ಬೆಂಗಳೂರಲ್ಲೊಂದು ಪುಟ್ಟ ಕಾನನ; ತಾರಸಿಯಲ್ಲೇ 1700 ಮರ ಬೆಳೆಸಿದ ಹಸಿರುಪ್ರೇಮಿ
ಬೆಂಗಳೂರು, ಏಪ್ರಿಲ್ 12: ಮನೆಯೊಳಗೇ ಇದ್ದರು ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವಂಥ ಕಡುಬೇಸಿಗೆಯದು. ಇದರಿಂದ ತಪ್ಪಿಸಿಕೊಳ್ಳಲು ವಾಟರ್ ಕೂಲರ್ ಕೊಳ್ಳುವ ಆಲೋಚನೆ ಮಾಡಿದರು ನಟರಾಜ್ ಉಪಾಧ್ಯ. ಆದರೆ ಹಾಗೆ ಆಲೋಚನೆ ಮಾಡಿದ ಮರುಕ್ಷಣವೇ ಅವರಲ್ಲಿ ಮತ್ತೊಂದು ಗೊಂದಲ. ವಾಟರ್ ಕೂಲರ್ ತಾತ್ಕಾಲಿಕ ಪರಿಹಾರ ನೀಡಬಹುದಷ್ಟೆ. ಇದಕ್ಕೆ ಶಾಶ್ವತ ಪರಿಹಾರವಿದೆಯೇ?
ಮನೆಯ ಮಾತಿರಲಿ, ಭೂಮಿ ಮೇಲೇ ಪರಿಣಾಮ ಬೀರುತ್ತಿರುವ ಜಾಗತಿಕ ತಾಪಮಾನ ಏರಿಕೆಯನ್ನು ತಗ್ಗಿಸುವುದಾದರೂ ಹೇಗೆ? ಇದರ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದಾದರೂ ಹೇಗೆ? ತಾನೇ ಉದಾಹರಣೆ ನೀಡದ ಹೊರತು ಮತ್ತೊಬ್ಬರಿಗೆ ಸುಮ್ಮನೆ ಹೇಳುವುದರಲ್ಲೂ ಅರ್ಥವಿಲ್ಲ. ಇದಕ್ಕೆ ಹೆಚ್ಚೆಚ್ಚು ಹಸಿರು ಬೆಳೆಸುವುದೊಂದೇ ದಾರಿ ಎಂದು ಕಂಡುಕೊಂಡ ಅವರು, ಅದನ್ನೇ ಕಾರ್ಯರೂಪಕ್ಕೆ ಇಳಿಸಲು ಆರಂಭಿಸಿದರು. ಮನೆ ಮುಂದೆ ಈಗಾಗಲೇ ತೋಟ ಇತ್ತು. ಆದರೆ ಇದು ಸಾಲದು. ಮನೆಯ ತಾರಸಿಯಲ್ಲೂ ತೋಟ ಮಾಡಿಕೊಂಡರೆ ಹೇಗೆ? 2010ರಲ್ಲಿ ಸಣ್ಣ ಆಲೋಚನೆಯೊಂದಿಗೆ ಆರಂಭಿಸಿದ ತೋಟ ಈಗ ಪುಟ್ಟ ಕಾಡಾಗಿ ಪರಿವರ್ತನೆಯಾಗಿವೆ. ಸಾವಿರಾರು ಗಿಡಮರಗಳು ಇಲ್ಲಿ ನಳನಳಿಸುತ್ತಿವೆ. ಚಿಟ್ಟೆ, ದುಂಬಿಗಳ ಗೂಡಾಗಿದೆ. ಮುಂದೆ ಓದಿ...
ವಿಸ್ಮಯ ಗೂಡು ನಿರ್ಮಾಣದ ಕಲೆಗಾರ ಗೀಜುಗ...
ತಾರಸಿ ಮೇಲೆ ಸೃಷ್ಟಿಯಾದ ಪುಟ್ಟ ಕಾಡು
ನಿವೃತ್ತ ಇಂಜಿನಿಯರ್ ಆಗಿರುವ ಬೆಂಗಳೂರಿನ ನಟರಾಜ್ ಉಪಾಧ್ಯ, ಬನಶಂಕರಿಯ ವಿವೇಕಾನಂದನಗರದಲ್ಲಿರುವ ತಮ್ಮ ಮನೆಯ ತಾರಸಿಯಲ್ಲಿ ಪುಟ್ಟ ಕಾಡನ್ನೇ ಸೃಷ್ಟಿಸಿದ್ದಾರೆ. ಅಲ್ಲಿ 300 ವಿವಿಧ ತಳಿಯ ಮರಗಳನ್ನು ಬೆಳೆಸಿದ್ದಾರೆ. ಸುಮಾರು 1700 ಮರಗಿಡಗಳು ತಾರಸಿ ಮೇಲಿವೆ. ಐವತ್ತು ವಿಧದ ಚಿಟ್ಟೆಗಳು, ಸಾಕಷ್ಟು ಹಕ್ಕಿಗಳು ಇಲ್ಲಿ ಗೂಡು ಕಟ್ಟಿಕೊಂಡಿವೆ.
"ಬೆಂಗಳೂರನ್ನು ಉದ್ಯಾನನಗರಿ ಎನ್ನುತ್ತಾರೆ. ಆದರೆ ಈಗ ಅದರ ಚಿತ್ರಣವೇ ಬದಲಾಗಿಹೋಗಿದೆ. ನಗರೀಕರಣದಿಂದ ಹಸಿರು ನಾಶವಾಗುತ್ತಿದೆ. ಪರಿಸರದಲ್ಲಿನ ಈ ಬದಲಾವಣೆ ಜಾಗತಿಕ ತಾಪಮಾನವನ್ನೂ ಏರಿಸಿದೆ. ಹೀಗಾಗಿ ಇದಕ್ಕೆ ಪ್ರಕೃತಿಯಲ್ಲೇ ಉತ್ತರ ಕಂಡುಕೊಳ್ಳಲು ಯತ್ನಿಸಿದೆ" ಎನ್ನುತ್ತಾರೆ ನಟರಾಜ್.
ತರಕಾರಿ, ಔಷಧೀಯ ಸಸ್ಯಗಳಿಂದ ತೋಟ ಆರಂಭ
ಉಡುಪಿ ಪರಂಪಳ್ಳಿ ಮೂಲದ ನಟರಾಜ್ ಅವರು ಮೂಲತಃ ಕೃಷಿ ಕುಟುಂಬದವರು. ಬೆಂಗಳೂರಿನಂಥ ನಗರ ಪ್ರದೇಶದಲ್ಲಿಯೂ, ಇರುವ ಜಾಗದಲ್ಲಿಯೇ ಎಷ್ಟು ಸಾಧ್ಯವೋ ಅಷ್ಟು ಗಿಡ ಮರಗಳನ್ನು ಬೆಳೆಸಬೇಕು ಎಂದು ನಿರ್ಧರಿಸಿದರು. ಮೂಟೆಗಳಲ್ಲಿ, ಬಿಸಾಡಿದ ಕಂಟೇನರ್ಗಳಲ್ಲೇ ಗಿಡಗಳನ್ನು ಹಾಕಿದರು. ಮೊದಲು ಕೆಲವು ತರಕಾರಿ ಹಾಗೂ ಔಷಧೀಯ ಗಿಡಗಳನ್ನು ಬೆಳೆಸಿದರು. ತಾರಸಿಯಲ್ಲಿ 1500 ಚದರ ಅಡಿ ಜಾಗವಿದ್ದು, ದೊಡ್ಡ ಮರಗಳನ್ನು ಬೆಳೆಸಬಹುದು ಎಂದು ಅನಿಸಿತ್ತು. ನಂತರ ಅಲ್ಲಿ ಮರಗಳನ್ನು ಬೆಳೆಸಲು ಆರಂಭಿಸಿದೆ. ಇದೀಗ ಸಾವಿರಾರು ಗಿಡಮರಗಳನ್ನು ಇಲ್ಲಿ ಬೆಳೆಸಲು ಸಾಧ್ಯವಾಗಿದೆ ಎಂದು ವಿವರಿಸುತ್ತಾರೆ ನಟರಾಜ್.
ಬಿದಿರು, ನುಗ್ಗೆ, ಹುಣಸೆ...
ಇದೀಗ ನಟರಾಜ್ ಅವರ ಮನೆಯ ತಾರಸಿಯಲ್ಲಿ 72 ತಳಿಯ 100 ಮರಗಳು, ಬಳ್ಳಿಗಳು, ಹಣ್ಣಿನ ಮರಗಳು, ತರಕಾರಿ ಗಿಡಗಳನ್ನೊಳಗೊಂಡಂತೆ ಸಾವಿರಾರು ಗಿಡ ಮರಗಳಿವೆ. ಸಾವಿರಾರು ಹಸಿರು ಗಿಡಮರಗಳಿಂದ ಆವೃತಗೊಂಡಿರುವ ತಾರಸಿಯಲ್ಲಿ ಬಿದಿರು, ನುಗ್ಗೆ, ಹುಣಸೆಯಂಥ ಮರಗಳನ್ನೂ ಬೆಳೆಸಿರುವುದು ವಿಶೇಷವಾಗಿದೆ. ಅವರ ಈ ತೋಟಕ್ಕೆ ದಿನನಿತ್ಯ ಇನ್ನಷ್ಟು ಗಿಡ ಮರಗಳು ಸೇರಿಕೊಳ್ಳುತ್ತಲೇ ಇವೆ. ಹಸಿರೇ ಮನೆಯನ್ನು ಸಂಪೂರ್ಣ ಆವರಿಸಿದೆ.
Recommended Video
ಜನಜಾಗೃತಿ ಮೂಡಿಸುತ್ತಿರುವ ನಟರಾಜ್
ಪುಟ್ಟ ಜಾಗದಲ್ಲೇ ಹೇಗೆ ಹಸಿರನ್ನು ಬೆಳೆಸಬಹುದು ಎಂಬುದನ್ನು ತೋರುವುದು ನನ್ನ ಉದ್ದೇಶವಾಗಿತ್ತು. ಹೀಗಾಗೇ ಇಂಥ ಪ್ರಯೋಗವನ್ನು ಮಾಡಿದೆ. 2010ರಿಂದಲೂ ಅಡುಗೆ ಮನೆ ತ್ಯಾಜ್ಯವನ್ನು ಹೊರಗೆ ಹಾಕಿಲ್ಲ. ಅದನ್ನೇ ಗೊಬ್ಬರ ಮಾಡಿ ಹಾಕಲಾಗುತ್ತಿದೆ. ಇವೆಲ್ಲವನ್ನೂ ಜನರಿಗೆ ತೋರಿಸಬೇಕೆಂದು ಬಿಲಿಯನ್ ಟ್ರೀಸ್ ಅಂಡ್ ಬಿಯಾಂಡ್ ಎಂಬ ಬ್ಲಾಗ್ ಅನ್ನೂ ಹೊಂದಿದ್ದು, ಅದರಲ್ಲಿ ಜನರಲ್ಲಿ ಹಸಿರು ಬೆಳೆಸುವ ಕುರಿತು ಜಾಗೃತಿ ಮೂಡಿಸುತ್ತಿದ್ದೇನೆ. ನಗರದಲ್ಲಿ ಗಿಡ ಮರಗಳ ಅವಶ್ಯಕತೆಯನ್ನೂ ಈ ಪುಟ್ಟ ಕಾಯಕದಿಂದ ತೋರಿಸಲು ಹೊರಟಿದ್ದೇನೆ ಎನ್ನುತ್ತಾರೆ ಅವರು.