ಕೊಡಗಿನಲ್ಲಿ ದರ ಕುಸಿತದ ನಡುವೆಯೇ ನಡೆದಿದೆ ಶುಂಠಿ ಬಿತ್ತನೆ
ಮಡಿಕೇರಿ, ಮಾರ್ಚ್ 5: ಪುಟ್ಟ ಜಿಲ್ಲೆ ಕೊಡಗಿನಲ್ಲಿ ಶುಂಠಿಯನ್ನು ಗಣನೀಯ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಬಹುತೇಕ ಶುಂಠಿ ಬೆಳೆಗಾರರು ಕೇರಳದಿಂದ ಬರುತ್ತಾರೆ.
ಸ್ಥಳೀಯರು ತಮ್ಮ ಹೊಲ, ಗದ್ದೆಗಳನ್ನು ಅವರಿಗೆ ಗುತ್ತಿಗೆ (ಲೀಸ್) ಕೊಡುತ್ತಾರೆ. ಆದರೆ ಶುಂಠಿಯನ್ನು ಬೆಳೆಯುವವರು ಒಂದು ಬಾರಿ ಬೆಳೆ ತೆಗೆದ ನಂತರ ಪುನಃ ಶುಂಠಿ ಬೆಳೆ ಬೆಳೆಯುವುದಿಲ್ಲ. ಏಕೆಂದರೆ ಎರಡನೇ ಬಾರಿ ಬೆಳೆ ಬೆಳೆದರೆ ಇಳುವರಿ ತುಂಬಾ ಕಡಿಮೆ ಆಗುತ್ತದೆ. ಆದರೆ ಕೆಲ ವರ್ಷಗಳ ನಂತರ ಎರಡನೇ ಬಾರಿ ಬೆಳೆ ಬೆಳೆಯಬಹುದಾಗಿದೆ.
ಮಾ.4ರಂದು ಪ್ರಮುಖ ಮಾರುಕಟ್ಟೆಯಲ್ಲಿ ಕಾಫಿ, ಏಲಕ್ಕಿ, ಅಡಿಕೆ, ಧಾನ್ಯ, ಹಣ್ಣು, ತರಕಾರಿ ದರ
ಅಪಾರ ನಷ್ಟಕ್ಕೆ ಸಿಲುಕಿ ಸಂಕಟ ಅನುಭವಿಸಿದ್ದಾರೆ
ಮೊದಲು ಶುಂಠಿಗೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇದ್ದ ಕಾರಣ ಬೆಳೆ ಬೆಳೆಯುವವರು ನೀರಿನ ಸೌಕರ್ಯವಿರುವ ಜಮೀನಿಗೆ ಎಕರೆಯೊಂದಕ್ಕೆ 50 ಸಾವಿರ ರೂಪಾಯಿ ಗಳಷ್ಟು ಲೀಸ್ ನೀಡಿ ಶುಂಠಿ ಬೆಳೆಯುತ್ತಿದ್ದರು. ಆದರೆ ಕಳೆದ ವರ್ಷದ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಿನಲ್ಲಿ ಶುಂಠಿ ಬೆಳೆದ ಬೆಳೆಗಾರರು, ತಾವು ಬೆಳೆದ ಶುಂಠಿ ಫಸಲಿಗೆ ಮಾರುಕಟ್ಟೆಯಲ್ಲಿ ಪೂರಕವಾದ ಬೆಲೆ ಸಿಗದೇ ಅಪಾರ ನಷ್ಟಕ್ಕೆ ಸಿಲುಕಿ ಸಂಕಟ ಅನುಭವಿಸಿದ್ದಾರೆ.
ಸೂಕ್ತ ಬೆಲೆ ದೊರಕಲಿದೆ ಎಂಬ ಆಶಾಭಾವನೆ
ಆದಾಗ್ಯೂ ಮತ್ತೆ ಅದೇ ಸಂಕಟ ಹಾಗೂ ನಷ್ಟದ ದುಗುಡವನ್ನು ಮನದಲ್ಲಿಟ್ಟುಕೊಂಡೇ ಈ ಬಾರಿಯಾದರೂ ಸೂಕ್ತ ಬೆಲೆ ದೊರಕಲಿದೆ ಎಂಬ ಆಶಾಭಾವನೆಯಲ್ಲಿ ಶುಂಠಿ ಬಿತ್ತನೆಗೆ ಮುಂದಾಗುತ್ತಿದ್ದಾರೆ. ಕಾವೇರಿ ನದಿ ದಂಡೆಯ ಇಕ್ಕೆಲಗಳ ಗ್ರಾಮಗಳು ಹಾಗೂ ಬಯಲು ಸೀಮೆಯ ಗ್ರಾಮಗಳಲ್ಲಿ ಶುಂಠಿ ಬಿತ್ತನೆ ಕಾರ್ಯ ಭರದಿಂದ ಸಾಗುತ್ತಿದೆ.
60 ಕೆಜಿ ತೂಕದ ಶುಂಠಿಗೆ 800 ರೂ.
ಕಳೆದ ವರ್ಷ ಇದೇ ಬಿತ್ತನೆ ಬೀಜದ ಶುಂಠಿಗೆ 2500 ರೂ. ಗಳಿಂದ 3000 ರೂ. ಇತ್ತು. ಆದರೆ ಈ ವರ್ಷ ಕೊರೊನಾ ತಂದೊಡ್ಡಿದ ಸಂಕಷ್ಟದಿಂದ ಕೃಷಿಕರು ಬೆಳೆದ ಶುಂಠಿ ಫಸಲು ಮೂರಂಕಿ ದಾಟಲೇ ಇಲ್ಲ. ಇದೀಗ ಮಾರುಕಟ್ಟೆಯಲ್ಲಿ 60 ಕೆಜಿ ತೂಕದ ಒಂದು ಚೀಲ ಶುಂಠಿ ಫಸಲಿಗೆ 800 ರೂ. ಇದ್ದರೆ, ಬಿತ್ತನೆ ಬೀಜದ ಶುಂಠಿಗೆ ಒಂದು ಚೀಲಕ್ಕೆ 1200 ರೂ. ಗಳಿಂದ 1300 ರೂ. ಇದೆ. ಅದೇ 2018ರ ಫೆಬ್ರವರಿ ಹಾಗೂ ಮಾರ್ಚ್ ನಲ್ಲಿ ಇದೇ ಬಿತ್ತನೆ ಬೀಜದ ಶುಂಠಿಗೆ ಒಂದು ಚೀಲಕ್ಕೆ 5000 ರೂ. ಇತ್ತು.
ಕರ್ನಾಟಕ ಬಜೆಟ್ 2021: ಪ್ರವಾಸಿ ಜಿಲ್ಲೆ ಕೊಡಗು ಜನತೆಯ ನಿರೀಕ್ಷೆಗಳೇನು?
ಶುಂಠಿ ದರ ಏರಿಕೆಯ ನಿರೀಕ್ಷೆಯಲ್ಲಿ ರೈತರು
ಆದಾಗ್ಯೂ ಈ ಬಾರಿ ಬಿತ್ತನೆ ಬೀಜಕ್ಕೆ ಗರಿಷ್ಠ 1200 ರೂ. ಇರುವ ಕಾರಣ ಸ್ವಂತ ಭೂಮಿಯನ್ನುಳ್ಳ ಕೃಷಿಕರು ತಮ್ಮ ಶಕ್ತಾನುಸಾರ ಬಿತ್ತನೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಒಂದು ಎಕರೆ ಭೂಮಿಯಲ್ಲಿ ಶುಂಠಿ ಬೆಳೆಯಲು ಕನಿಷ್ಟ 3.50 ಲಕ್ಷ ರೂ.ಗಳಿಂದ 4 ಲಕ್ಷ ಹಣ ಖರ್ಚು ಆಗುತ್ತದೆ. ಇಷ್ಟೊಂದು ಹಣ ವೆಚ್ಚ ಮಾಡಿ, ಶುಂಠಿ ದರ ಕುಸಿದು ಕೈ ಸುಟ್ಟುಕೊಂಡವರು ನೂರಾರು ಜನ ಇದ್ದಾರೆ. ಆದರೆ ಶುಂಠಿ ದರ ಏರಿಕೆಯ ನಿರೀಕ್ಷೆಯಲ್ಲಿ ರೈತರು ಬಿತ್ತನೆಗೆ ಮುಂದಾಗಿದ್ದಾರೆ.