ಬೀಜ ಸಾರ್ವಭೌಮತ್ವದತ್ತ ಕೃಷಿ ಕ್ಷೇತ್ರ ದಾಪುಗಾಲು
ನಮ್ಮ ಕೃಷಿ ಪರಂಪರೆಯಲ್ಲಿ ಬೆಳೆ ಬಂದಾಕ್ಷಣ ಉತ್ತಮ ಗುಣಮಟ್ಟದ ಬೀಜ/ಕಾಯಿಗಳನ್ನು ಸಂಗ್ರಹಿಸಿ ಮುಂದಿನ ಬೆಳೆಗೆಂದು "ಬೀಜದ ಕಾಯಿ" ಶೇಖರಿಸಿಡುವ ಪದ್ಧತಿ ಇತ್ತು. ಸಂಗ್ರಹಿಸಿಡುವ ಗುಡಾಣಗಳಲ್ಲಿ ಲಕ್ಕಿ ಬೇವಿನ ಎಲೆಗಳನ್ನೂ ಇಟ್ಟು ಹುಳುಗಳು ಬಾರದೆ ನೋಡಿಕೊಳ್ಳುವ ಸ್ಥಳೀಯ ಜ್ಞಾನವೂ ಇತ್ತು (ಈಗಲೂ ಅಲ್ಲಲ್ಲಿ ಕಾಣಬಹುದಾಗಿದೆ).
ದಿನ ಕಳೆದಂತೆ ಹಸಿರು ಕ್ರಾಂತಿ ನೆಪವಾಗಿ ಕೃಷಿಯಲ್ಲಿ ಅನೇಕ ಬದಲಾವಣೆಗಳಾದವು. ಹೆಚ್ಚು ಇಳುವರಿ ಕೊಡುವ ಹೈಬ್ರಿಡ್ ಗಳು ರೈತರ ಹೊಲಕ್ಕೆ ಕಾಲಿಟ್ಟವು. ಹೈಬ್ರಿಡ್ ಬೀಜಗಳನ್ನು ಒಮ್ಮೆ ಬಿತ್ತನೆ ಮಾಡಿದ ಮೇಲೆ, ಮುಂದಿನ ಬೆಳೆಗೆ "ಬೀಜದ ಕಾಯಿ" ಮಾಡಿಕೊಳ್ಳಲು ಅವು ಯೋಗ್ಯವಾಗಿರುವುದಿಲ್ಲ. ಅದೊಮ್ಮೆ ಮಾಡಿಕೊಂಡರೂ ಮೂಲ ಗುಣಗಳು ಅವುಗಳಲ್ಲಿ ಉಳಿದಿರುವುದಿಲ್ಲ. ಹಾಗಾಗಿ ರೈತರು ಪ್ರತಿ ಬೆಳೆಗೂ ಬೀಜಗಳನ್ನು ಕೊಳ್ಳುವ ಸ್ಥಿತಿಗೆ ಬಂದಾಗಿದೆ.
ಬೆಳೆ ಸಮೀಕ್ಷೆಗೆ ಡ್ರೋನ್: ನೂರು ಜಿಲ್ಲೆಗಳಲ್ಲಿ ಪ್ರಾಯೋಗಿಕ ಬಳಕೆ
ಈ ಬೀಜಗಳನ್ನು ಮಾಡುವವರು ಯಾರು? ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ವಿಶ್ವ ವಿದ್ಯಾಲಯಗಳು ಮತ್ತು ಖಾಸಗಿ ಬೀಜ ಕಂಪನಿಗಳು. ವಿಶೇಷವಾಗಿ ಬಹುರಾಷ್ಟ್ರೀಯ ಕಂಪನಿಗಳು ಬೀಜ ವ್ಯವಹಾರದಲ್ಲಿ ತೊಡಗಿಕೊಂಡಿವೆ.
ಹೀಗೆ ಕಂಪನಿಗಳ ಮುಖೇನ ರೈತರು ಕೊಳ್ಳುವ ಬೀಜಗಳ ಬಗ್ಗೆ ಅನೇಕ ಸುದ್ದಿಗಳನ್ನೂ ಓದುತ್ತಲೇ ಇರುತ್ತೇವೆ. ಬಹಳಷ್ಟು ಬಾರಿ ಮೊಳಕೆ ಬಾರಲಿಲ್ಲವೆಂದೋ, ನಿರೀಕ್ಷಿತ ಫಸಲು ಬರಲಿಲ್ಲವೆಂದೋ ಇಂಥವೇ ಕಾರಣಗಳಿಗಾಗಿ ಕಳಪೆ ಬೀಜಗಳು ಮತ್ತು ಅವುಗಳನ್ನು ಉತ್ಪಾದಿಸಿ ಮಾರಾಟ ಮಾಡಿದ ಕಂಪನಿಗಳು ಸುದ್ದಿಯಲ್ಲಿರುತ್ತವೆ.
ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಸೋಯಾ ಬೀಜಗಳು ಕಳಪೆಯಾಗಿ ದೊಡ್ಡ ಸುದ್ದಿಯಾಯಿತು. ಇದೇ ವರ್ಷ ಜುಲೈ ತಿಂಗಳಲ್ಲಿ ಬಿತ್ತಿದ ಸೋಯಾ ಬೀಜಗಳು ಮೊಳಕೆ ಬಾರದೆ ಇದ್ದ ಸುದ್ದಿಯ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ರೈತರಿಗೆ ತಾವೇ ಬೀಜೋತ್ಪಾದನೆ ಮಾಡಿಕೊಳ್ಳಲು ಪ್ರೋತ್ಸಾಹಿಸಿದೆ.
ಮಹಾರಾಷ್ಟ್ರದ ಒಟ್ಟು ಸೋಯಾ ಬೀಜ ಮಾರಾಟದ ಶೇ.60 ರಷ್ಟು ಖಾಸಗಿ ಕಂಪನಿಗಳು ಪೂರೈಸುತ್ತವೆ. ವರದಿಗಳ ಪ್ರಕಾರ ಪ್ರತಿ ಮುಂಗಾರು ಹಂಗಾಮಿನಲ್ಲಿ ಮಹಾರಾಷ್ಟ್ರದಲ್ಲಿ 30 ಲಕ್ಷ ಕ್ವಿಂಟಾಲ್ ನಷ್ಟು ಸೋಯಾ ಬೀಜಗಳು ಬಿತ್ತನೆಗೆ ಬೇಕು.
ಹಾಗಾಗಿ ಅಲ್ಲಿನ ಸರ್ಕಾರ ಹೆಚ್ಚಿನ ಮೊತ್ತ ಬೀಜ ಉತ್ಪಾದನೆಗೆ ರೈತರನ್ನು ಹುರಿದುಂಬಿಸಿದೆ. ತತ್ಪರಿಣಾಮ ಈಗಾಗಲೇ ಅಲ್ಲಿನ ರೈತರು 10-12 ಲಕ್ಷ ಕ್ವಿಂಟಾಲ್ ನಷ್ಟು ಬಿತ್ತನೆ ಬೀಜ ಬೆಳೆದಿಟ್ಟುಕೊಂಡಿದ್ದಾರೆ. ಇನ್ನುಳಿದದ್ದು ಕಂಪನಿಗಳು ಪೂರೈಸಬಹುದು.
ಇಲ್ಲಿ ಗಮನಿಸಬೇಕಾದ ಅಂಶವಿಷ್ಟೇ. ಯಾವ ಸರ್ಕಾರಗಳು ರಸಾಯನಿಕ ಗೊಬ್ಬರಗಳನ್ನು ಬಳಸಲು ಪ್ರೋತ್ಸಾಹಿಸಿದವೋ, ಬಿತ್ತನೆ ಬೀಜಗಳನ್ನು ಕೊಳ್ಳಲು ಹೇಳಿಕೊಟ್ಟವೋ, ಅದೇ ಸರ್ಕಾರಗಳು ಈಗ ಯೂಟರ್ನ್ ತೆಗೆದುಕೊಳ್ಳುತ್ತಿರುವುದು ಸ್ವಾಗತಾರ್ಹ ಬೆಳೆವಣಿಗೆ.
ಬಿತ್ತನೆ ಬೀಜ ಸ್ವಾವಲಂಭನೆಯ ಬಗ್ಗೆ ದೇಶಾದ್ಯಂತ ಅನೇಕ ಹೋರಾಟಗಳು ನಡೆದಿವೆ, ನಡೆಯುತ್ತಿವೆ. ಆ ಹೋರಾಟಕ್ಕೆ "ಬೀಜ ಸಾರ್ವಭೌಮತ್ವ" (seed soverighnty) ಎಂದ ಪ್ರೊ. ಎಂಡಿಎನ್ ಅದಕ್ಕೆ ತಾತ್ವಿಕ ರೂಪ ಕೊಟ್ಟದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.