ಸಂಕಷ್ಟದಲ್ಲಿರುವ ರೈತರಿಗೆ ಬರೆ?; ಹಾಲು ಖರೀದಿ ದರ ಒಂದು ರೂ ಕಡಿತ?
ಮೈಸೂರು, ಮೇ 11: ಕೊರೊನಾ ಮಹಾಮಾರಿ ಸೋಂಕಿನ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿದೆ. ರೈತರ ಕೃಷಿ ಉತ್ಪನ್ನಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಈ ಸಂದಿಗ್ಧ ಸಮಯದಲ್ಲಿ ರೈತರ ಮೇಲೆ ಮತ್ತೊಂದು ಬರೆ ಬೀಳುವ ಸಾಧ್ಯತೆ ಇದೆ.
ಮೈಸೂರು ಜಿಲ್ಲಾ ಹಾಲು ಒಕ್ಕೂಟ (ಮೈಮುಲ್) ಹಾಲಿನ ಖರೀದಿ ದರ ಕಡಿತಗೊಳಿಸಲು ತಿರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ. ದೇಶಾದ್ಯಂತ ಲಾಕ್ ಡೌನ್ ನಿಂದಾಗಿ ಹಾಲಿನ ಮಾರಾಟ ನಿತ್ಯ 40 ಸಾವಿರ ಲೀಟರ್ ಗಳಷ್ಟು ಕುಸಿದಿದ್ದು, ಮೈಮುಲ್ ಗೆ ನಷ್ಟವಾಗುತ್ತಿದೆ ಎನ್ನಲಾಗಿದೆ. ಹೀಗಾಗಿ ದರ ಕಡಿತಕ್ಕೆ ಮುಂದಾಗಿದೆ.
ಹಾಲು ಕೊಳ್ಳೋರು ಇಲ್ಲ; ಮೈಮುಲ್ ಗೂ ಬರೆ ಎಳೆಯಿತು ಕೊರೊನಾ
ಹಾಲು ಉತ್ಪಾದನೆ ಹೆಚ್ಚಿದೆ, ಮಾರಾಟ ಕುಸಿದಿದೆ
ಮೈಸೂರು ಜಿಲ್ಲೆಯೊಂದರಲ್ಲೇ ಪ್ರತಿನಿತ್ಯ 5.63 ಲಕ್ಷ ಲೀಟರ್ ಗಳಷ್ಟು ಹಾಲು ಉತ್ಪಾದನೆ ಆಗುತ್ತಿದೆ. ಇದರಲ್ಲಿ ಈಗ ನಿತ್ಯ 2.14 ಲಕ್ಷ ಲೀಟರ್ ನಷ್ಟು ಹಾಲು ಮತ್ತು 46,900 ಲೀಟರ್ ಗಳಷ್ಟು ಮೊಸರು ಮಾರಾಟವಾಗುತ್ತಿದೆ. ಹೆಚ್ಚುವರಿ ಹಾಲನ್ನು ಮದರ್ ಡೈರಿ ಮತ್ತು ಚನ್ನರಾಯಪಟ್ಟಣದ ಡೈರಿಗೆ ಹಾಲಿನ ಪುಡಿ ಮತ್ತು ಇತರ ಉತ್ಪನ್ನ ಮಾಡಲು ಕಳಿಸಲಾಗುತ್ತಿದೆ. ಹಾಲಿನ ಉತ್ಪಾದನೆ ಹೆಚ್ಚಿದ್ದು, ಮಾರಾಟ 35 ರಿಂದ 40 ಸಾವಿರ ಲೀಟರ್ ಗಳಷ್ಟು ಕಡಿಮೆ ಆಗಿರುವುದರಿಂದ ಮೈಮುಲ್ ಆರ್ಥಿಕ ಸಂಕಷ್ಟಕ್ಕೆ ತುತ್ತಾಗುವ ಸಾಧ್ಯತೆ ಇದೆ.
ಆರ್ಥಿಕ ಸಂಕಷ್ಟ ಕಡಿಮೆ ಮಾಡಲು ದರ ಕಡಿತ?
ಆರ್ಥಿಕ ಸಂಕಷ್ಟ ಕಡಿಮೆ ಮಾಡಲು ಖರೀದಿ ದರ ಕಡಿತಗೊಳಿಸಲು ಮೈಮುಲ್ ಚಿಂತಿಸಿದ್ದು ರೈತರಿಂದ ಖರೀದಿಸುವ ಪ್ರತಿ ಲೀಟರ್ ಗೆ 1.50 ರೂ. ಕಡಿತಗೊಳಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಮೈಮುಲ್ ಪ್ರಸ್ತುತ ರೈತರಿಗೆ ಒಂದು ಲೀಟರ್ ಹಾಲಿಗೆ 27.50 ರೂ ನೀಡುತ್ತಿದೆ. ಒಂದು ವೇಳೇ ಖರೀದಿ ದರ ಕಡಿತಗೊಂಡರೆ ಹಾಲು ಉತ್ಪಾದಕರು 26ರೂಗೆ ಹಾಲು ಮಾರಾಟ ಮಾಡಬೇಕಿದೆ. ಆದರೆ ಮೈಮುಲ್ ನ ಈ ತೀರ್ಮಾನಕ್ಕೆ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಕ್ರಮ ಹಾಲು ಮಾರಾಟಕ್ಕೆ ತಡೆ: ಮೈಮುಲ್ ಎಂಡಿಗೆ ಕೊಲೆ ಬೆದರಿಕೆ
ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ
ಈ ವರ್ಷ ಲಾಕ್ ಡೌನ್ ನಿಂದಾಗಿ ಕೃಷಿ ಉತ್ಪನ್ನಗಳನ್ನು ಲಾರಿಗಳಲ್ಲಿ ಹೊರ ರಾಜ್ಯಗಳಿಗೆ ಕಳಿಸಲು ಆಗುತ್ತಿಲ್ಲ. ಇಲ್ಲಿ ಬೆಲೆಯೇ ಇಲ್ಲದಂತಾಗಿದೆ. ಜತೆಗೆ ಲಾಕ್ ಡೌನ್ನಿಂದಾಗಿ ರೇಷ್ಮೆಗೂ ಉತ್ತಮ ಬೆಲೆ ಸಿಗಲಿಲ್ಲ. ರೈತರು ಹೈನುಗಾರಿಕೆಯಿಂದ ಮನೆಯಲ್ಲಿ ದಿನಾ ಊಟ ಮಾಡುತ್ತಿದ್ದಾರೆ. ಈಗ ಹಾಲಿನ ಖರೀದಿ ದರ ಕಡಿಮೆ ಮಾಡಿದರೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಜಾನುವಾರುಗಳ ಆಹಾರ ಪದಾರ್ಥಗಳಾದ ಬೂಸಾ, ಹಿಂಡಿ, ಹೊಟ್ಟಿನ ದರವೂ ಹೆಚ್ಚಾಗಿದೆ. ಒಂದು ಹಸುವಿಗೆ ದಿನಕ್ಕೆ 120 ರೂ. ನಂತೆ ತಿಂಗಳಿಗೆ 3,600 ರೂ. ಆಹಾರಕ್ಕೇ ಬೇಕು. ಹಸುಗಳ ಸಾಕಣೆಯೇ ಕಷ್ಟವಾಗಿರುವಾಗ ಹಾಲಿನ ಖರೀದಿ ದರ ಕಡಿಮೆ ಮಾಡಿದರೆ ಹೇಗೆ ಎಂದು ಕಂಪ್ಲಾಪುರ ಗ್ರಾಮದ ರೈತ ಬಸವರಾಜ ಪ್ರಶ್ನಿಸಿದರು.
ನಾಳೆ ನಡೆಯುವ ಸಭೆಯಲ್ಲಿ ಅಂತಿಮ ತೀರ್ಮಾನ
ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷ ಕುಟುಂಬಗಳು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿವೆ. 1100 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಖರೀದಿ ದರ ಕಡಿಮೆ ಮಾಡಿದರೆ ರೈತರು ಇನ್ನಷ್ಟು ತೊಂದರೆಗೆ ಸಿಲುಕುತ್ತಾರೆ. ದರ ಕಡಿತ ವದಂತಿ ಕುರಿತು ಮೈಮುಲ್ ಅದ್ಯಕ್ಷ ಎಸ್ ಸಿದ್ದೇಗೌಡ ಅವರನ್ನು ಒನ್ ಇಂಡಿಯಾ ಕನ್ನಡ ಪ್ರಶ್ನಿಸಿದಾಗ, ಮಂಗಳವಾರ ನಡೆಯಲಿರುವ ಮೈಮುಲ್ ಆಡಳಿತ ಮಂಡಳಿಯ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.