ಕಡಿಮೆ ಖರ್ಚಿನಲ್ಲಿ ಕಳೆ ಕೀಳುವ ಯಂತ್ರ ಪರಿಚಯಿಸಿದ ಕೋಲಾರದ ರೈತ
ಕೋಲಾರ, ಆಗಸ್ಟ್ 24: ರಾಜ್ಯದೆಲ್ಲೆಡೆ ಈ ಬಾರಿ ಉತ್ತಮ ಮಳೆ ಆಗುತ್ತಿದೆ. ಇದರಿಂದ ರೈತರ ಮೊಗದಲ್ಲೂ ಸಂತಸ ಮನೆ ಮಾಡಿದೆ. ಸತತ ಬರಗಾಲದಿಂದ ಕಂಗೆಟ್ಟಿರುವ ಗಡಿನಾಡು ಕೋಲಾರ ಜಿಲ್ಲೆಯಲ್ಲೂ ಈ ಬಾರಿ ಉತ್ತಮ ಮಳೆ ಆಗಿದ್ದು, ಭೂಮಿ ತಾಯಿಯನ್ನು ನಂಬಿ ಈಗಾಗಲೇ ಹಲವು ರೈತರು ಕೃಷಿ ಕಾರ್ಯ ಆರಂಭಿಸಿದ್ದಾರೆ.
ಅಷ್ಟೇ ಅಲ್ಲ, ನೀರಿನ ಕೊರತೆ ನಡುವೆಯೇ ಕೃಷಿ ಕಾರ್ಯ ನಡೆಸಿ ಇಡೀ ದೇಶಕ್ಕೆ ಮಾದರಿಯಾಗಿರುವ ಕೋಲಾರ ಜಿಲ್ಲೆಯ ರೈತರು ಕೃಷಿಯಲ್ಲಿ ಒಂದಲ್ಲ ಒಂದು ರೀತಿ ಆವಿಷ್ಕಾರ ಮಾಡುತ್ತಲೇ ಇರುತ್ತಾರೆ. ಹಾಗೆಯೇ ಇದೀಗ ಕೃಷಿ ಭೂಮಿಯಲ್ಲಿನ ಕಳೆ ತೆಗೆಯಲು ಯಂತ್ರವೊಂದನ್ನು ಕಂಡುಕೊಂಡಿದ್ದಾರೆ ಇಲ್ಲಿನ ರೈತ ನಾರಾಯಣಸ್ವಾಮಿ. ಈ ಕುರಿತ ವಿಸ್ತೃತ ವರದಿ ಇಲ್ಲಿದೆ...
ಕಳೆ ತೆಗೆಯುವ ಯಂತ್ರ ಕಂಡುಹಿಡಿದ ರೈತ
ಈಗಾಗಲೇ ಜಿಲ್ಲೆಯಲ್ಲಿ ರೈತರು ಭೂಮಿಯನ್ನು ಹದಗೊಳಿಸಿ ಬಿತ್ತನೆ ಕಾರ್ಯ ಆರಂಭಿಸಿದ್ದು, ಕೃಷಿ ಭೂಮಿಯಲ್ಲಿನ ಕಳೆ ತೆಗೆಯಲು ರೈತರಿಗೆ ಅಧಿಕ ವೆಚ್ಚವಾಗುತ್ತಿದೆ. ಒಂದು ಎಕರೆ ಕಳೆ ತೆಗೆಯಲು ಕಡಿಮೆ ಎಂದರೂ 3000 ಸಾವಿರ ಖರ್ಚು ಮಾಡಬೇಕಾಗುತ್ತದೆ. ಕೆಲವರು ಈ ಖರ್ಚು ಭರಿಸುವ ಶಕ್ತಿ ಇಲ್ಲದೆ ತಾವೇ ಕಷ್ಟಪಟ್ಟು ಕಳೆ ತೆಗೆಯುತ್ತಾರೆ. ಇನ್ನು ಕೆಲವರು ಕಳೆ ತೆಗೆಯಲು ಕೂಲಿ ಆಳುಗಳನ್ನು ಇಡುತ್ತಾರೆ. ಆದರೆ ಕಳೆ ತೆಗೆಯಲೆಂದು ಕೋಲಾರದ ರೈತರೊಬ್ಬರು ತಾವೇ ಕಳೆ ತೆಗೆಯುವ ಯಂತ್ರ ಕಂಡು ಹಿಡಿದಿದ್ದಾರೆ.
ಬಾಳೆ ಬೆಳೆದು ಬಂಪರ್ ಲಾಭ ಪಡೆದ ಕೊಪ್ಪಳದ ರೈತ
ಅತಿ ಕಡಿಮೆ ಬೆಲೆಗೆ ಕಳೆ ತೆಗೆಯುವ ಯಂತ್ರ
ಕೋಲಾರದ ಚಿಟ್ನಹಳ್ಳಿ ಗ್ರಾಮದ ರೈತ ನಾರಾಯಣಸ್ವಾಮಿ ಎಂಬುವರು ತೋಟಗಾರಿಕೆ ಇಲಾಖೆಯಿಂದ 40 ಸಾವಿರ ಸಹಾಯಧನ ಪಡೆದು ವಿಡರೊ ಎಂಬ ಯಂತ್ರವನ್ನು ತಯಾರಿ ಮಾಡಿಕೊಂಡಿದ್ದಾರೆ. ಜಮೀನಿನಲ್ಲಿ ಕಳೆ ತೆಗೆಯಲು ರೈತರು ಸಾಮಾನ್ಯವಾಗಿ ನೇಗಿಲು, ಎತ್ತುಗಳನ್ನು ಬಳಸುತ್ತಾರೆ. ಆದರೆ ಕಳೆ ತೆಗೆಯುವ ನೇಗಿಲು ಎತ್ತುಗಳಿಗೆ ಭಾರಿ ಡಿಮ್ಯಾಂಡ್ ಉಂಟಾಗಿದ್ದು, ಎಕರೆಯಷ್ಟು ಜಮೀನಿನಲ್ಲಿ ಕಳೆ ತೆಗೆಯಲು 3000 ಸಾವಿರ ಹಣ ವೆಚ್ಚವಾಗುತ್ತದೆ. ನಾರಾಯಣಸ್ವಾಮಿ ಅವರ ಈ ಯಂತ್ರದಿಂದ ಕೇವಲ 100 ರೂಪಾಯಿಯಲ್ಲಿ ಒಂದು ಎಕರೆಯಷ್ಟು ಕೃಷಿ ಭೂಮಿಯಲ್ಲಿನ ಕಳೆ ತೆಗೆಯಬಹುದಾಗಿದೆ.
ರೈತರಿಗೆ ಹಣ ಉಳಿತಾಯ
ಸ್ವಂತ ಎತ್ತುಗಳಿದ್ದವರಿಗೆ ಕಳೆ ತೆಗೆಯುವ ಅನುಕೂಲತೆ ಇರುತ್ತದೆ. ಬಡ ರೈತರು ಎತ್ತುಗಳನ್ನು ಬಾಡಿಗೆ ತರಬೇಕಾಗುತ್ತದೆ ಇಲ್ಲದಿದ್ದರೆ ಕೂಲಿ ಆಳುಗಳನ್ನು ಕರೆಸಿ ಕೆಲಸ ಮಾಡಿಸಬೇಕಾಗುತ್ತದೆ. ಒಬ್ಬ ಕೂಲಿ ಆಳಿಗೆ ದಿನಕ್ಕೆ 500 ರೂಪಾಯಿ ನೀಡಬೇಕಾಗುತ್ತದೆ. ನಾರಾಯಣಸ್ವಾಮಿ ಅವರು ಕಳೆ ತೆಗೆಯಲು ಕಂಡುಕೊಂಡಿರುವ ಯಂತ್ರದಿಂದ ಎಕರೆಗೆ ಒಂದು ಲೀಟರ್ ಪೆಟ್ರೋಲ್ ಮಾತ್ರ ಖರ್ಚಾಗುತ್ತದೆ. ಎರಡೂವರೆ ಲೀಟರ್ ಪೆಟ್ರೋಲ್ ನಲ್ಲಿ ದಿನಕ್ಕೆ ಎರಡೂವರೆ ಎಕರೆ ಕೃಷಿ ಜಮೀನಿನಲ್ಲಿನ ಕಳೆ ತೆಗೆಯಬಹುದಾಗಿದೆ. ಇದರಿಂದಾಗಿ ರೈತರಿಗೆ ಸಾವಿರಾರು ಹಣ ಉಳಿತಾಯವಾಗುತ್ತದೆ.
ಅವರೆ ಕಾಯಿ ಬಿಟ್ಟು ಜೋಳದತ್ತ ಮುಖ ಮಾಡಿದ ಮೈಸೂರು ರೈತರು
ರೈತ ನಾರಾಯಣಸ್ವಾಮಿ ಮಾತು...
ಆಧುನಿಕತೆಯ ವ್ಯವಸಾಯಕ್ಕೆ ತಕ್ಕಂತೆ ನಾವು ಬದಲಾಗಬೇಕು. ಕೃಷಿಗಾಗಿ ಸರ್ಕಾರದಿಂದ ಸಿಗುವ ಸಹಾಯಧನ ಬಳಸಿಕೊಂಡು ವಿಡರ ಎಂಬ ಕಳೆ ತೆಗೆಯುವ ಯಂತ್ರ ತಯಾರಿ ಮಾಡಿಕೊಂಡಿದ್ದೇನೆ. ಸುಮಾರು 5 ಎಕರೆಯಷ್ಟು ರಾಗಿ ಹೊಲದಲ್ಲಿನ ಕಳೆ ತೆಗೆಯಲು ಕೇವಲ 500 ರೂಪಾಯಿ ಖರ್ಚಾಗಿದೆ ಎನ್ನುತ್ತಾರೆ ರೈತ ನಾರಾಯಣಸ್ವಾಮಿ.