ಲಕ್ಷ್ಮೀಪುರದ ರೈತನ ಸಂಕಷ್ಟ ನಿವಾರಿಸಿದ ಮೆಣಸಿನಕಾಯಿ
ಮಂಡ್ಯ, ಡಿಸೆಂಬರ್ 01: ರೈತರು ಒಂದೇ ಬೆಳೆಗೆ ಜೋತು ಬೀಳದೆ ಕಾಲಕ್ಕೆ ಮತ್ತು ಬೇಡಿಕೆಗೆ ತಕ್ಕಂತೆ ಬೆಳೆಗಳನ್ನು ಬೆಳೆಯುವ ಜಾಣ್ಮೆ ಬೆಳೆಸಿಕೊಂಡರೆ ಕೃಷಿಯಲ್ಲಿಯೂ ಲಾಭವನ್ನು ಕಾಣಬಹುದು ಎಂಬುದನ್ನು ಇತರೆ ರೈತರಿಗೆ ಮಂಡ್ಯದ ಪ್ರಗತಿಪರ ರೈತ ವಿಜಯೇಂದ್ರ ಮತ್ತು ಪುತ್ರ ಕಾರ್ತಿಕ್ ತೋರಿಸಿಕೊಟ್ಟಿದ್ದಾರೆ.
ಇತ್ತೀಚೆಗಿನ ದಿನಗಳಲ್ಲಿ ಕೃಷಿ ಮಾಡುವುದೇ ರೈತರಿಗೆ ಸವಾಲಾಗಿದೆ. ಆದಾಯಕ್ಕಿಂತ ಖರ್ಚು ಹೆಚ್ಚಾಗಿ, ಬೆಳೆದ ಬೆಳೆಗೆ ಸೂಕ್ತ ದರವೂ ಸಿಗದೆ ಸಾಲಗಾರರಾಗಿಯೇ ಬದುಕಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ. ಬಹಳಷ್ಟು ರೈತರು ಸಾಂಪ್ರದಾಯಿಕವಾಗಿ ಬೆಳೆದುಕೊಂಡು ಬಂದ ಬೆಳೆಗಳಿಗೆ ಜೋತು ಬಿದ್ದಿರುವ ಕಾರಣ ನಷ್ಟವನ್ನು ಅನುಭವಿಸುತ್ತಲೇ ಇದ್ದಾರೆ. ಆದರೆ ತಾವು ಯಾವ ಬೆಳೆ ಬೆಳೆದರೆ ಲಾಭದಾಯಕ ಎಂಬುದನ್ನು ಮೊದಲೇ ಅರಿತು ಬೆಳೆಗಳನ್ನು ಬೆಳೆದರೆ ನಷ್ಟದಿಂದ ಮುಕ್ತರಾಗಲು ಸಾಧ್ಯವಿದೆ ಎಂಬುದಕ್ಕೆ ಪ್ರಗತಿಪರ ರೈತ ವಿಜಯೇಂದ್ರ ನಿದರ್ಶನರಾಗಿದ್ದಾರೆ. ಮುಂದೆ ಓದಿ...
ಲಾಭ ತರದ ಭತ್ತ-ಕಬ್ಬು ಬೆಳೆ
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿಗೆ ಸೇರಿದ ಲಕ್ಷ್ಮೀಪುರ ಗ್ರಾಮದ ರೈತ ವಿಜಯೇಂದ್ರ ಅವರು ಹಿಂದಿನಿಂದಲೂ ತಮಗಿರುವ ಮೂರು ಎಕರೆ ಪ್ರದೇಶದಲ್ಲಿ ಭತ್ತ ಮತ್ತು ಕಬ್ಬು ಬೆಳೆಯುತ್ತಾ ಬಂದಿದ್ದರಾದರೂ ಅದರಿಂದ ಅವರಿಗೆ ಅಂತಹ ಲಾಭವೇನು ಆಗುತ್ತಿರಲಿಲ್ಲ. ಮಾಡಿದ ಖರ್ಚು ಭರಿಸುವುದೇ ಕಷ್ಟವಾಗುತ್ತಿತ್ತು. ಹೀಗಿರುವಾಗಲೇ ಅವರಿಗೆ ಹೊಸದೊಂದು ಆಲೋಚನೆ ಹೊಳೆದಿತ್ತು. ಅದೇನೆಂದರೆ, ಸದ್ಯಕ್ಕೆ ಮಾಮೂಲಿಯಾಗಿ ಬೆಳೆಯುವ ಬೆಳೆಯನ್ನು ನಿಲ್ಲಿಸಿ ಬೇರೆ ಏನಾದರೂ ಬೆಳೆಯನ್ನು ಬೆಳೆಯುವ ಬಗ್ಗೆ ಚಿಂತನೆ ಮಾಡಿದರು.
ಮೊಲ ಸಾಕಣೆ; ಹವ್ಯಾಸವನ್ನೇ ಆದಾಯವಾಗಿಸಿಕೊಂಡ ಕೋಲಾರದ ಉಪನ್ಯಾಸಕ
ಮೆಣಸು ಬೆಳೆಯಲು ಮುಂದಾದ ರೈತ
ತಮಗಿರುವ ಮೂರು ಎಕರೆ ಜಮೀನಿನ ಪೈಕಿ ಎರಡು ಎಕರೆ ಪ್ರದೇಶದಲ್ಲಿ ಪದ್ಮ ಮತ್ತು ಕಲಾ ಸೀಡ್ಸ್ 861 ತಳಿಯ ಮೆಣಸಿನ ಗಿಡಗಳನ್ನು ನೆಟ್ಟು ಮೆಣಸಿನ ಕಾಯಿ ಕೃಷಿ ಮಾಡಿದರೆ, ಇನ್ನೊಂದು ಎಕರೆ ಪ್ರದೇಶದಲ್ಲಿ ಎಲೆಕೋಸು ಬೆಳೆಯಲು ಮುಂದಾದರು. ಮೆಣಸಿನ ಕಾಯಿ ಕೃಷಿಯಲ್ಲಿ ಜಾಣ್ಮೆ ತೋರಿಸಿರುವ ಎರಡು ಎಕರೆ ಪ್ರದೇಶವನ್ನು ಏಳು ಭಾಗಗಳನ್ನಾಗಿ ಮಾಡಿದ್ದಾರೆ. ಸುಮಾರು ಒಂದೂವರೆ ಲಕ್ಷ ಖರ್ಚು ಮಾಡಿ ಬೆಳೆದ ಮೆಣಸು ಮತ್ತು ಎಲೆಕೋಸು ಬೆಳೆ ಅವರ ಕೈಹಿಡಿಯುವ ಎಲ್ಲ ಲಕ್ಷಣಗಳು ಕಂಡು ಬಂದಿವೆ.
ಭರವಸೆ ಮೂಡಿಸಿದ ಮೆಣಸಿನ ಕೃಷಿ
ಈಗಾಗಲೇ ಮೆಣಸಿನಕಾಯಿ ಗಿಡಗಳು ಹುಲುಸಾಗಿ ಬೆಳೆದಿದ್ದು ಎರಡು ಫಸಲು ಬಿಡುತ್ತಿವೆ. ಎರಡು ತಿಂಗಳ ಅವಧಿಯಲ್ಲಿ ಇದುವರೆಗೆ ಎರಡರಿಂದ ಮೂರು ಬಾರಿ ಕೊಯ್ಲು ಮಾಡಲಾಗಿದ್ದು, ಪ್ರತಿದಿನವೂ ಆರೇಳು ಕ್ವಿಂಟಾಲ್ ಮೆಣಸಿನ ಕಾಯಿಯನ್ನು ಪಡೆಯುತ್ತಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಇವರಿಗೆ ಮಾರುಕಟ್ಟೆಯ ಸಮಸ್ಯೆ ಕಾಣಿಸಿಲ್ಲ. ವ್ಯಾಪಾರಸ್ಥರು ನೇರವಾಗಿ ವಾಹನಗಳೊಂದಿಗೆ ಜಮೀನಿಗೆ ತೆರಳುತ್ತಿದ್ದು, ಮೈಸೂರು ಎಪಿಎಂಸಿ ಮಾರುಕಟ್ಟೆಯ ದರದಲ್ಲಿಯೇ ಖರೀದಿಸುತ್ತಿದ್ದಾರೆ. ಹೀಗಾಗಿ ಸರಾಸರಿ ಕೆಜಿಯೊಂದಕ್ಕೆ ಇಪ್ಪತೈದರಿಂದ ಮೂವತ್ತು ರೂಪಾಯಿ ದರ ದೊರೆಯುತ್ತಿದೆ. ಇನ್ನೊಂದೆರಡು ತಿಂಗಳ ಕಾಲ ಫಸಲು ದೊರೆಯುವ ಸಾಧ್ಯತೆ ಇರುವುದರಿಂದ ಸುಮಾರು ಐದು ಲಕ್ಷಕ್ಕೂ ಹೆಚ್ಚು ಆದಾಯ ಬರುವ ನಿರೀಕ್ಷೆಯನ್ನು ಅವರು ಹೊಂದಿದ್ದಾರೆ.
ಮೈಸೂರಿನ ಇಂಜಿನಿಯರಿಂಗ್ ಪದವೀಧರನ ಸಾವಯವ ಕೃಷಿ ಯಶೋಗಾಥೆ
ರೈತನನ್ನು ಅಭಿನಂದಿಸಿದ ಕೃಷಿ ಸಚಿವರು
ಈಗಾಗಲೇ ವಿಜಯೇಂದ್ರರವರು ಬೆಳೆದಿರುವ ಮೆಣಸಿನಕಾಯಿ ತೋಟಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಮತ್ತು ಸಚಿವ ನಾರಾಯಣಗೌಡ ಅವರು ಇತರೆ ರೈತರೊಂದಿಗೆ ಭೇಟಿ ನೀಡಿ ಕೃಷಿ ಮಾದರಿ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರೈತ ವಿಜಯೇಂದ್ರ ಅವರಿಗೆ ಬೆನ್ನೆಲುಬಾಗಿ ಪುತ್ರ ಕಾರ್ತಿಕ್ ನಿಂತಿರುವುದು ವಿಶೇಷವಾಗಿದೆ.