ತೀವ್ರ ರಾಜಕೀಯ ಸ್ವರೂಪ ಪಡೆಯುತ್ತಿರುವ ಮಹದಾಯಿ
ಬೆಂಗಳೂರು, ಡಿಸೆಂಬರ್ 26 : "ಮಹದಾಯಿಗಾಗಿ ರಕ್ತವನ್ನೇ ಹರಿಸಲು ಸಿದ್ಧ" ಎಂದು ಯಡಿಯೂರಪ್ಪನವರು ಹುಬ್ಬಳ್ಳಿಯಲ್ಲಿ ನಡೆಸಿದ 50ನೇ ಪರಿವರ್ತನಾ ಯಾತ್ರೆಯಲ್ಲಿ ಅಬ್ಬರಿಸಿದ್ದು, ಅವರಿಗೇ ತಿರುಗುಬಾಣವಾಗಿ ಪರಿಣಮಿಸಿದ್ದು, ರಾಜಕೀಯ ತಿರುವುಗಳನ್ನು ಪಡೆಯುತ್ತಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ಕೇವಲ ಕೇಲವೇ ತಿಂಗಳು ಇರುವುದರಿಂದ ಮಹದಾಯಿ ಹೋರಾಟವನ್ನು ಎಲ್ಲ ರಾಜಕೀಯ ಪಕ್ಷಗಳು ತಮ್ಮ ಅನುಕೂಲತೆಗಾಗಿ, ಉತ್ತರ ಕರ್ನಾಟಕದ ರೈತರನ್ನು ಮತ್ತಿ ಅಲ್ಲಿನ ಜನತೆಯನ್ನು ಸಳೆಯಲು ಬಳಸಿಕೊಳ್ಳುತ್ತಿದ್ದಾರೆ ಎಂಬುದು ಸರ್ವವಿದಿತವಾಗಿದೆ.
ಮಾತು ಕೊಟ್ಟು ಪೇಚೆಗೆ ಸಿಲುಕಿದ ಬಿಎಸ್ ವೈ, ಮಹದಾಯಿ ಅಖಾಡಕ್ಕೆ ಯಶ್
ಮಹದಾಯಿ ನದಿ ವಿವಾದ ಯಡಿಯೂರಪ್ಪನವರು ಹೇಗೆ ಬಗೆಹರಿಸುತ್ತಾರೆ? ಇದು ಮುಖ್ಯಮಂತ್ರಿಗಳ ಮೂಲಕವೇ ಆಗಬೇಕು. ಮಹದಾಯಿ ವಿವಾದ ಬಗೆಹರಿಸುತ್ತೇನೆ ಎಂದು ಯಡಿಯೂರಪ್ಪನವರು ರಾಜ್ಯದ ಜನತೆಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಕ್ರೋಶ ವ್ಯಕ್ತಪಡಿಸಿದ್ದರು.
ಮಹದಾಯಿ ಹೋರಾಟ, ಬಿಜೆಪಿ ಹೈಕಮಾಂಡ್ ಗರಂ!
ಹುಬ್ಬಳ್ಳಿಯಲ್ಲಿ ಆಶ್ವಾಸನೆ ಪಡೆದ ನಂತರ, ಹೆಂಡತಿ ಮಕ್ಕಳ ಸಮೇತ ಸೀದಾ ಬೆಂಗಳೂರಿಗೇ ಬಂದಿರುವ ನೂರಾರು ಉತ್ತರ ಕರ್ನಾಟಕದ ರೈತರು, ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯ ಮುಂದೆ ಕಳೆದ ನಾಲ್ಕು ದಿನಗಳಿಂದ ಧರಣಿ ಕುಳಿತಿದ್ದಾರೆ. ಯಡಿಯೂರಪ್ಪನವರು ತಾವೇ ಸ್ವತಃ ಬಂದು ತಮ್ಮನ್ನು ಭೇಟಿಯಾಗಬೇಕೆಂದು ಪಟ್ಟುಹಿಡಿದಿದ್ದಾರೆ.
'ಸಿದ್ದರಾಮಯ್ಯ ಮನೆ ಮುಂದೆ ಪ್ರತಿಭಟಿಸಿ'
ಪರಿವರ್ತನಾ ಯಾತ್ರೆಯಲ್ಲಿ ಬಿಜಿಯಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಮಾತ್ರ, ನನ್ನ ಮನೆ ಮುಂದೆ ಅಥವಾ ಬಿಜೆಪಿ ಕಚೇರಿಯ ಮುಂದೆ ಏಕೆ ಧರಣಿ ಕೂಡುತ್ತಿರೀ? ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ ನಡೆಸಿ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ರೈತರನ್ನು ಮತ್ತಷ್ಟು ಕೆರಳಿಸಿದೆ. ರೈತರು ಮಾತ್ರ ಯಾವುದೇ ಕಾರಣಕ್ಕೂ ಬಗ್ಗುತ್ತಿಲ್ಲ. ಪ್ರತಿಭಟನಾ ಸ್ಥಳಕ್ಕೆ ಯಡಿಯೂರಪ್ಪ ಬರಲೇಬೇಕೆಂದು ಪಟ್ಟುಹಿಡಿದಿದ್ದಾರೆ.
ಬಿಜೆಪಿಗೇ ತಿರುಗುಬಾಣವಾದ ಮಹದಾಯಿ ಹೇಳಿಕೆ
ಮಹದಾಯಿಗಾಗಿ ಯಡಿಯೂರಪ್ಪನವರು ನೀಡಿರುವ ವಾಗ್ದಾನ, ಅದಕ್ಕೆ ವಿರೋಧಿಗಳಿಂದ ವ್ಯಕ್ತವಾಗುತ್ತಿರುವ ತೀವ್ರ ಆಕ್ಷೇಪ, ಇದಕ್ಕೆ ರಾಜ್ಯದ ನಾಯಕರೇ ನೀಡುತ್ತಿರುವ ಬೇಜವಾಬ್ದಾರಿ ಹೇಳಿಕೆಗಳು, ಕೆಲವರು ನಿರ್ಲಿಪ್ತವಾಗಿರುವುದು ಬಿಜೆಪಿಗೇ ತಿರುಗುಬಾಣವಾಗುತ್ತಿರುವುದನ್ನು ಗಮನಿಸಿದ ಅಮಿತ್ ಶಾ ಅವರು, ರಾಜ್ಯದ ಉಸ್ತುವಾರಿ ನಾಯಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಂಬಲ ಸಿಗುತ್ತಿಲ್ಲವೆಂದು ಭಾವುಕರಾದ ಯಡಿಯೂರಪ್ಪ
ಮಹದಾಯಿಗಾಗಿ, ಉತ್ತರ ಕರ್ನಾಟಕದ ರೈತರಿಗಾಗಿ ತಾವು ಮಾಡುತ್ತಿರುವ ಹೋರಾಟಕ್ಕೆ ತಮ್ಮ ಪಕ್ಷದ ನಾಯಕರಿಂದಲೇ ಬೆಂಬಲ ಸಿಗುತ್ತಿಲ್ಲ ಎಂದು ಯಡಿಯೂರಪ್ಪನವರು ಮಂಗಳವಾರ ಭಾವುಕರಾದ ಘಟನೆಯೂ ನಡೆದಿದೆ. ಯಾವ ಹೇಳಿಕೆ ನೀಡಿದರೂ ಉಲ್ಟಾ ಹೊಡೆಯುವ ಸಾಧ್ಯತೆಗಳಿರುವುದರಿಂದ ಹಲವಾರು ನಾಯಕರ ಕೈಕಟ್ಟಿಹಾಕಿದಂತಾಗಿದೆ. ಹಿಂದೂತ್ವದ ಬಗ್ಗೆ ವೀರಾವೇಶದಿಂದ ಮಾತಾಡುವ ಕೆಲವರು ಮಹದಾಯಿ ಬಗ್ಗೆ ಬಾಯಿ ಬಿಡುತ್ತಿಲ್ಲ.
ಮಹದಾಯಿ ವಿವಾದ : ಸಭೆಯಲ್ಲಿ ಭಾವುಕರಾದ ಯಡಿಯೂರಪ್ಪ
ಸ್ಥಳಕ್ಕೆ ದಿನೇಶ್ ಗುಂಡೂರಾವ್ ಭೇಟಿ
ಪ್ರತಿಭಟನೆ ನಾಲ್ಕನೇ ದಿನಕ್ಕಿಳಿದಿರುವ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ, ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ದಿನೇಶ್ ಗುಂಡೂ ರಾವ್ ಅವರು ಸ್ವತಃ ಸ್ಥಳಕ್ಕೆ ಆಗಮಿಸಿ, ಅವರಿಗೆ ಸಾಂತ್ವನವನ್ನು ಹೇಳಿದ್ದು, ಬಿಬಿಎಂಪಿ ಮೂಲಕ ಅವರಿಗೆ ವಸತಿ ಸೌಕರ್ಯ, ಮತ್ತಿತರ ಸೌಲಭ್ಯಗಳನ್ನು ಒದಗಿಸುವುದಾಗಿ ವಾಗ್ದಾನ ನೀಡಿದ್ದಾರೆ. ಅಲ್ಲದೆ, ಅವರ ಅವಗಾಹನೆಯನ್ನು ಆಲಿಸಿ ಟಿಪ್ಪಣಿ ಮಾಡಿಕೊಂಡಿದ್ದಾರೆ.
ನಮ್ಮನ್ನಷ್ಟೇ ಏಕೆ ಪ್ರಶ್ನಿಸುತ್ತೀರಿ ಎಂದ ಶಿವಣ್ಣ
ಮಹದಾಯಿ ಅಥವಾ ಕಳಸಾ ಬಂಡೂರಿ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ, ಇನ್ನು ಸುಮ್ಮನಿದ್ದರೆ ಆಗುವುದಿಲ್ಲವೆಂದು, ಕನ್ನಡ ಸಿನೆಮಾ ನಟರು ಕೂಡ ನೀರಿಗಾಗಿ ಪ್ರತಿಭಟನೆ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ. ನಮ್ಮ ಬೆಂಬಲ ಯಾವಾಗಲೂ ಇದ್ದದ್ದೆ, ಆದರೆ, ನೀವು ಯಾಕೆ ನಮ್ಮನ್ನೇ ಪ್ರಶ್ನಿಸುತ್ತೀರಾ ಎಂದು ಚಿತ್ರನಟ ಶಿವರಾಜ್ ಕುಮಾರ್ ಅವರು ಮರುಪ್ರಶ್ನಿಸಿದ್ದಾರೆ.
''ಮಹದಾಯಿ ಹೋರಾಟಕ್ಕೆ ನಮ್ಮನ್ನು ಮಾತ್ರ ಯಾಕೆ ಕರೆಯುತ್ತೀರಾ'' ಎಂದ ಶಿವಣ್ಣ.!
ಪ್ರತಿಭಟನಾಕಾರರಿಗೆ ಅಪ್ಪಾಜಿ ಕ್ಯಾಂಟೀನ್ ಊಟ
ಜಾತ್ಯತೀತ ಜನತಾದಳದ ನಾಯಕ ಟಿಎ ಶರವಣ ಅವರು ಕ್ರಿಸ್ಮಸ್ ಹಬ್ಬದಂದು ಬಿಜೆಪಿ ಕಚೇರಿ ಮುಂದಿನ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾಕಾರರಿಗೆ ದೇವೇಗೌಡ ಅಪ್ಪಾಜಿ ಕ್ಯಾಂಟೀನ್ ವತಿಯಿಂದ ತಿಂಡಿತಿನಿಸುಗಳನ್ನು ವಿತರಿಸಿದರು. ದೇವೇಗೌಡರು ಕೂಡ ಪ್ರತಿಭಟನಾಕಾರರನ್ನು ಮಂಗಳವಾರ ಭೇಟಿಯಾಗುವುದಾಗಿ ಅವರು ತಿಳಿಸಿದ್ದಾರೆ. ಮಹದಾಯಿ ವಿವಾದವನ್ನು ಯಡಿಯೂರಪ್ಪ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಕುಮಾರಸ್ವಾಮಿಯವರೂ ಆರೋಪಿಸಿದ್ದರು.