
'ಶ್ರೇಷ್ಠ ಭಾರತ'ದ ಸಾಕಾರಕ್ಕೆ ಮೋದಿ ನಾಯಕತ್ವ:
ಸುದೀರ್ಘ ಅವಧಿಯ ದೇಶದ ಅಧಿಕಾರ ಪ್ರಧಾನಿ ನರೇಂದ್ರ ಮೋದಿ ಅವರಂತಹ ಧೀಮಂತ, ಕನಸುಗಾರ ನಾಯಕ ಕೈಗೆ ಸಿಕ್ಕಿದೆ. ಅವರು 'ಶ್ರೇಷ್ಠ ಭಾರತ'ದ ಕನಸು ಕಟ್ಟಿದ್ದಾರೆ. ಕೃಷಿ ಸೇರಿದಂತೆ ಎಲ್ಲ ರಂಗದಲ್ಲೂ ಬದಲಾವಣೆ ತರುವ ಗುರಿ ಇಟ್ಟುಕೊಂಡಿದ್ದು, ಅವರು ದೂರದೃಷ್ಟಿ ಉಳ್ಳವರಾಗಿದ್ದಾರೆ ಎಂದು ತೋಮರ್ ಹೇಳಿದರು.
ನಿಜವಾದ ಅಭಿವೃದ್ಧಿ ಅಂದರೇನು?
ಅಭಿವೃದ್ಧಿ ಎಂದರೆ ಕೇವಲ ಬೃಹತ್ ಕಟ್ಟಡ, ರಸ್ತೆಗಳು, ಮನೆಗಳನ್ನು ಹೊಂದುವುದು ಅಭಿವೃದ್ಧಿಯಲ್ಲ. ಬದಲಾಗಿ ಸಮಾಜದ ಕಟ್ಟ ಕಡೆಯ ದುರ್ಬಲ ವ್ಯಕ್ತಿಯ ಜೀವನದಲ್ಲಿ ಸಾಕಾರಾತ್ಮಕ ಬದಲಾವಣೆ ತರಬೇಕು ಅದು ನಿಜವಾದ ಅಭಿವೃದ್ಧಿ. ದೇಶದ ಮಾನವ ಸಂಪನ್ಮೂಲವನ್ನು ವರವಾಗಿ ಪರಿಗಣಿಸಬೇಕು. ಎಲ್ಲರು ಪ್ರತಿ ಕ್ಷೇತ್ರದಲ್ಲೂ ತೊಡಗಿಸಿಕೊಳ್ಳಬೇಕು. ತಮ್ಮದೇ ಆದ ಕೊಡುಗೆ ನೀಡಬೇಕು. ಈ ನಿಟ್ಟಿನಲ್ಲಿ ಕೃಷಿಯತ್ತ ಹೆಚ್ಚಿನ ಆಸಕ್ತಿ ವಹಿಸಬೇಕು. ಆಗ ಪ್ರತಿ ಕ್ಷೇತ್ರವು ಅಭಿಯಾಗುತ್ತದೆ ಎಂದು ಸಲಹೆ ನೀಡಿದರು.
ಕೃಷಿ ಅವಲಂಬನೆ ಶೇ.60ರಷ್ಟು:
ದೇಶದ ಒಟ್ಟು ಜನಂಖ್ಯೆ ಪೈಕಿ ಶೇ. 60ರಷ್ಟು ಮಂದಿಯ ಜೀವನೋಪಾಯ ಕೃಷಿ ಮೇಲೆಯೇ ಅವಲಂಬಿತವಾಗಿದೆ. ಹೀಗಿದ್ದರು ಕೃಷಿ ಹಿಂದುಳಿದಿದೆ. ಇನ್ನು ಶೇ.86ರಷ್ಟು ಇರುವ ಸಣ್ಣ ಕೃಷಿಕರು ಇದ್ದಾರೆ. ಅವರೆಲ್ಲ ತಂತ್ರಜ್ಞಾನ, ಆಧುನಿಕ ಉಪಕರಣಗಳನ್ನು ಕೃಷಿಯಲ್ಲಿ ಅಳವಡಿಕೆ ಮಾಡಿಕೊಳ್ಳಬೇಕು. ಕೃಷಿ ಉತ್ಪಾದನೆ ಗುಣಮಟ್ಟವನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸಬೇಕಾದ ಅವಶ್ಯಕತೆ ಇದೆ.
ಕಾಂಗ್ರೆಸ್ ಅವಧಿಯಲ್ಲಿ ಕೃಷಿ ಅಭಿವೃದ್ಧಿ ಕುರಿತು ಧೋರಣೆಗಳು ಅಷ್ಟಕಷ್ಟೆ. ಹೀಗಾಗಿ ಕೃಷಿಗೆ ಅಗತ್ಯ ಆದ್ಯತೆ ಸಿಕ್ಕಿರಲಿಲ್ಲ. ಇದರಿಂದ ರೈತರ ಆದಾಯವು ಹೆಚ್ಚಾಗಲಿಲ್ಲ. ಪ್ರಸ್ತುತದಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ರೈತರನ್ನು ಸಬಲೀಕರಣಗೊಳಿಸಲಾಗುತ್ತಿದೆ. ಕೃಷಿಯಲ್ಲಿ ಡ್ರೋಣ್ ಬಳಕೆ, ಅಗ್ರಿಮಿಷನ್ ಮತ್ತು ಖಾಸಗಿ ಹೂಡಿಕೆಗೆ ಉತ್ತೇಜನ ನೀಡಲಾಗುತ್ತಿದೆ ಎಂದು ಬಿಜೆಪಿ ಸರ್ಕಾರ ಕೃಷಿಗೆ ನೀಡುತ್ತಿರುವ ಆದ್ಯತೆ ಕುರಿತು ಅವರು ವಿವರಿಸಿದರು.
ಆಹಾರ ಉತ್ಪಾದನೆಯಲ್ಲಿ ಭಾರತ ವಿಶ್ವ ನಾಯಕ
ಕೇಂದ್ರ ಸರ್ಕಾರ ಅಗ್ರಿ ಸ್ಟಾರ್ಟಪ್ ಗಳಿಗೆ ಉತ್ತೇಜನ ನೀಡುವ ಜತೆಗೆ ಅಲ್ಪಾವಧಿ ಸಾಲದಲ್ಲಿ 16 ಲಕ್ಷ ಕೋಟಿಗಳನ್ನು ರೈತರಿಗೆ ಒದಗಿಸಲಾಗುತ್ತಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿಯಿಂದ ಕೋಟ್ಯಂತರ ಅರ್ಹ ರೈತರ ಖಾತೆ ನೇರವಾಗಿ ವಾರ್ಷಿಕ ಆರು ಸಾವಿರ ರೂ.ಜಮೆ ಮಾಡಲಾಗುತ್ತಿದೆ. ಕೊರೋನಾ ಕಾಲದಲ್ಲಿ 80 ಕೋಟಿ ಜನರಿಗೆ ಉಚಿತ ಪಡಿತರ ವಿತರಿಸಲಾಗುತ್ತಿದೆ. ಇಂತಹ ಯೋಜನೆಗಳಿಂದ ಭಾರತ ಸಾಂಕ್ರಾಮಿಕ ಪಿಡುಗಿನಲ್ಲೂ ಆಹಾರ ಉತ್ಪಾದನೆಯಲ್ಲಿ ವಿಶ್ವ ನಾಯಕನಾಗಿದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ರಾಜ್ಯ ಖಾತೆ ಸಚಿವ ಕೈಲಾಶ್ ಚೌಧರಿ ಮತ್ತಿತರರು ಪಾಲ್ಗೊಂಡಿದ್ದರು.