ರೈತರ ಪ್ರತಿಭಟನೆ; ಡೆತ್ ನೋಟ್ ಬರೆದು ಪಂಜಾಬ್ ವಕೀಲ ಆತ್ಮಹತ್ಯೆ
ನವದೆಹಲಿ, ಡಿಸೆಂಬರ್ 28: ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ಬೆಂಬಲಿಸಿ ತನ್ನ ಪ್ರಾಣ ತ್ಯಾಗ ಮಾಡುತ್ತಿರುವುದಾಗಿ ಡೆತ್ ನೋಟ್ ಬರೆದು ಪಂಜಾಬ್ ಮೂಲದ ವಕೀಲರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಡಿ.27ರ ಭಾನುವಾರ ಪ್ರತಿಭಟನಾ ಸ್ಥಳದ ಸಮೀಪ ನಡೆದಿದೆ.
ಪಂಜಾಬ್ ನ ಫಜಿಲ್ಕಾ ಜಿಲ್ಲೆ ಜಲಾಲಾಬಾದ್ ನ ವಕೀಲ ಅಮರ್ ಜಿತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡವರು. ದೆಹಲಿಯ ಹೊರವಲಯದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನಾ ಸ್ಥಳದಿಂದ ಸ್ವಲ್ಪ ದೂರದಲ್ಲಿ ವಿಷ ಸೇವಿಸಿ ಅಮರ್ ಜಿತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.
"ಇಂಥ ಕಠಿಣ ಪರಿಸ್ಥಿತಿಯಲ್ಲೂ ಮೋದಿ ಮೌನಕ್ಕೆ ಗಂಟುಬಿದ್ದಿದ್ದೇಕೆ?"
ಅಮರ್ ಜಿತ್ ಬಳಿ ಡೆತ್ ನೋಟ್ ಕೂಡ ಪತ್ತೆಯಾಗಿದ್ದು, ಅದರಲ್ಲಿ ಕೃಷಿ ಕಾಯ್ದೆ ವಿರುದ್ಧ ರೈತರ ಹೋರಾಟಕ್ಕೆ ಬೆಂಬಲವಾಗಿ ತಮ್ಮ ಪ್ರಾಣ ತ್ಯಾಗ ಮಾಡುತ್ತಿದ್ದು, ಸರ್ಕಾರ ರೈತರ ಕರೆಗೆ ಓಗೊಡಬೇಕು ಎಂದು ಕೇಳಿಕೊಂಡಿದ್ದಾರೆ. ಈ ಮೂರು ಕಪ್ಪು ಕಾಯ್ದೆಗಳಿಂದ ರೈತರು ಹಾಗೂ ನೌಕರರಂಥ ಸಾಮಾನ್ಯ ಜನರು ವಂಚನೆಗೊಳಗಿರುವ ಹಾಗೆ ಭಾಸವಾಗುತ್ತಿದೆ ಎಂದು ಬರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹೆಸರನ್ನೂ ಉಲ್ಲೇಖಿಸಿ, ಮೋದಿ ಜನರ ದನಿಗೆ ಕಿವಿಗೊಡಬೇಕು ಎಂದು ಬರೆದಿದ್ದಾರೆ.
ಡೆತ್ ನೋಟ್ ನಲ್ಲಿ ಡಿ.18ರ ದಿನಾಂಕ ನಮೂದಾಗಿದ್ದು, ಪತ್ರದ ಸತ್ಯಾಸತ್ಯತೆ ಕುರಿತು ಪರಿಶೀಲನೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. "ಮೃತಪಟ್ಟವರ ಸಂಬಂಧಿಗಳಿಗೆ ವಿಷಯ ತಿಳಿಸಿದ್ದೇವೆ. ಅವರು ಇಲ್ಲಿಗೆ ಬಂದ ನಂತರ ಹೇಳಿಕೆಗಳನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಹರಿಯಾಣ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಆತ್ಮಹತ್ಯೆ ಕುರಿತು ಆಸ್ಪತ್ರೆಯಿಂದ ಮಾಹಿತಿ ಬಂದಿದ್ದಾಗಿ ತಿಳಿಸಿದ್ದಾರೆ.
ಪ್ರತಿಭಟನೆ ಆರಂಭಗೊಂಡ ತಿಂಗಳ ಅಂತರದಲ್ಲಿ ರೈತರ ಹೋರಾಟ ಬೆಂಬಲಿಸಿ ಎರಡು ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಈಚೆಗೆ 65 ವರ್ಷದ ಸಿಖ್ ಧರ್ಮಗುರು ಸಂತ ರಾಮ್ ಸಿಂಗ್ ಸಿಂಘು ಗಡಿ ಸಮೀಪ ಆತ್ಮಹತ್ಯೆ ಮಾಡಿಕೊಂಡಿದ್ದು, ರೈತರ ನೋವನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದರು. ಕೆಲವೇ ದಿನಗಳ ನಂತರ 22 ವರ್ಷದ ಪಂಜಾಬ್ ಮೂಲದ ಬತಿಂದಾ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದರು.
ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಗಡಿ ಪ್ರದೇಶಗಳಲ್ಲಿ ಪಂಜಾಬ್, ಹರಿಯಾಣ, ಉತ್ತರಪ್ರದೇಶದ ರೈತರು 33 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.