ಬಾಳೆ ಬೆಳೆದು ಲಾಭದತ್ತ ಸಾಗಿದ ಕೊಪ್ಪಳದ ಕೃಷಿಕ
ಕೊಪ್ಪಳ, ಆಗಸ್ಟ್ 18; ಮೆಕ್ಕೆ ಜೋಳ, ಈರುಳ್ಳಿ ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದರೂ ಲಾಭ ಸರಿಯಾಗಿ ಸಿಗಲಿಲ್ಲ. ಇದರಿಂದಾಗಿ ಕೊಪ್ಪಳದ ಕೃಷಿಕ ತೋಟಗಾರಿಕೆ ಇಲಾಖೆಯ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಬಾಳೆ ಬೆಳೆದು ಆರ್ಥಿಕವಾಗಿ ಅಭಿವೃದ್ಧಿಯತ್ತ ಸಾಗಿ ಇತರ ರೈತರಿಗೆ ಮಾದರಿಯಾಗಿದ್ದಾರೆ.
ಕೊಪ್ಪಳ ತಾಲೂಕಿನ ಬಿಸರಳ್ಳಿ ಗ್ರಾಮದ ಕೃಷಿಕ ಎಲ್ಲೇಶ 7 ಎಕರೆ ಜಮೀನು ಹೊಂದಿದ್ದಾರೆ. ಜಿಲ್ಲೆಯ ಹಲವು ರೈತರು ಬಾಳೆ ಬೆಳೆದು ಆರ್ಥಿಕ ಪ್ರಗತಿ ಸಾಧಿಸಿದ್ದನ್ನು ನೋಡಿ ತಾನು ಬಾಳೆ ಬೆಳೆಯಬೇಕೆಂದು ಸಹಾಯಕ ತೋಟಗಾರಿಕೆ ಅಧಿಕಾರಿ ಮಲ್ಲಿಕಾರ್ಜುನ ಬಂಡಿ ಅವರನ್ನು ಭೇಟಿ ಮಾಡಿದರು.
ಕಬ್ಬಿನ ನಾಡಲ್ಲಿ 110 ಟನ್ ಬಾಳೆ ಬೆಳೆದು ಲಾಭಗಳಿಸಿದ ರೈತ!
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವೈಯಕ್ತಿಕ ಕೆರೆ ನಿರ್ಮಿಸಿಕೊಳ್ಳಲು ಅವಕಾಶ ಇದೆ. ಅದರ ಮೂಲಕ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು ಒಗ್ಗೂಡಿಸಿಕೊಂಡು ಹನಿ ನೀರಾವರಿ ಅಳವಡಿಸಿಕೊಂಡಲ್ಲಿ ಬಾಳೆ ಬೆಳೆಯಬಹುದೆಂದು ಅಧಿಕಾರಿಗಳು ಸಲಹೆ ನೀಡಿದರು.
2 ಎಕರೆಯಲ್ಲಿ 40 ಟನ್ ಬಾಳೆ ಬೆಳೆದು ಲಾಭ ಪಡೆದ ರೈತ
ರೈರ ಎಲ್ಲೇಶರ ಅಗತ್ಯ ದಾಖಲೆಗಳೊಂದಿಗೆ ಸಹಾಯಕ ತೋಟಗಾರಿಕೆ ನಿರ್ದೇಶಕ ಜನಾರ್ಧನ್ ರೆಡ್ಡಿ ಸಂಪರ್ಕಿಸಿ 2020-21 ನೇ ಸಾಲಿನಲ್ಲಿ 45x45x 3 ಮೀ ಉದ್ದಳತೆಯ ಕೆರೆ ನಿರ್ಮಿಸಿಕೊಂಡರು. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಒಗ್ಗೂಡಿಸಿಕೊಂಡು ಹನಿ ನೀರಾವರಿ ಅಳವಡಿಸಿಕೊಂಡು ಜುಲೈ ತಿಂಗಳಲ್ಲಿ ಸುಮಾರು 3000 ಜಿ-9 ಬಾಳೆ ಸಸಿಗಳನ್ನು ಖಾಸಗಿ ಕಂಪನಿಯಿಂದ ತಂದು ನಾಟಿ ಮಾಡಿದರು.
ಒಂದು ಜಿಲ್ಲೆ, ಒಂದು ಉತ್ಪನ್ನಕ್ಕೆ ಮೈಸೂರಿನ ಬಾಳೆ, ಕೊಡಗಿನ ಕಾಫಿ ಆಯ್ಕೆ
ಮಾರುಕಟ್ಟೆಗೂ ಅಧಿಕಾರಿಗಳ ನೆರವು
ಸಸಿಗಳನ್ನು ನಾಟಿ ಮಾಡಿದ ಬಳಿಕ ಹಾರ್ಟಿ ಕ್ಲಿನಿಕ್ ವಿಷಯ ತಜ್ಞರಾದ ವಾಮನ ಮೂರ್ತಿ ಸಲಹೆಯಂತೆ ನೀರು, ಪೋಷಕಾಂಶಗಳ ನಿರ್ವಹಣೆ ಮಾಡಿದರು. ಉತ್ತಮ ರೀತಿಯಲ್ಲಿ ಬೆಳೆ ಬಂದಿದೆ. ಸದ್ಯ ಪ್ರತಿ ಗೊನೆ 14 ರಿಂದ 16 ಚಿಪ್ಪುಗಳನ್ನು ಹೊಂದಿದೆ. 30 ಕಿ. ಗ್ರಾಂ. ತೂಗುತ್ತಿದೆ. ಸ್ಥಳೀಯ ವ್ಯಾಪಾರಿಗಳು 10.50 ರಿಂದ 11.00 ರಂತೆ ಪ್ರತಿ ಕಿ. ಗ್ರಾಂ.ಗೆ ಬೇಡಿಕೆ ಇಟ್ಟಿದ್ದಾರೆ. ಮಾರುಕಟ್ಟೆ ಒದಗಿಸುವುದಕ್ಕೂ ತೋಟಗಾರಿಕೆ ಅಧಿಕಾರಿಗಳು ಸಹಾಯ ಮಾಡಿದ್ದಾರೆ.
ಬಾಳೆ ಬೆಳೆಯ ವಿಶೇಷತೆಗಳು
ಎಲ್ಲೇಶ ವೈಯಕ್ತಿಕ ಕೆರೆ ನಿರ್ಮಿಸಿ ಮಳೆ ನೀರು ಕೊಯ್ಲು ಮಾಡಿ, ನೀರು ಸಂಗ್ರಹಣವಾದಾಗ ಬಾಳೆ ಬೆಳೆಯಲು ಮುಂದಾಗಿದ್ದಾರೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಒಗ್ಗೂಡಿಸಿಕೊಂಡು ಹನಿ ನೀರಾವರಿ ಅಳವಡಿಸಿಕೊಂಡಿದ್ದಾರೆ. ಆರಂಭದ ಹಂತದಲ್ಲಿ ಒಂದು ಸಾರಿ ಮಾತ್ರ ರಾಸಾಯನಿಕ ಗೊಬ್ಬರ ಬಳಸಿದ್ದು, ಕೊಟ್ಟಿಗೆ ಗೊಬ್ಬರ, ಎರೆಹುಳ ಗೊಬ್ಬರ, ಜೈವಿಕ ಗೊಬ್ಬರಗಳನ್ನು ಮಾತ್ರ ಬಳಸಿದ್ದಾರೆ. ಸಸ್ಯ ಸಂರಕ್ಷಣೆಗಾಗಿ 3 ಬಾರಿ ಪರಿಸರ ಪ್ರೇಮ ರಾಸಾಯನಿಕಗಳನ್ನು ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬಳಸಿದ್ದಾರೆ. 10 ರಿಂದ 12 ಲಕ್ಷ ಆದಾಯದ ನಿರೀಕ್ಷೆಯಲ್ಲಿ ಅವರಿದ್ದಾರೆ.
ರೈತರಿಗೆ ಅನುಕೂಲವಾಗಿದೆ
ಬಾಳೆ ಬೆಳೆ ಬಗ್ಗೆ ಎಲ್ಲೇಶ ಮಾತನಾಡಿದ್ದು, "ನಾನು ಬೆಳೆ ಬೆಳೆಯುವ ಆಸೆಯಿದ್ದರೂ ನೀರಿನ ಅಭಾವ ಇತ್ತು. ಆದರೆ ತೋಟಗಾರಿಕೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವೈಯಕ್ತಿಕ ಕೆರೆ ನಿರ್ಮಿಸಿ ಮಳೆ ನೀರನ್ನೇ ಹನಿ ನೀರಾವರಿ ಅಳವಡಿಸಿಕೊಂಡು ಬಾಳೆ ಬೆಳೆದಿದ್ದೇನೆ. ಸಾವಯವ ರೀತಿಯಲ್ಲಿಯೇ ಬೆಳೆದಿದ್ದರಿಂದ ಉತ್ತಮ ಫಸಲು ಬಂದಿದೆ. ಮಳೆ ನೀರಿನಿಂದಾಗಿ ಉತ್ತಮ ತೂಕ ಬಂದಿದೆ. ನಾನು ತೋಟಗಾರಿಕೆಯ ಎಲ್ಲಾ ಅಧಿಕಾರಿಗಳಿಗೂ ಋಣಿ" ಎಂದು ಹೇಳಿದ್ದಾರೆ.
ರೈತರಿಗೆ ಹಲವು ಅನುಕೂಲವಿದೆ
"ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸಮಗ್ರ ತೋಟಗಾರಿಕೆ ಮಾಡಲು ಅನುಕೂಲವಿದೆ. ಎಲ್ಲೇಶ ಅವರು ಯೋಜನೆಯನ್ನು ಸದ್ಭಳಕೆ ಮಾಡಿಕೊಂಡು ಬಾಳೆ ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ" ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ರಮೇಶ ಹೇಳಿದ್ದಾರೆ.
ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಆಸಕ್ತಿ ಇದ್ದಲ್ಲಿ ಇಲಾಖೆಗೆ ಬಂದು ಭೇಟಿಯಾದಲ್ಲಿ ಮಾರ್ಗದರ್ಶನ ನೀಡಲಾಗುತ್ತದೆ. ಮಾರುಕಟ್ಟೆಗೂ ಇಲಾಖೆಯಿಂದ ಅವಕಾಶ ಕಲ್ಪಿಸಲಾಗುತ್ತದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಮಾವು, ಪೇರಲ, ಬಾಳೆ ಅಲ್ಲದೆ ವಾಣಿಜ್ಯ ಬೆಳೆಗಳನ್ನು, ತರಕಾರಿ ಹಾಗೂ ಪುಷ್ಪ ಕೃಷಿ ಮಾಡುತ್ತಿದ್ದಾರೆ. ಈ ಮೂಲಕ ರೈತರು ಲಾಭವನ್ನುಗಳಿಸುತ್ತಿದ್ದಾರೆ.