ಲಾಕ್ಡೌನ್ ಎಫೆಕ್ಟ್: ಸಂಕಷ್ಟದಲ್ಲಿ ಕೋಲಾರ ಜಿಲ್ಲೆಯ ಟೊಮೆಟೊ ಬೆಳೆಗಾರರು
ಕೋಲಾರ, ಜೂನ್ 3: ಕೊರೊನಾ ಸೋಂಕು ನಿಯಂತ್ರಿಸಲು ಲಾಕ್ಡೌನ್ ಜಾರಿಗೊಳಿಸಿದ್ದರಿಂದ ಕೋಲಾರ ಜಿಲ್ಲೆಯ ರೈತರ ಸಂಕಷ್ಟಕ್ಕೆ ಒಳಗಾಗಿದ್ದು, ಹಲವು ಬೆಳೆಗಳನ್ನು ನಾಶ ಮಾಡಿರುವ ರೈತರು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾಮಾರಿ ಕೊರೊನಾ ವೈರಸ್ ನಿಯಂತ್ರಿಸಲು ರಾಜ್ಯ ಸರ್ಕಾರ ಲಾಕ್ಡೌನ್ ಜಾರಿಗೊಳಿಸಿದೆ. ಆದರೆ ಇದರ ನಡುವೆ ರೈತ ಸಮುದಾಯದವರ ಗೋಳು ಕೇಳುವವರಿಲ್ಲದೆ ಇದೀಗ ಕೋಲಾರದ ಅನ್ನದಾತರು ಮತ್ತೊಮ್ಮೆ ಬೀದಿಗೆ ಬಂದಂತಾಗಿದೆ.
ಎಕರೆಗೆ ಮೂರು ಲಕ್ಷ ಖರ್ಚು ಮಾಡಿ ಟೊಮೆಟೊ ಬೆಳೆ
ಕಳೆದ ವರ್ಷವೂ ಸಹ ಲಾಕ್ಡೌನ್ ವೇಳೆ ಕೃಷಿಯನ್ನೇ ಹೆಚ್ಚಾಗಿ ಮೆಚ್ಚಿಕೊಂಡಿರುವ ಕೋಲಾರ ಜಿಲ್ಲೆಯ ರೈತರು, ಪಡಬಾರದ ಕಷ್ಟಪಟ್ಟು ಸಾಲದ ಶೂಲಕ್ಕೆ ಸಿಲುಕಿ ಈಗಲೂ ರೈತರು ನರಳಾಡುತ್ತಿದ್ದಾರೆ. ಕೊರೊನಾ ಹೊಡೆತಕ್ಕೆ ಸಿಲುಕಿ ನಲುಗಿ ಹೋಗಿದ್ದರು, ಈ ಬಾರಿ ಸೀಸನ್ನಲ್ಲಿ ಅಲ್ಪ ಸ್ವಲ್ಪ ಲಾಭದ ದೃಷ್ಟಿಯಿಂದ ಹಾಕಿದ್ದ ಟೊಮೆಟೊ ಬೆಳೆ ಭರ್ಜರಿ ಫಸಲು ನೀಡಿತ್ತು.
ಎಕರೆಗೆ ಮೂರು ಲಕ್ಷ ಖರ್ಚು ಮಾಡಿ ಟೊಮೆಟೊ ಬೆಳೆದಿದ್ದಾರೆ, ಉತ್ತಮ ಫಸಲು ಬಂದಿದೆ. ಆದರೆ ಬೆಳೆಗೆ ಬೇಡಿಕೆಯಿಲ್ಲದೆ ಬೆಲೆ ಕುಸಿತವಾಗಿದೆ. ಕೋಲಾರ ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿ ಟೊಮೆಟೊ ಮೇಲೆ ರೈತರು ಹಾಕಿದ್ದು, ನಯಾ ಪೈಸೆ ಬಂಡವಾಳ ವಾಪಸ್ಸು ಬರದೇ ಸಾಲದ ಶೂಲಕ್ಕೆ ಸಿಲುಕುವ ಭೀತಿಯಲ್ಲಿದ್ದಾರೆ.
ಸರ್ಕಾರ ಬೆಂಬಲ ಬೆಲೆ ಘೋಷಿಸಬೇಕೆಂದು ರೈತರ ಆಗ್ರಹ
ಇನ್ನು ಕೋಲಾರದ ಮಾರುಕಟ್ಟೆಯಲ್ಲಿ 15 ಕೆ.ಜಿ ಒಂದು ಬಾಕ್ಸ್ ಟೊಮೆಟೊಗೆ ಗರಿಷ್ಟ 30-40 ರೂಪಾಯಿ ಮಾತ್ರ ಸಿಗುತ್ತಿದ್ದು, ಹೋಗಿ ಬರುವ ಗಾಡಿ ಬಾಡಿಗೆಗೂ ಖರ್ಚು ಒದಗುತ್ತಿಲ್ಲ. ಕೆಲವೊಂದು ಗುಣಮಟ್ಟದ ಟೊಮೆಟೊ 30 ರೂಪಾಯಿಗೂ ಮಾರಾಟ ಆಗುತ್ತಿದೆ.
ಇನ್ನು ವಿಪರ್ಯಾಸವೆಂದರೆ ಮಾರಾಟ ಆಗದ ಅದೆಷ್ಟೊ ಸಾವಿರಾರು ಬಾಕ್ಸ್ ಟೊಮೆಟೊಗಳು ಮಾರುಕಟ್ಟೆಯಲ್ಲಿ ಕೊಳೆತು ಗಬ್ಬು ನಾರುತ್ತಿದೆ. ಟೊಮೆಟೊ ಬೆಳೆಗೆ ಕೂಡಲೇ ಸರ್ಕಾರ ಬೆಂಬಲ ಘೋಷಿಸಬೇಕೆಂದು ಸಾವಿರಾರು ರೈತರು ಆಗ್ರಹಿಸಿದ್ದಾರೆ. ಆದರೆ ಬದಲಾದ ಮಾರುಕಟ್ಟೆ ವ್ಯವಸ್ಥೆಯಿಂದ ಬೆಂಬಲ ನೀಡುವುದು ಸವಾಲಿನ ಕೆಲಸವೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಧಾರಣ ದರಕ್ಕೆ ಮಾರಾಟ
ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳಲ್ಲೂ ಲಾಕ್ಡೌನ್ ಜಾರಿಯಲ್ಲಿದ್ದು, ಸರಕು ಸೇವೆ ಸಾಗಾಟಕ್ಕೆ ಸಮಸ್ಯೆ ಇಲ್ಲದಿದ್ದರೂ, ಕೊಳ್ಳುವ ಗ್ರಾಹಕರಿಲ್ಲದೆ ಬೇಡಿಕೆ ಕುಸಿತವಾಗಿದೆ.
ಇನ್ನು ಬೇಡಿಕೆಯಿಲ್ಲದ ಕಾರಣ ಬೆಲೆಯೂ ಕುಸಿತವಾಗಿದ್ದು, ಹೊರ ರಾಜ್ಯಗಳಲ್ಲಿ ಕೊರೊನಾ ಪರಿಸ್ಥಿತಿ ಸುಧಾರಣೆ ಆದಲ್ಲಿ ಟೊಮೆಟೊ ಸಾಧಾರಣ ದರಕ್ಕೆ ಮಾರಾಟ ಆಗುವ ನಿರೀಕ್ಷೆಯಿದೆ. ಬೆಲೆಯಿಲ್ಲದ ಕಾರಣ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ರೈತರು ಟೊಮೆಟೊ ಕಟಾವು ಮಾಡದೆ, ಹಾಗೆಯೇ ಬಿಟ್ಟಿರುವ ದೃಶ್ಯಗಳು ಜಿಲ್ಲೆಯಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದೆ.
ಲಾಕ್ಡೌನ್ ಹಿನ್ನಲೆ ದಳ್ಳಾಳಿಗಳು ಬರುತ್ತಿಲ್ಲ
ಲಾಕ್ಡೌನ್ ಹಿನ್ನಲೆ, ತರಕಾರಿ ಬೆಳೆಗಳು ಬೇರೆಡೆಗೆ ರವಾನೆಯಾಗದೆ ಇರುವ ಕಾರಣ ಹೊರ ರಾಜ್ಯದ ಮಾರುಕಟ್ಟೆಯ ದಳ್ಳಾಳಿಗಳು ತರಕಾರಿ ಕೊಳ್ಳಲು ಮುಂದೆ ಬಾರದ ಹಿನ್ನಲೆ ರೈತರಿಗೆ ಬೆಲೆ ಸಿಗುತ್ತಿಲ್ಲ. ಇನ್ನು ಸರ್ಕಾರ ಇತ್ತೀಚೆಗೆ ಘೋಷಿಸಿರುವ 10 ಸಾವಿರ ಸಹಾಯಧನ, ರೈತರ ನೆರವಿಗೆ ಬರುವುದಿಲ್ಲ ಎಂದಿರುವ ರೈತ ರಮೇಶ್ ಹಾಗೂ ನಾರಾಯಣಸ್ವಾಮಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.