ಟೊಮೆಟೊ ಬೆಲೆ ಏರಿಕೆ ಕಂಡರೂ ಕೋಲಾರ ರೈತರಿಗೆ ಖುಷಿಯಿಲ್ಲ
ಕೋಲಾರ, ಅಕ್ಟೋಬರ್ 20: ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಟೊಮೆಟೊ ಮಾರುಕಟ್ಟೆ ಎಂಬ ಹೆಗ್ಗಳಿಕೆ ಪಡೆದಿರುವ ಕರ್ನಾಟಕದ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದು ಬಾಕ್ಸ್ ಟೊಮೆಟೊ ಬೆಲೆ 1 ಸಾವಿರ ರೂ. ಗಡಿ ದಾಟಿದೆ. ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ 15 ಕೆಜಿ ತೂಕದ ಬಾಕ್ಸ್, 1 ಸಾವಿರ ರೂಪಾಯಿ ಗಡಿದಾಟಿದ್ದು, ಟೊಮೆಟೊ ಮಾರಾಟಗಾರರಲ್ಲಿ ಸಂತಸ ಮನೆ ಮಾಡಿದೆ.
ಆದರೆ, ಈ ಸಂತಸ ಕೋಲಾರ ರೈತರ ಪಾಲಿಗೆ ಇಲ್ಲದಂತಾಗಿದೆ. ಕೋಲಾರ ಜಿಲ್ಲೆಯಲ್ಲಿ ಸದ್ಯ ಟೊಮೆಟೊ ಬೆಳೆಯೇ ಇಲ್ಲ, ನೆರೆಯ ಆಂಧ್ರಪ್ರದೇಶದಿಂದ ಶೇಕಡಾ 70ರಷ್ಟು ಟೊಮೆಟೊ ಮಾರುಕಟ್ಟೆಗೆ ಆವಕವಾಗುತ್ತಿದ್ದು, ಕೋಲಾರದ ಮಾರುಕಟ್ಟೆಯಲ್ಲಿ ಆಂಧ್ರದ ರೈತರಿಗೆ ಭರ್ಜರಿ ಬೆಲೆ ಸಿಕ್ಕಿದ್ದು, ಹೆಚ್ಚು ಲಾಭ ಪಡೆಯುತ್ತಿದ್ದಾರೆ.
ಕರ್ನಾಟಕ: ದೀಪಾವಳಿಗೆ ಹಣ್ಣು, ತರಕಾರಿಗಳ ಬೆಲೆ ಮತ್ತಷ್ಟು ಏರಿಕೆ ಸಾಧ್ಯತೆ
ಕಳೆದ ಒಂದೂವರೆ ವರ್ಷದಿಂದ ಸಾಲು ಸಾಲು ನಷ್ಟ ಅನುಭವಿಸಿರೊ ಕೋಲಾರದ ರೈತರು, ಈ ಸಲ ಟೊಮೆಟೊ ಬೆಳೆಯೋ ಸಾಹಸಕ್ಕೆ ಕೈ ಹಾಕಿಲ್ಲ. ದೇಶಾದ್ಯಂತ ಭಾರೀ ಮಳೆಯಿಂದಾಗಿ ಟೊಮೆಟೊಗೆ ಬೇಡಿಕೆ ಹೆಚ್ಚಿದ್ದು, ಸಹಜವಾಗಿಯೇ ಎಲ್ಲೆಡೆ ಬೆಲೆ ಏರಿಕೆಯಾಗಿದೆ.
ಇನ್ನು ಕೋಲಾರದ ಕೆಲ ಕಡೆ ಟೊಮೆಟೊಗೆ ಕೀಟ ಬಾಧೆ ಕಾಡುತ್ತಿದ್ದು, ಇದರಿಂದ ಟೊಮೆಟೊ ಗುಣಮಟ್ಟ ಇಳಿಕೆಯಾಗಿ, ಹೊರ ರಾಜ್ಯಗಳಿಗೆ ಟೊಮೆಟೊ ರಪ್ತು ಮಾಡಲು ಸಾಧ್ಯವಾಗುತ್ತಿಲ್ಲ.
ಕೋಲಾರ ಜಿಲ್ಲೆಯ ಟೊಮೆಟೊ ಸೇರಿದಂತೆ ಕೆಲ ತರಕಾರಿಗಳಿಗೂ ಹೊರ ರಾಜ್ಯದಲ್ಲಿ ಬೇಡಿಕೆ ಇಳಿಕೆಯಾಗಿದ್ದು, ಈ ಬಗ್ಗೆ ಮಾತನಾಡಿರುವ ಕೋಲಾರ ಜೆಡಿಎಸ್ ಎಂಎಲ್ಸಿ ಗೋವಿಂದರಾಜು, ಬೆಂಗಳೂರಿನ ಕೊಳಚೆ ನೀರನ್ನು ಮೂರನೇ ಬಾರಿಗೆ ಸಂಸ್ಕರಿಸದೆ, ಹರಿಸುತ್ತಿರುವುದೇ ಇದಕ್ಕೆ ಕಾರಣವೆಂದು ಆರೋಪಿಸಿದ್ದಾರೆ.
ಕೆಸಿ ವ್ಯಾಲಿ ನೀರು ಕೃಷಿ ಬಳಕೆಗೆ ಜಿಲ್ಲಾಡಳಿತ ನಿಷೇಧ ಹೇರಿದ್ದರೂ, ಹಳ್ಳಿಗಳಲ್ಲಿ ಕೆಲ ರೈತರು ನೇರವಾಗಿ ಕೆಸಿ ವ್ಯಾಲಿ ನೀರನ್ನು ಕೃಷಿಗೆ ಬಳಸುತ್ತಿರುವುದು ರೋಗಬಾಧೆಗೆ ಕಾರಣವೆಂಬ ಅನುಮಾನ ವ್ಯಕ್ತವಾಗಿದೆ. ಇದರ ಜೊತೆಗೆ ಕೆಸಿ ವ್ಯಾಲಿ ನೀರು ಹರಿಯುವ ಕೆರೆಗಳ ಪಕ್ಕದಲ್ಲಿರುವ ಬೋರ್ವೆಲ್ ರೀಚಾರ್ಜ್ ಆಗಿದ್ದು, ಅಲ್ಲಿ ಬೆಳೆಯುವ ಟೊಮೆಟೊ ಸೇರಿದಂತೆ ವಿವಿಧ ತರಕಾರಿಗಳಲ್ಲಿ ಗುಣಮಟ್ಟ ಇಳಿಕೆಯಾಗಿ, ಬೇಡಿಕೆ ಕುಸಿದಿದೆ ಎಂದು ಗೊವಿಂದರಾಜು ಹಾಗೂ ಜಿಲ್ಲೆಯ ತರಕಾರಿ ವ್ಯಾಪಾರಿಗಳು ಆರೋಪಿಸಿದ್ದಾರೆ.
ಆದರೆ ಈ ವಿಚಾರಕ್ಕೆ ಸಂಬಂದಿಸಿದಂತೆ ಪ್ರತಿಕ್ರಿಯೆ ನೀಡಲು ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕಿ ಗಾಯತ್ರಿ ನಿರಾಕರಿಸಿದ್ದು, ಪ್ರತಿಕ್ರಿಯೆ ನೀಡಲು ಹಿರಿಯ ಅಧಿಕಾರಿಗಳ ಅನುಮತಿ ಬೇಕೆಂಬ ಸಬೂಬು ನೀಡುತ್ತಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ನೀರಿನ ಲಭ್ಯತೆ ಹೆಚ್ಚಿದ್ದರಿಂದ ಇಷ್ಟು ದಿನ ಜಿಲ್ಲೆಯ ಟೊಮೆಟೊ ಮಾರುಕಟ್ಟೆಗೆ ಬರುತ್ತಿತ್ತು. ಆದರೆ ಕೊರೊನಾ ಲಾಕ್ಡೌನ್ನಿಂದಾಗಿ ಕಳೆದೆರಡು ವರ್ಷದಿಂದ ನಷ್ಟ ಉಂಟಾಗಿ ಟೊಮೆಟೊ ಬೆಳೆಯಲು ಜಿಲ್ಲೆಯ ರೈತರು ಹಿಂಜರಿದಿದ್ದಾರೆ.
ಈ ಸಮಯದಲ್ಲಿ ಹೊರ ರಾಜ್ಯದ ಟೊಮೆಟೊಗೆ ಭರ್ಜರಿ ಬೇಡಿಕೆ ದೊರೆತಿದೆ. ಬರಗಾಲದಲ್ಲಿದ್ದ ಕೋಲಾರ ಜಿಲ್ಲೆಯ ಹಲವು ಕಡೆ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ಬಹುತೇಕ ಕೆರೆಗಳು ತುಂಬಿ ಹರಿಯುತ್ತಿದೆ. ಆದರೆ ಅಕಾಲಿಕ ಮಳೆಯಿಂದಾಗಿ ಜಿಲ್ಲೆಯ ಬೆಳೆಗಳಿಗೆ ಕೀಟಬಾಧೆ ಹೆಚ್ಚಿಗೆ ಬಾದಿಸುತ್ತಿದ್ದು, ರಸಾಯನಿಕ ಔಷಧಿಗಳನ್ನು ಸಿಂಪಡಿಸಿದರೂ, ರೋಗಬಾಧೆಯ ಪ್ರಮಾಣ ಕಡಿಮೆಯಾಗುತ್ತಿಲ್ಲ.
ಕೋಲಾರದ ಟೊಮೆಟೊ ಬೆಳೆಗಾರರ ಪಾಡು ಹೇಳತೀರದ್ದಾಗಿದ್ದು, ಟೊಮೆಟೊ ಬೆಲೆ ಏರಿಕೆಯಿಂದ ಗ್ರಾಹಕರ ಜೇಬಿಗೂ ಕತ್ತರಿ ಬೀಳುತ್ತಿದೆ. ಒಂದು ಕೆಜಿ ಟೊಮೆಟೊ ಬೆಲೆ 70 ರೂ. ದಾಟಿದೆ. ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಬಿಸಿ ಇನ್ನು ಒಂದು ತಿಂಗಳ ಮುಂದುವರೆಯಲಿದೆ ಎಂದು ಮಾರುಕಟ್ಟೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.