ವಾಟ್ಸಪ್, ಫೇಸ್ ಬುಕ್ ಮೂಲಕ ಮಾವು ಮಾರಿ ಮಾದರಿಯಾದ ರೈತ!
ಕೊಪ್ಪಳ, ಮೇ 05 : ಮಾವು ಹಣ್ಣಿನ ರಾಜ ಎಂದು ಪ್ರಸಿದ್ಧಿ ಪಡೆದಿದೆ. ಕೊಪ್ಪಳ ಜಿಲ್ಲೆಯ ಪ್ರಮುಖ ಹಣ್ಣಿನ ಬೆಳೆ ಇದಾಗಿದೆ. ಏಪ್ರಿಲ್ ಬಂದರೆ ಮಾವಿನ ಹಣ್ಣಿನ ಮಾರಾಟ ಬಲು ಜೋರು. ಜಿಲ್ಲೆಯಲ್ಲಿ ಬೆಳೆಯಲಾಗುವ 'ಕೇಸರ್' ತಳಿ ಮಾವಿಗೆ ವಿದೇಶಗಳಲ್ಲೂ ಬೇಡಿಕೆ ಇದೆ.
ಈ ವರ್ಷ ಕೊರೊನಾ ಸೋಂಕಿನ ಕಾರಣ ಬೇಸಿಗೆಯಲ್ಲಿ ಮಾವು ಬೆಳೆದ ರೈತರಿಗೆ ಸಂಕಷ್ಟ ಎದುರಾಗಿದೆ. ಸೋಂಕು ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಮಾವು ಬೆಳೆಗಾರರ ಬದುಕು ಚಿಂತಾಜನಕವಾಗಿದೆ.
ಮಾರುಕಟ್ಟೆಗೆ ಬಂದ ಹಾವೇರಿ ಆಲ್ಫಾನ್ಸೋ ಮಾವು; ರುಚಿ ನೋಡಿದ್ರಾ?
ತೋಟಗಾರಿಕೆ ಇಲಾಖೆ ರೈತರ ಸಂಕಷ್ಟಕ್ಕೆ ಸ್ಪಂದಿಸಿದೆ. ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ಅವಕಾಶ ಕಲ್ಪಿಸಿದೆ. ರೈತರಿಗೆ ಪರವಾನಿಗೆ ಪತ್ರ ನೀಡುವ ಮೂಲಕ ರೈತರು ತಮ್ಮ ತೋಟಗಾರಿಕೆ ಉತ್ಪನ್ನಗಳನ್ನು ಮಾರಾಟ ಮಾಡಲು ಮತ್ತು ಅಂತರ್ ಜಿಲ್ಲೆಗಳಿಗೆ ಸಾಗಾಟ ಮಾಡಲು ಅನುಮತಿ ನೀಡಿದೆ.
ಕೊರೊನಾ ಲಾಕ್ ಡೌನ್; ಸಂಕಷ್ಟಕ್ಕೆ ಸಿಲುಕಿದ ಮಾವು ಬೆಳೆದ ರೈತ
ಯಲಬುರ್ಗಾ ತಾಲೂಕಿನ ತರಲಕಟ್ಟಿ ಗ್ರಾಮದ ರೈತರೊಬ್ಬರು ಸಾಮಾಜಿಕ ಜಾಲತಾಣವನ್ನು ಬಳಕೆ ಮಾಡಿಕೊಂಡು ಮಾವಿನ ಬೆಳೆಗೆ ಮಾರುಕಟ್ಟೆ ಕಂಡುಕೊಂಡಿದ್ದಾರೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರ ಮಾರಾಟದ ವೈಖರಿ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಕಾಲಿಕ ಮಳೆ; ಮಾವು ಬೆಳೆಗಾರರಿಗೆ ಉಪಯುಕ್ತ ಸಲಹೆಗಳು
ಕೊಪ್ಪಳದ ರೈತನ ಪರಿಚಯ
ರೈತರಾದ ಶಿವರಾಜ ಕೌಜಲಗಿ ಯಲಬುರ್ಗಾ ತಾಲೂಕಿನ ತರಲಕಟ್ಟಿ ಗ್ರಾಮದವರು. ಇವರು ಒಬ್ಬ ಪದವೀಧರರಾಗಿದ್ದು ಕೃಷಿಯಲ್ಲಿ ತೊಡಗಿದ್ದಾರೆ. ಮಾವು ಬೆಳೆಗೆ ಮಾರುಕಟ್ಟೆ ಒದಗಿಸಲು ಒಂದು ಹೆಜ್ಜೆ ಮುಂದಿಟ್ಟು ಸಾಮಾಜಿಕ ಜಾಲತಾಣ ಬಳಸಿಕೊಂಡು ಮಾರುಕಟ್ಟೆ ಕಂಡುಕೊಂಡಿದ್ದಾರೆ.
ವಿವಿಧ ತಳಿಯ ಮಾವುಗಳು
ರೈತ ಶಿವರಾಜ ಕೌಜಲಗಿ ತರಲಕಟ್ಟಿ ಗ್ರಾಮದಲ್ಲಿ ಸುಮಾರು 52 ಎಕರೆಯಲ್ಲಿ ವಿವಿಧ ತಳಿ ಮಾವನ್ನು ಬೆಳೆಯುತ್ತಿದ್ದಾರೆ. ಸಂಪೂರ್ಣ ಸಾವಯವ ಪದ್ದತಿಯಲ್ಲಿ ಮತ್ತು ಯಾಂತ್ರೀಕರಣ ಪದ್ಧತಿಯಲ್ಲಿ ಕೃಷಿ ಮಾಡುತ್ತಿದ್ದಾರೆ. "ಸಂಪೂರ್ಣ ಸಾವಯವ ಪದ್ದತಿಯಲ್ಲಿ ಬೆಳೆಯುವ ಮಾವು ಉತ್ತಮ ಗುಣಮಟ್ಟ ಹೊಂದಿದ್ದು, ತುಂಬಾ ಬೇಡಿಕೆ ಪಡೆದಿದೆ" ಎಂದು ಹೇಳುತ್ತಾರೆ.
ಮಾವು ವಿವಿಧ ಕಡೆಗಳಿಗೆ ರಫ್ತು
ಶಿವರಾಜ ಕೌಜಲಗಿ ಅವರು ಬೆಂಗಳೂರು, ಹೈದರಾಬಾದ್, ಬೆಳಗಾವಿ, ಕೇರಳ, ಗುಜರಾತ್ಗೆ ಮಾವುಗಳನ್ನು ಕಳುಹಿಸುತ್ತಿದ್ದಾರೆ. ಇವರ ಪುನಾಸ್ ಮಾವಿನ ತಳಿಗೆ ಕೇರಳದ ಓಣಂ ಹಬ್ಬದ ಸಂದರ್ಭದಲ್ಲಿ ಉತ್ತಮ ಬೇಡಿಕೆ ಇದೆ. ಫೇಸ್ಬುಕ್, ವಾಟ್ಸಪ್ನಲ್ಲಿ ತಮ್ಮ ಉತ್ಪನ್ನದ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ದೃಶ್ಯ (ವಿಡಿಯೋ) ತಯಾರಿಸಿ ಹಾಕಿದ್ದರು. ಇದನ್ನು ನೋಡಿದ ಗ್ರಾಹಕರು ಅತ್ಯಂತ ಖುಷಿಯಿಂದ ಬೇಡಿಕೆ ಸಲ್ಲಿಸಿದರು. ಇದುವರೆಗೂ 68 ರೂ.ನಂತೆ 57 ಟನ್ ಕೇಸರ್, ಪುನಾಸ ತಳಿ ರೂ.48 ರಂತೆ 2 ಟನ್ ಮಾರಾಟ ಮಾಡಿರುತ್ತಾರೆ.
ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮೆಚ್ಚುಗೆ
ತೋಟಕ್ಕೆ ಇತ್ತೀಚೆಗೆ ಭೇಟಿ ನೀಡಿದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇವರ ಮಾರಾಟ ವೈಖರಿ ಕಂಡು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ. ವಿವಿಧ ಜಿಲ್ಲೆಯ ಮಾರುಕಟ್ಟೆಗಳನ್ನು ಸಂಪರ್ಕಿಸಿ ಉತ್ತಮ ಬೆಲೆಗೆ ಮಾವಿನ ಹಣ್ಣನ್ನು ಮಾರಾಟ ಮಾಡಿ ಇತರರಿಗೆ ಮಾದರಿ ಆಗಿದ್ದಾರೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಶಿವರಾಜ ಕೌಜಲಗಿ 8971655235 ಅವರನ್ನು ಸಂಪರ್ಕಿಸಬಹುದು.