ಮಿಡತೆಗಳ ನಿಯಂತ್ರಣ ಹೇಗೆ? ಕರ್ನಾಟಕಕ್ಕೆ ಬರದಂತೆ ತಡೆಯಬಹುದೆ?
ರಾಜಸ್ಥಾನ, ಗುಜರಾತ್, ಪಂಜಾಬ್, ಹರಿಯಾಣ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಬೆಳೆಗಳಿಗೆ ಕಂಟಕವಾಗಿರುವ ಮರುಭೂಮಿ ಮಿಡತೆಗಳ ಸಮೂಹ (locusts sworms) ಭಾರತಕ್ಕೆ ಹೊಸದೇನೂ ಅಲ್ಲ. ಇದೀಗ ಪಾಕಿಸ್ತಾನ ಮತ್ತು ಇರಾನ್ ದೇಶಗಳಿಂದ ಹಾರಿಬಂದವೆಂದ ಮಾತ್ರಕ್ಕೆ ಭಾರತದಲ್ಲಿ ಈ ಕೀಟಗಳ ಸಂತಾನ ಇರಲಿಲ್ಲವೆಂದೂ ಅಲ್ಲ. ಇಲ್ಲಿಯೂ ಇದ್ದವು, ಇವೆ. ಅಲ್ಲಿಯೂ ಇದ್ದವು ಮತ್ತು ಇವೆ.
Recommended Video
ಮರುಭೂಮಿ ಮಿಡತೆಗಳ ಹುಟ್ಟು ಗುಣವೇ ಸಮೂಹ ವಾಸ ಮತ್ತು ದೇಶಾಂತರ ತಿರುಗುವುದು. ಹಾಗಾಗಿ ಇದೀಗ ಬಂದಿರುವ ಮಿಡತೆಗಳ ದೊಡ್ಡ ಸಮೂಹ ಪಾಕಿಸ್ತಾನ ಮತ್ತು ಇರಾನ್ ನಿಂದ ಬಂದಿವೆ. ಇವುಗಳ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯುವ ಪ್ರಯತ್ನ ಮಾಡೋಣ...
ಮಿಡತೆಗಳ ರೂಪದಲ್ಲಿ ಪ್ರಕಟಗೊಂಡ ಪ್ರಾಕೃತಿಕ ವಿಕೋಪ
ಮನುಕುಲಕ್ಕೆ ಅಪಾಯಕಾರಿ ಕೀಟ ಮರುಭೂಮಿ ಮಿಡತೆ
ಮಿಡತೆಗಳಲ್ಲಿ ಹತ್ತನ್ನೆರಡು ವಿಧಗಳಿವೆ. ಅವುಗಳಲ್ಲಿ ಪ್ರಮುಖವಾದವು ನಾಲ್ಕು. ಆ ನಾಲ್ಕರಲ್ಲಿ ಮನುಕುಲಕ್ಕೆ ಅತ್ಯಂತ ಅಪಾಯಕಾರಿ ಕೀಟ ಮರುಭೂಮಿ ಮಿಡತೆ.(ಅಪಾಯಕಾರಿ: ಮನುಷ್ಯ ತನಗಾಗಿ ಬೆಳೆದುಕೊಳ್ಳುವ ಆಹಾರ ಬೆಳೆಗಳನ್ನು ತಿಂದು ಬದುಕುತ್ತವೆ. ಅದರಿಂದ ಮನುಷ್ಯರಿಗೆ ಅಪಾರವಾದ ಆರ್ಥಿಕ ನಷ್ಟವಾಗುತ್ತದೆ. ದೇಶದ ಆಹಾರ ಭದ್ರತೆಗೂ ಕಂಟಕ ಬರಬಹುದು. ಹಾಗಾಗಿ ಮರುಭೂಮಿ ಮಿಡತೆಗಳು ಅಪಾಯಕಾರಿ) .
ಇದರ ಸಂತಾನ ಅಭಿವೃದ್ಧಿ ಮಾಡಿಕೊಳ್ಳುವುದು ಭೂಮಿಯ ಒಳಗೆ, ಮರಳಿರುವ ಪ್ರದೇಶಗಳಲ್ಲಿ. ಸುಮಾರು ಎಂಟರಿಂದ ಹತ್ತು ಸೆಂ.ಮೀ ಆಳದಲ್ಲಿ ಮೊಟ್ಟೆಗಳನ್ನಿಡುತ್ತವೆ. ಮೊಟ್ಟೆಗಳು ಬಿಡಿಬಿಡಿಯಾಗಿರುವುದಿಲ್ಲ. ಅದು ಮೊಟ್ಟೆಗಳ ಗುಂಪು ಅಥವಾ ‘egg pods' ಎಂದು ಕರೆಯಲಾಗುತ್ತದೆ.
ಇದೀಗ ಭಾರತದಲ್ಲಿ ಸಂಚರಿಸುತ್ತಿರುವ ಮಿಡತೆಗಳ ಸಮೂಹ (Locusts sworms) ಪಾಕಿಸ್ತಾನ ಮತ್ತು ಇರಾನ್ ದೇಶಗಳಲ್ಲಿ ಸಂತಾನ ಅಭಿವೃದ್ಧಿಯಾಗಿ ಮರಿ ಹುಳುಗಳ ಹಂತ ದಾಟಿ ಪ್ರೌಢಾವಸ್ಥೆಗೆ ಬಂದಂಥವು. ಅವುಗಳಲ್ಲಿ ಒಂದಿಷ್ಟು ಸಮೂಹ ಥಾರ್ ಮರುಭೂಮಿಯನ್ನು ದಾಟಿಕೊಂಡು ಭಾರತಕ್ಕೆ ಬಂದಿವೆ.
ಮಿಡತೆಗಳ ನಿರ್ವಹಣೆಗೆ ಬ್ರಿಟಿಷರ ಆಳ್ವಿಕೆಯಲ್ಲಿಯೇ ಇತ್ತು ವ್ಯವಸ್ಥೆ
ಅವುಗಳ ಜೊತೆಗೆ ಇಲ್ಲಿಯೇ ಸ್ಥಳೀಯವಾಗಿ ರಾಜಸ್ಥಾನ ಮತ್ತು ಗುಜರಾತ್ ಪ್ರಾಂತ್ಯದಲ್ಲಿದ್ದ ಮರುಭೂಮಿ ಮಿಡತೆಗಳು, ಕಳೆದ ಅಕ್ಟೋಬರ್ ಮತ್ತು ನವೆಂಬರ್ ಮಾಸದಲ್ಲಿ ಇಟ್ಟಿದ್ದ ಮೊಟ್ಟೆಗಳು ಮರಿಗಳಾಗಿ ಪ್ರೌಢಾವಸ್ಥೆಗೆ ತಲುಪಿ ಹಸಿರು ಇರುವ ಕಡೆಗೆ ಆಹಾರ ಹುಡುಕಿ ಗುಂಪು ಗುಂಪಾಗಿ ಅಲೆಯುತ್ತಿರುವುದನ್ನು ಅಲ್ಲಗಳೆಯುವಂತಿಲ್ಲ ಎನ್ನುತ್ತದೆ ವೈಜ್ಞಾನಿಕ ಸಮೂಹ.
ಭಾರತದಲ್ಲಿ ಇವುಗಳ ನಿರ್ವಹಣೆಗೆ ವಿಶೇಷ ವ್ಯವಸ್ಥೆಯನ್ನು ಬ್ರಿಟಿಷರ ಆಳ್ವಿಕೆಯಲ್ಲಿಯೇ (1939) ಮಾಡಲಾಗಿತ್ತು. ಇವುಗಳ ಚಲನವಲನಗಳ ಮೇಲೆ ನಿಗಾ ಇಡುವುದು, ಇವುಗಳ ಬಗ್ಗೆ ಸಂಶೋಧನೆ ಮಾಡುವುದು ಸೇರಿದಂತೆ ಇವುಗಳ ನಿಯಂತ್ರಣಕ್ಕೆ ರೂಪುರೇಷೆಗಳನ್ನು ಸಿದ್ಧಪಡಿಸಿ ಕಾಲಕಾಲಕ್ಕೆ ಸರ್ಕಾರ ಹಾಗೂ ಸಾರ್ವಜನಿಕರಿಗೆ ತಲುಪಿಸಲು ಇದಕ್ಕೊಂದು ‘ಮಿಡತೆ ಯೋಜನೆ'ಯೇ ಇದೆ. ಫರೀದಾಬಾದ್ ನಲ್ಲಿ ಇದರ ಕೇಂದ್ರ ಕಚೇರಿ, ಜೋದ್ ಪುರದಲ್ಲಿ ಕ್ಷೇತ್ರ ಕಾರ್ಯಗಳ ಕಚೇರಿ ಕಾರ್ಯನಿರ್ವಹಿಸುತ್ತಿವೆ.
ಹಿಂದೆ, ಅಂದರೆ 1998, 2002, 2005, 2007 ಮತ್ತು 2010ರಲ್ಲಿ ಸಣ್ಣ ಪ್ರಮಾಣದಲ್ಲಿ ಮರುಭೂಮಿ ಮಿಡತೆಗಳ ಹಾವಳಿ ಕಂಡು ಬಂದಿದ್ದಾಗ ಅವುಗಳನ್ನು ಸಮರ್ಥವಾಗಿ ನಿರ್ವಹಿಸುವ ಕಾರ್ಯವನ್ನು ಇದೇ ಸಂಸ್ಥೆ ಮಾಡಿತ್ತು. ಇದೀಗ ದೊಡ್ಡ ಪ್ರಮಾಣದಲ್ಲಿ ಬಂದಿರುವ ಈ ಅಂತಾರಾಷ್ಟ್ರೀಯ ಕೀಟ ದೊಡ್ಡ ಮಟ್ಟದ ಸಮಸ್ಯೆಯನ್ನೇ ಸೃಷ್ಟಿಸುತ್ತಿದೆ.
ಮರುಭೂಮಿ ಮಿಡತೆ ಅಪಾಯ: ಪಾಕಿಸ್ತಾನ,ಇರಾನ್ ಸಹಕಾರ ಕೇಳಿದ ಭಾರತ
ಕರ್ನಾಟಕಕ್ಕೆ ಮರುಭೂಮಿ ಮಿಡತೆಗಳು ಕಂಟಕವಾಗಬಹುದಾ?
ಊರಿಗೆ ಬಂದೋಳು ನೀರಿಗೆ ಬರಲ್ವೇ ಅಂದಂಗೆ ಮಹಾರಾಷ್ಟ್ರಕ್ಕೆ ಬಂದ ಮಿಡತೆಗಳು ಕರ್ನಾಟಕಕ್ಕೆ ಬಾರದೆ ಹೋಗುತ್ತವಾ? ವಿಜ್ಞಾನಿಗಳು ಕರ್ನಾಟಕಕ್ಕೆ ಮಿಡತೆಗಳು ಬರುತ್ತವಾ ಎಂಬ ಪ್ರಶ್ನೆಯನ್ನು ಅಲ್ಲಗಳೆಯುವುದಿಲ್ಲ. ಗಾಳಿ ಬೀಸುವ ದಿಕ್ಕನ್ನು ಅನುಸರಿಸಿ ಮಹಾರಾಷ್ಟ್ರದಿಂದ ಬೆಳಗಾವಿ, ಬಿಜಾಪುರ ಭಾಗಕ್ಕೆ ಈ ಮಿಡತೆಗಳ ಸಮೂಹ ಬಂದರೂ ಅಚ್ಚರಿಪಡಬೇಡಿ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.
ಮರುಭೂಮಿ ಮಿಡತೆಗಳ ನಿಯಂತ್ರಣ ಹೇಗೆ?
ಮೆಲಾಥಿಯನ್ 96% ಕೀಟನಾಶಕವನ್ನು ನೀರು ಬೆರೆಸದೆ ULV (Ultra Low Volume) Fogging machine ಗಳಲ್ಲಿ ಸಿಂಪರಣೆ ಕೊಡಬೇಕು ಎಂಬುದು ವಿಜ್ಞಾನಿಗಳ ಶಿಫಾರಸ್ಸು. ಇದರ ಸಿಂಪರಣೆಗೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಸಿಂಪರಣೆ ಕೊಡುವವರು ಬಹಳ ಜಾಗರೂಕತೆಯಿಂದ ಆ ಕೆಲಸ ಮಾಡಬೇಕು. ಅಕ್ಕಪಕ್ಕದ ಜಲಮೂಲಗಳಿಗೆ ಅಥವಾ ಹರಿವ ನೀರಿಗೆ ಇದು ಬೆರೆಯುವಂತಿಲ್ಲ. ಗಾಳಿಯಲ್ಲಿ ಸೇರಿಹೋದರೆ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದರ ಅಂಶ ಬಹಳ ಕಾಲ ಪರಿಸರದಲ್ಲಿ ಉಳಿಯುತ್ತದೆ. ಭೂಮಿಗೂ ಸೇರಿ ಅಂತರ್ಜಲವನ್ನು ಕಲುಶಿತಗೊಳಿಸುವ ಸಾಧ್ಯತೆ ಇದೆ. ಜನ ಜಾನುವಾರುಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮವಾಗುತ್ತದೆ. ಹೀಗೆ ಪರಿಸರ ಕಾಳಜಿಯಿಂದ ಈ ರಾಸಾಯನಿಕ ಬಹಳ ಹಾನಿಕಾರಕವೆಂದು ಹೇಳಲಾಗುತ್ತಿದೆ.
ಇದನ್ನು ಹೊರತುಪಡಿಸಿ ಜೈವಿಕ ಮೂಲದ ಯಾವುದಾದರೂ ಉತ್ಪನ್ನ ಮಿಡತೆಗಳ ಉಪಟಳವನ್ನು ನಿಯಂತ್ರಿಸಬಹುದಾ ಎಂಬ ನಮ್ಮ ಕುತೂಹಲಕ್ಕೆ ತೆರೆ ಎಳೆದವರು ಬೆಂಗಳೂರು ಮೂಲದ ಮಲ್ಟಿಪ್ಲೆಕ್ಸ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಸ್ಥರಾದ ಡಾ. ಎಸ್.ಕೆ.ಘೋಷ್.
ಅದ್ಯಾಕೋ.. ಜೀವಕ್ಕೆ ಕೊರೊನಾ ಕುತ್ತು, ಜೀವನಕ್ಕೆ ಮಿಡತೆ ಆಪತ್ತು!?
ದಕ್ಷಿಣ ಆಫ್ರಿಕಾದಲ್ಲಿ ಯಶ ಕಂಡಿರುವ ಜೈವಿಕ ಉತ್ಪನ್ನಗಳು
ಘೋಷ್ ಅವರು ಹೇಳುವಂತೆ ಮರುಭೂಮಿ ಮಿಡತೆಗಳನ್ನು ಜೈವಿಕ ಉತ್ಪನ್ನಗಳಿಂದ ನಿಯಂತ್ರಿಸಬಹುದು. ದಕ್ಷಿಣ ಆಫ್ರಿಕಾದಲ್ಲಿ ಈಗಾಗಲೇ ಜೈವಿಕ ಉತ್ಪನ್ನಗಳು ಯಶ ಕಂಡಿವೆ ಎಂಬುದಾಗಿಯೂ ಇವರು ತಿಳಿಸಿದ್ದಾರೆ. Metarhizium anisopliae var. acridium ಉಳ್ಳ ಉತ್ಪನ್ನದಿಂದ ಮಿಡತೆಗಳ ನಿಯಂತ್ರಣ ಸಾಧ್ಯವೆಂದು ಖಡಕ್ಕಾಗಿ ಹೇಳುತ್ತಾರೆ. ಇದನ್ನು ಹೆಲಿಕ್ಯಾಪ್ಟರ್ ಮೂಲಕ ಸಿಂಪಡಿಸಬೇಕೆಂದೂ ಶಿಫಾರಸ್ಸು ಮಾಡುತ್ತಾರೆ.
ಮುಂದುವರೆದು, ಇದರ ಜೊತೆಗೆ ಮತ್ತ್ಯಾವುದಾದರೂ ಪರಿಣಾಮಕಾರಿ ರಾಸಾಯನಿಕವನ್ನೂ ಒಳಗೊಂಡು ಸಮಗ್ರ ಕೀಟ ನಿರ್ವಹಣಾ ಕ್ರಮಗಳನ್ನು ಇದೀಗ ರೂಪಿಸಬೇಕಿದೆ. ಇದು ರಾಜ್ಯ ಹಾಗೂ ಇಡೀ ರಾಷ್ಟ್ರದ ಹಿತದೃಷ್ಟಿಯಿಂದ ಒಳ್ಳೆಯದು ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಕರ್ನಾಟಕ ರಾಜ್ಯಕ್ಕೆ ಮಿಡತೆಗಳು ಬಾರದಂತೆ ತಡೆಯಲು ಐಡಿಯಾ ಇದೆಯಾ ?
ಇದಕ್ಕಿರುವುದೊಂದೇ ದಾರಿ. ಮಹಾರಾಷ್ಟ್ರದಲ್ಲಿ ಅಲೆಯುತ್ತಿರುವ ಮಿಡತೆಗಳ ಸಮೂಹವನ್ನು ನಿಯಂತ್ರಿಸಲು ಕರ್ನಾಟಕ ಸರ್ಕಾರವೂ ಕೈಜೋಡಿಸಬೇಕು. ಕರ್ನಾಟಕ ಸರ್ಕಾರ ತನ್ನ ರಾಜ್ಯದ ವಿಜ್ಞಾನಿಗಳು, ಸಂಪನ್ಮೂಲ ಹಾಗೂ ಇದರ ಬಗೆಗಿನ ಜ್ಞಾನ ಎಲ್ಲವನ್ನೂ ಇದೀಗ ಮಹಾರಾಷ್ಟ್ರಕ್ಕೆ ಧಾರೆ ಎರೆಯಬೇಕು.
ಕರ್ನಾಟಕಕ್ಕೆ ಬಂದಾಗ ಹೆಣಗುವ ಬದಲು ಈಗಲೀಗ ಮಹಾರಾಷ್ಟ್ರದ ಜೊತೆಗೆ ಕೈಜೋಡಿಸಿ ಅಲ್ಲಿ ಪೂರ್ಣ ನಿಯಂತ್ರಿಸಿದರೆ ಕರ್ನಾಟಕಕ್ಕೆ ಬರುವುದನ್ನು ತಪ್ಪಿಸಬಹುದು.