ಸಾಲಮನ್ನಾದಿಂದ ರೈತರ ಸಮಸ್ಯೆ ಪರಿಹಾರವಾಗಲ್ಲ: ವೆಂಕಯ್ಯ ನಾಯ್ಡು
ಬೆಂಗಳೂರು, ಜನವರಿ 7: "ಉಚಿತ ವಿದ್ಯುತ್ ಹಾಗೂ ಸಾಲಮನ್ನಾ ಯೋಜನೆಗಳಿಂದ ರೈತರ ಸಮಸ್ಯೆ ಪರಿಹಾರವಾಗಲ್ಲ. ಇವು ತಾತ್ಕಾಲಿಕ ಪರಿಹಾರ ಅಷ್ಟೇ' ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಮಂಗಳವಾರ ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ 107ನೇ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, "ರೈತರ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಬೇಕಿಲ್ಲ. ರೈತರಿಗೆ ಬದುಕಿನ ಭದ್ರತೆ ನೀಡಿ, ಶಾಶ್ವತ ಪರಿಹಾರ ಕಲ್ಪಿಸಿ. ಇದರಿಂದ ರೈತ ಸ್ವಾವಲಂಬಿಯಾಗಿ ಬದುಕಲು ಅವಕಾಶ ಆಗಲಿದೆ. ಕೃಷಿ ಕ್ಷೇತ್ರದಲ್ಲಿ ವಿಜ್ಞಾನದ ಹಾಗೂ ತಂತ್ರಜ್ಞಾನದ ಅಳವಡಿಕೆ ಆಗಬೇಕು. ಹಾಗಾದಾಗ ಅವರ ಬದುಕು ಅವರೇ ಕಟ್ಟಿಕೊಳ್ಳಲಿದ್ದಾರೆ' ಎಂದು ಹೇಳಿದರು.
ಮಿತ್ರನನ್ನು ನೆನಪಿಸಿಕೊಂಡು ಭಾವುಕರಾದ ವೆಂಕಯ್ಯ ನಾಯ್ಡು...
"ದೇಶದ ವಿವಿಧ ಭಾಗದಿಂದ ವಿಜ್ಞಾನಿಗಳು, ಯುವ ವಿಜ್ಞಾನಿಗಳು, ಆಸಕ್ತರು ಕಳೆದ ಐದು ದಿನ ಉತ್ತಮ ಜ್ಞಾನವನ್ನು ವಿಜ್ಞಾನದ ಮೂಲಕ ನೀಡಿದ್ದಾರೆ. ಕೃಷಿ ದೇಶದ ಮೂಲ ಸಂಸ್ಕೃತಿಯಾಗಿದೆ. ಇದನ್ನು ಬುಳಿಸಿಕೊಂಡು ಸಾಗಬೇಕಿದೆ. ಇದರಿಂದ ವಿಜ್ಞಾನಿಗಳು ಹೆಚ್ಚಿನ ಸಂಶೋಧನೆಯನ್ನು ಕೃಷಿ ವಿಚಾರದಲ್ಲಿ ಮಾಡಿ. ಗ್ರಾಮೀಣ ಭಾಗದ ರೈತರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಅವರಿಗೆ ಪರಿಹಾರ ಕಲ್ಪಿಸಿ ಅವರ ಬದುಕು ಹಸನಾಗಿಸಬೇಕು' ಎಂದರು.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಾತನಾಡಿ, "ಐದು ದಿನದ ಕಾರ್ಯಕ್ರಮದಲ್ಲಿ ಮೊದಲ ದಿನದಿಂದಲೂ ಉತ್ತಮ ಆಸಕ್ತಿ ಕಂಡಿದ್ದೇನೆ. ವಿಜ್ಞಾನ, ತಂತ್ರಜ್ಞಾನದ ವಿಚಾರದಲ್ಲಿಕಾಣಿಸಿದ ಆಸಕ್ತಿ ಗಮನಿಸಿದ್ದೇನೆ. ಈ ಐದು ದಿನ ಸಾವಿರಾರು ವಿಜ್ಞಾನಿಗಳು, ಯುವಕರು ಪಾಲ್ಗೊಂಡು ಬೌದ್ಧಿಕ ಜ್ಞಾನ ಹೆಚ್ಚಿಸಿಕೊಂಡಿದ್ದಾರೆ. ಜ್ಞಾನ ನಿಂತ ನೀರಾಗಬಾರದು. ವಿಜ್ಞಾನ, ತಂತ್ರಜ್ಞಾನ ಬೇರೆ ಬೇರೆ ಅಲ್ಲ. ಇವು ಒಂದಾಗಿ ಜನೋಪಕಾರಿಯಾಗಲು ಶ್ರಮಿಸಬೇಕು ಎಂದರು.
ಸಮಾರಂಭದಲ್ಲಿ ಕೋಲ್ಕತ್ತಾ ಐಎಸ್ಸಿಎ ಪ್ರಧಾನ ಅಧ್ಯಕ್ಷ ಫ್ರೊ. ಕೆ.ಎಸ್.ರಂಗಪ್ಪ, 2021ರ ಐಎಸ್ಸಿಎ ಕೋಲ್ಕತಾ ಚುನಾಯಿತ ಪ್ರಧಾನ ಅಧ್ಯಕ್ಷೆ ಪ್ರೋ. ವಿಜಯಲಕ್ಷ್ಮಿ ಸಕ್ಸೇನಾ, ಕೃಷಿ ವಿವಿ ಉಪಕುಲಪತಿ ಪ್ರೋ. ರಾಜೇಂದ್ರ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. ಇಸ್ಕಾ ಪ್ರಶಸ್ತಿಯ ವಿವಿಧ ವಿಭಾಗದ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಫ್ರೊ. ಕೆ.ಎಸ್. ರಂಗಪ್ಪ ಅವರು ವಿಜ್ಞಾನ ಜ್ಯೋತಿಯನ್ನು 2021ರ ಐಎಸ್ಸಿಎ ಕೋಲ್ಕತಾ ಚುನಾಯಿತ ಪ್ರಧಾನ ಅಧ್ಯಕ್ಷೆ ಪ್ರೋ. ವಿಜಯಲಕ್ಷ್ಮಿ ಸಕ್ಸೇನಾ ಅವರಿಗೆ ಹಸ್ತಾಂತರ ಮಾಡಿದರು.