ಕೋಲಾರದ ರೈತನಿಗೆ ಲಾಭದ ದಾರಿ ತೋರಿದ ಶುಂಠಿ ಬೆಳೆ
ಕೋಲಾರ, ಸೆಪ್ಟೆಂಬರ್ 24: ನೀರಿನ ಕೊರತೆಯೇ ದೊಡ್ಡ ಸಮಸ್ಯೆಯಾಗಿರುವ ಕೋಲಾರದಲ್ಲಿ ರೈತರಿಗೆ ಸವಾಲುಗಳು ಅಷ್ಟಿಷ್ಟಲ್ಲ. ಆದರೆ ಆ ಸವಾಲುಗಳನ್ನು ಮೀರಿಯೂ ಕೃಷಿಯಲ್ಲಿ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದಾರೆ ಇಲ್ಲಿನ ಕೆಲ ರೈತರು.
ಆದರೆ ಲಾಕ್ ಡೌನ್ ವೇಳೆ ಇಲ್ಲಿನ ಅದೆಷ್ಟೋ ರೈತರ ಪಾಡು ಚಿಂತಾಜನಕ ಸ್ಥಿತಿಗೆ ತಲುಪಿತ್ತು. ಕೆಲವರು ಫಸಲಿಗೆ ಬಂದ ಬೆಳೆಗಳನ್ನು ತಮ್ಮ ಕೈಯಾರೆ ಕಿತ್ತು ಬಿಸಾಡಿದರೆ, ಇನ್ನೂ ಕೆಲವರು ಬಂದಷ್ಟು ಬರಲಿ ಅಂತ ನಷ್ಟಕ್ಕೆ ಮಾರಿ ಕೈ ಸುಟ್ಟುಕೊಂಡರು. ಆದರೆ ಮುಂದೆ ಎಲ್ಲವೂ ಸರಿ ಹೋಗುತ್ತೆ ಎನ್ನುವ ಭರವಸೆಯಿಂದ ಕಾದ ರೈತರೊಬ್ಬರು ಇಂದು ಶುಂಠಿಯ ಉತ್ತಮ ಇಳುವರಿ ಪಡೆದುಕೊಂಡಿದ್ದು, ಲಾಭದ ನಿರೀಕ್ಷೆಯಲ್ಲಿದ್ದಾರೆ. ಆ ರೈತನ ಕಥೆ ಏನು? ಮುಂದೆ ಓದಿ...
ಮಳೆ ಕೊರತೆ ಜೊತೆ ಅಂತರ್ಜಲ ಸಮಸ್ಯೆ; ಬೆಳೆಗೆ ಟ್ಯಾಂಕರ್ ನೀರು ಹಾಯಿಸಿದ ರೈತ
ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದ ರೈತ
ಕೋಲಾರ ಜಿಲ್ಲೆ ಮಾಲೂರಿನ ತಾಲೂಕಿನ ಕಣಿವೇನಹಳ್ಳಿಯ ರೈತ ಹನುಮಂತಪ್ಪ ಲಾಕ್ ಡೌನ್ ನಲ್ಲಿ ಪಡಬಾರದ ಕಷ್ಟ ಪಟ್ಟಿದ್ದರು. ಕಷ್ಟಪಟ್ಟು ಬೆಳೆದ ಶುಂಠಿಯನ್ನು ಕೇಳೋರೆ ಇಲ್ಲದಂತಾಗಿದೆ ಎಂದು ಅದೆಷ್ಟೋ ದಿನ ಸರಿಯಾಗಿ ನಿದ್ದೆ ಸಹ ಮಾಡಿರಲಿಲ್ಲ. ಆದರೆ ನಾನು ಧೈರ್ಯ ಕೆಡಬಾರದು, ಮುಂದೆ ಒಂದು ದಿನ ಬೆಲೆ ಸಿಕ್ಕೇ ಸಿಗುತ್ತೆ ಅಂತ ತೀರ್ಮಾನಿಸಿದ್ದ ಹನುಮಂತಪ್ಪ ತಾಳ್ಮೆಯಿಂದ ಕಾದು ಶುಂಠಿ ಬೆಳೆಯ ಆರೈಕೆ ಮುಂದುವರೆಸಿದ್ದರು.
ಎರಡು ಎಕರೆಯಲ್ಲಿ ಶುಂಠಿ ಬೆಳೆ
ಇದೀಗ ಅವರ ತಾಳ್ಮೆಯು ಫಲ ಕೊಟ್ಟಿದೆ. ಶುಂಠಿ ಉತ್ತಮವಾಗಿ ಇಳುವರಿ ನೀಡಿದ್ದು, ಭರ್ಜರಿ ಲಾಭದ ನಿರೀಕ್ಷೆಯಲ್ಲಿದ್ದಾರೆ. ಶುಂಠಿಯನ್ನು ಭೂಮಿಯಿಂದ ಹೊರ ತೆಗೆಯದೆ ಹಾಗೆ ಎರಡು ಮೂರು ವರ್ಷಗಳ ಕಾಲ ಇಟ್ಟರೂ ಯಾವುದೇ ಸಮಸ್ಯೆಯಾಗುವುದಿಲ್ಲ. ಹಾಗಾಗಿ ಇದೀಗ ಉತ್ತಮ ಬೆಲೆಗೆ ಬೆಳೆಯನ್ನು ಮಾರಾಟ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸುಮಾರು 8 ಎಕರೆ ಪ್ರದೇಶದಲ್ಲಿ ರೈತ ಹನುಮಂತಪ್ಪ ವ್ಯವಸಾಯ ಮಾಡುತ್ತಿದ್ದಾರೆ.
ನಷ್ಟಕ್ಕೆ ಬೇಸತ್ತು ಈರುಳ್ಳಿ ಬೆಳೆ ನಾಶಪಡಿಸುತ್ತಿರುವ ಚಿತ್ರದುರ್ಗದ ರೈತರು
ಒಳ್ಳೆ ಇಳುವರಿ ನೀಡಿದ ಆರೈಕೆ
2 ಎಕರೆಯಲ್ಲಿ ಬೆಳೆದಿರುವ ಶುಂಠಿ ಬೆಳೆಯನ್ನು ರಕ್ಷಿಸಿಕೊಂಡಿರುವ ಹನುಮಂತಪ್ಪ, ಗಿಡಗಳನ್ನು ಫಲವತ್ತಾಗಿ ಆರೈಕೆ ಮಾಡಿದ್ದಾರೆ. ಶುಂಠಿ ಗಿಡಗಳಿಗೆ ಮತ್ತೊಂದು ಪದರ ಮಣ್ಣು ಹಾಕಿಸಿ, ಗೊಬ್ಬರ ಮತ್ತು ಸರಿಯಾದ ಸಮಯಕ್ಕೆ ನೀರುಣಿಸುತ್ತಾ ಇದೀಗ ಉತ್ತಮ ಇಳುವರಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಶುಂಠಿಗೆ ಸಮಾಧಾನಕರವಾದ ಬೆಲೆ
ಸದ್ಯ ಮಾರುಕಟ್ಟೆಯಲ್ಲಿ ಶುಂಠಿಗೆ ಸಮಾಧಾನಕರವಾದ ಬೆಲೆ ಲಭಿಸುತ್ತಿದೆ. ಆದರೆ ಹೊಸ ಶುಂಠಿ ಬೆಳೆಗೆ ಕಡಿಮೆ ಬೆಲೆಯಿದೆ. 60 ಕೆ.ಜಿಯ ಒಂದು ಮೂಟೆಗೆ ಸುಮಾರು 3.500 ರೂವರೆಗೂ ಬೆಲೆಯಿದೆ. ಮುಂದೆ ಉತ್ತಮ ಬೆಲೆ ಸಿಗುವ ನಿರೀಕ್ಷೆಯೂ ಇದೆ. ಒಟ್ಟಿನಲ್ಲಿ ಕೋಲಾರ ಜಿಲ್ಲೆಯ ರೈತರು 2 ಸಾವಿರ ಅಡಿಗೂ ಹೆಚ್ಚು ಅಂತರ್ಜಲ ಮಟ್ಟ ಕುಸಿತ ಕಂಡರೂ ಬೆಳೆ ಬೆಳೆದು ಸಾಧಿಸುವರು ಎನ್ನುವುದಕ್ಕೆ ಹನುಮಂತಪ್ಪನವರೇ ಸಾಕ್ಷಿ.