ಸಿಎಂ-ರೈತರ ಸಭೆ ಮುಕ್ತಾಯ, ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ಸಭೆ ಆರಂಭ
ಬೆಂಗಳೂರು, ನವೆಂಬರ್ 20: ಕೆಲವು ದಿನಗಳಿಂದ ಬೆಂಬಲ ಬೇಲೆ ಸೇರಿ ಇನ್ನಿತರ ಬೇಡಿಕೆಗಳಿಗಾಗಿ ಹೋರಾಡುತ್ತಿದ್ದ ರಾಜ್ಯದ ಕಬ್ಬು ಬೆಳೆಗಾರರ ಜೊತೆ ಇಂದು ವಿಧಾನಸೌಧದಲ್ಲಿ ಸಿಎಂ ಕುಮಾರಸ್ವಾಮಿ ಅವರು ಸಭೆ ನಡೆಸಿದರು.
ಕಲಬುರಗಿ, ಬಿಜಾಪುರ, ಬೆಳಗಾವಿ ಇನ್ನೂ ಹಲವು ಜಿಲ್ಲೆಗಳ ಕಬ್ಬು ಬೆಳಗಾರ ರೈತ ಮುಖಂಡರು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್ ನೇತೃತ್ವದಲ್ಲಿ ಸಿಎಂ ಜೊತೆ ಸಭೆ ನಡೆಸಿ ತಮ್ಮ ಅವಹಾಲುಗಳನ್ನು ಸಿಎಂ ಮುಂದೆ ತೋಡಿಕೊಂಡರು.
ಸಭೆಯ ಬಳಿಕ ಮಾಧ್ಯಗಳೊಂದಿಗೆ ಮಾತನಾಡಿದ ಕಬ್ಬು ಬೆಳಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್ ಅವರು, ಸರ್ಕಾರಕ್ಕೆ ಕಬ್ಬು ಬೆಳೆಗಾರರ ಕಷ್ಟ ಮನದಟ್ಟಾಗಿದೆ. ನಮಗೆ ನ್ಯಾಯ ದೊರಕಿಸಿಕೊಡುವ ಭರವಸೆಯನ್ನು ಸರ್ಕಾರ ನಮಗೆ ನೀಡಿದೆ ಎಂದು ಹೇಳಿದರು.
ಎಫ್ಆರ್ಪಿ ದರ ಹೆಚ್ಚಳಕ್ಕೆ ಮನವಿ
ಎಫ್ಆರ್ಪಿ ದರವನ್ನು ಹೆಚ್ಚಳ ಮಾಡುವಂತೆ. ಮಹಾರಾಷ್ಟ್ರ ಮಾದರಿಯಲ್ಲಿ ಎಫ್ಆರ್ಪಿ ದರವನ್ನು ನೀಡುವಂತೆ ಕಬ್ಬು ಬೆಳಗಾರರು ಸಿಎಂ ಬಳಿ ಮನವಿ ಮಾಡಿದ್ದಾರೆ. ಇದರ ಬಗ್ಗೆಯೂ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಬಾಕಿ ಹಣ ಕೊಡಿಸಲು ಸರ್ಕಾರ ಬದ್ಧ
ಅಷ್ಟೆ ಅಲ್ಲದೆ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕೊಡಬೇಕಾದ ಬಾಕಿಯನ್ನು ಕೊಡಿಸುವ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಂಡಿದೆ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರು ಮಾಧ್ಯಮಗಳಿಗೆ ಹೇಳಿದ್ದಾರೆ.
ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ
ಕಬ್ಬು ಬೆಳೆಗಾರರ ಜೊತೆ ಸಭೆ ಮುಗಿಸಿದ ಕುಮಾರಸ್ವಾಮಿ ಅವರು ಕಬ್ಬು ಬೆಳೆಗಾರರು ನೀಡಿದ ಬೇಡಿಕೆಗಳ ಪಟ್ಟಿ ಮಾಡಿಕೊಂಡು ಇದೀಗ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಭೆ ನಡೆಸುತ್ತಿದ್ದು. ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ಬಳಿಕ ಮತ್ತೆ ಕಬ್ಬು ಬೆಳೆಗಾರರೊಂದಿಗೆ ಸಭೆ ನಡೆಸಲಿದ್ದಾರೆ.
ಕೆಲವು ದಿನಗಳಿಂದ ಪ್ರತಿಭಟನೆ
ಕುಮಾರಸ್ವಾಮಿ ಅವರ ವಿರುದ್ಧ ರಾಜ್ಯದ ಹಲವೆಡೆ ಕಬ್ಬು ಬೆಳೆಗಾರರು ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಕಬ್ಬಿಗೆ ಬೆಂಬಲ ಬೆಲೆ ಹೆಚ್ಚಳ, ಸಕ್ಕರೆ ಕಾರ್ಖಾನೆಗಳ ಬಾಕಿ ಹಣ ಸೇರಿ ಇನ್ನೂ ಹಲವು ಬೇಡಿಕೆಗಳ ಈಡೇರಿಕಾಗಿ ಪ್ರತಿಭಟನೆ ನಡೆದಿತ್ತು. ಹಾಗಾಗಿ ಇಂದು ಸಿಎಂ ಅವರು ಕಬ್ಬು ಬೆಳೆಗಾರರ ಜೊತೆ ಸಭೆ ನಡೆಸಿದ್ದಾರೆ.