ಮಾವು ಪ್ರಿಯರೇ ಹುಷಾರ್: ಮಾರುಕಟ್ಟೆಗೆ ಬರುತ್ತಿವೆ ಕೃತಕ ಹಣ್ಣುಗಳು
ಕೋಲಾರ, ಜೂನ್ 4: ಹಣ್ಣುಗಳ ರಾಜ ಮಾವಿನ ಸೀಜನ್ ಆರಂಭವಾಗಿದೆ. ಆದರೆ ಕೊರೊನಾ ವೈರಸ್ ಭೀತಿಯಿಂದ ದೂರದಿಂದಲೇ ಬಾಯಲ್ಲಿ ನೀರು ಸುರಿಸುತ್ತಾ ಕೆಲ ಮಾವು ಪ್ರಿಯರು ದೂರ ಉಳಿದಿದ್ದಾರೆ. ಇನ್ನು ಕೆಲವರು ಮಾರುಕಟ್ಟೆಯಲ್ಲಿ ಖರೀದಿಸಿ ಮನೆಯಲ್ಲಿ ಚೆನ್ನಾಗಿ ತೊಳೆದು ಚಪ್ಪರಿಸುತ್ತಾ ತಿನ್ನುತ್ತಿದ್ದಾರೆ.
ಕೊರೊನಾ ವೈರಸ್ ಭೀತಿಯಿಂದ ಹಣ್ಣು ತಿನ್ನೋದಕ್ಕೂ ಹಿಂದೇಟು ಹಾಕುತ್ತಿರುವ ಈ ಸಂದಿಗ್ಧ ಸ್ಥಿತಿಯಲ್ಲೂ ಕೆಲ ಕಿಡಿಗೇಡಿಗಳು ವಿಷಕಾರಿ ಔಷಧಿ ಬಳಸಿ ಕೃತಕವಾಗಿ ಮಾವನ್ನು ಮಾಗಿಸಿ ಮಾರುಕಟೆಯಲ್ಲಿ ರಾಜಾರೋಷವಾಗಿ ಮಾರುತ್ತಿದ್ದಾರೆ. ಹಣದ ಆಸೆಗಾಗಿ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿರೋ ಕಿಡಿಗೇಡಿಗಳು ಕೊರೊನಾಗಿಂತಲೂ ಮಾರಕವಾದ ಖಾಯಿಲೆ ಹಂಚುತ್ತಿದ್ದಾರೆ. ಮಾವುಗಳ ನಾಡು ಅಂತಾನೆ ಪ್ರಖ್ಯಾತಿ ಪಡೆದಿರೋ ಕೋಲಾರ ಜಿಲ್ಲೆಯಲ್ಲಿ ಕೃತಕವಾಗಿ ಮಾವಿನ ಹಣ್ಣನ್ನು ಮಾಗಿಸಿ ಮಾರಾಟ ಮಾಡುವ ದಂಧೆ ಶುರುವಾಗಿದ್ದು, ಹಣ್ಣು ಮಾಗಿಸಲು ಬಳಸುವ ವಿಷಕಾರಿ ಕ್ಯಾಲ್ಸಿಯಂ ಕಾರ್ಬೈಡ್ ರಾಸಾಯನಿಕವು ಸದ್ದಿಲ್ಲದೆ ಗ್ರಾಹಕರ ದೇಹ ಸೇರಿಕೊಳ್ಳುತ್ತಿದೆ.
ಹಗಲಿರುಳು ಶ್ರಮಿಸುವ ಮಾವು ಬೆಳೆಗಾರರು
ಕೋಲಾರದಲ್ಲಿ 50 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದ್ದು, ಶ್ರೀನಿವಾಸಪುರ ತಾಲ್ಲೂಕು ಮಾವಿನ ನಗರಿ ಎಂದೇ ವಿಶ್ವ ಖ್ಯಾತಿ ಪಡೆದಿದೆ. ಬೆವರು ಸುರಿಸಿ, ಹಗಲಿರುಳು ಶ್ರಮಿಸುವ ಮಾವು ಬೆಳೆಗಾರರು, ಹೂಜಿ ಹುಳಗಳ ಕಾಟದ ನಡುವೆಯೂ ರಸಪುರಿ, ಆಲ್ಫಾನ್ಸೊ, ಬಂಗನಪಲ್ಲಿ, ಕೇಸರ್, ಸೆಂಧೂರ, ದಶಹರಿ, ಮಲ್ಲಿಕಾ, ತೋತಾಪುರಿ, ರಾಜ್ಗಿರಾ, ಮಲಗೋವಾ, ನೀಲಂ ಸೇರಿದಂತೆ ಬೇರೆ ಬೇರೆ ಜಾತಿಯ ಮಾವು ಬೆಳೆದು ಸೈ ಎನಿಸಿಕೊಂಡು ವಿಶ್ವ ಮಟ್ಟದಲ್ಲಿ ಹೆಗ್ಗಳಿಗೆ ಗಳಿಸಿದ್ದಾರೆ.
ನೀರಿಲ್ಲದ ನೆಲದಲ್ಲಿ ಸಹಜ ಕೃಷಿಯಿಂದ ಗೆದ್ದ ಕೋಲಾರದ ರೈತ
ಕೃತಕವಾಗಿ ಮಾಗಿಸಿ ಮಾರಾಟ ಮಾಡುತ್ತಿದ್ದಾರೆ
ಆದರೆ ಕೆಲವು ಕಿಡಿಗೇಡಿಗಳು ಇದಕ್ಕೆ ಮಸಿ ಬಳಿಯುವ ಕೆಲಸಕ್ಕೆ ಮುಂದಾಗಿರೋದು ವಿಪರ್ಯಾಸ. ಕೋಲಾರದಿಂದ ಹೊರ ರಾಜ್ಯಗಳಿಗೆ ಹಾಗೂ ವಿದೇಶಕ್ಕೆ ಟನ್ಗಟ್ಟಲೇ ಮಾವಿನ ಹಣ್ಣು ರಫ್ತಾಗುತ್ತದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಈ ಬಾರಿ ಜೂನ್ ಮೊದಲ ವಾರದಲ್ಲಿ ನೈಸರ್ಗಿಕವಾಗಿ ಮಾಗಿದ ಮಾವಿನ ಹಣ್ಣುಗಳು ಮಾರಾಟ ಆರಂಭವಾಗಿದೆ. ಆದರೆ ವರ್ತಕರು, ಹಣ್ಣು ಮಾರಾಟಗಾರರು ಲಾಭದಾಸೆಗೆ ಮತ್ತು ಗ್ರಾಹಕರನ್ನು ಸೆಳೆಯಲು ಕ್ಯಾಲ್ಸಿಯಂ ಕಾರ್ಬೈಡ್ ರಾಸಾಯನಿಕ ಬಳಸಿ ಅವಧಿಗೂ ಮುನ್ನವೇ ಮಾವಿನ ಕಾಯಿಗಳನ್ನು ಕೃತಕವಾಗಿ ಮಾಗಿಸಿ ಮಾರಾಟ ಮಾಡುತ್ತಿದ್ದಾರೆ.
ಗದಗ, ಬೆಳಗಾವಿ ಜಿಲ್ಲೆಯಿಂದ ಖರೀದಿ
ನೆರೆಯ ಆಂಧ್ರಪ್ರದೇಶ, ರಾಜ್ಯದ ರಾಮನಗರ, ಗದಗ, ಬೆಳಗಾವಿ ಜಿಲ್ಲೆಯಿಂದ ಕಡಿಮೆ ಬೆಲೆಗೆ ಮಾವಿನ ಕಾಯಿ ಖರೀದಿಸಿಕೊಂಡು ಬಂದು ಕೃತಕವಾಗಿ ಮಾಗಿಸುವ ಪ್ರಕ್ರಿಯೆ ಎಗ್ಗಿಲ್ಲದೆ ನಡೆಯುತ್ತಿದೆ. ರಸ್ತೆಯ ಅಕ್ಕಪಕ್ಕದ ಪಾದಚಾರಿ ಮಾರ್ಗದ ಅಂಗಡಿ ಹಾಗೂ ತಳ್ಳು ಗಾಡಿಗಳಲ್ಲಿ ಕೃತಕವಾಗಿ ಮಾಗಿದ ಮಾವಿನ ಹಣ್ಣುಗಳನ್ನು ಕಡಿಮೆ ಬೆಲೆಗೆ ಮಾರಲಾಗುತ್ತಿದೆ.
ಹತ್ತಿರವಾಗಿದೆ ಮಾವಿನ ಹಂಗಾಮು; ಶ್ರೀನಿವಾಸಪುರದ ಮಾವಿನ ಕಥೆಯೇನು?
ಕೃತಕ ಹಣ್ಣುಗಳು ಹೆಚ್ಚು ರುಚಿಕರವಾಗಿರುವುದಿಲ್ಲ
ಕೃತಕವಾಗಿ ಮಾಗಿರುವ ಮಾವಿನ ಹಣ್ಣುಗಳು ನೋಡಲು ಆಕರ್ಷಕವಾಗಿದ್ದು, ಗ್ರಾಹಕರನ್ನು ನೋಟದಲ್ಲೇ ಸೆಳೆಯುತ್ತಿವೆ. ಆದರೆ, ನೈಸರ್ಗಿಕವಾಗಿ ಮಾಗಿದ ಹಣ್ಣುಗಳಿಗೆ ಹೋಲಿಸಿದರೆ ಕೃತಕ ಹಣ್ಣುಗಳು ಹೆಚ್ಚು ರುಚಿಕರವಾಗಿರುವುದಿಲ್ಲ. ಪೂರ್ಣ ಪ್ರಮಾಣದಲ್ಲಿ ಮಾಗದ ಈ ಹಣ್ಣುಗಳಲ್ಲಿ ಹುಳಿ ಅಂಶ ಹೆಚ್ಚಿರುತ್ತದೆ.
ಈ ಹಣ್ಣುಗಳನ್ನು ಖರೀದಿಸಿ ತಿಂದು ಕಾಯಿಲೆಗೆ ಬೀಳುತ್ತಿದ್ದಾರೆ
ಜೊತೆಗೆ ಈ ಕೃತಕ ಹಣ್ಣುಗಳು ಉತ್ತಮ ಗುಣಮಟ್ಟದ್ದಾಗಿರುವುದಿಲ್ಲ ಹಾಗೂ ಬಾಳಿಕೆ ಅವಧಿ ತುಂಬಾ ಕಡಿಮೆಯಾಗಿದೆ. ಈ ಹಣ್ಣುಗಳ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತದೆ. ಆದರೂ ಕೃತಕವಾಗಿ ಮಾಗಿಸಿದ ಹಣ್ಣುಗಳ ಆಕರ್ಷಣೆಗೆ ಮಾರು ಹೋಗುತ್ತಿರುವ ಗ್ರಾಹಕರು ದುಡ್ಡು ಕೊಟ್ಟು ಈ ಹಣ್ಣುಗಳನ್ನು ಖರೀದಿಸಿ ತಿಂದು ಕಾಯಿಲೆಗೆ ಬೀಳುತ್ತಿದ್ದಾರೆ.
ನೈಸರ್ಗಿಕವಾಗಿ ಮಾಗದ ಹಣ್ಣನ್ನು ಮಾರಾಟ ಮಾಡಿದರೆ ದಂಡ
ಒಟ್ಟಾರೆ ಕೋಲಾರ, ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗಗಳಿಗೆ ರಫ್ತು ಮಾಡುತ್ತಿರುವ ಕಿಡಿಗೇಡಿಗಳು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಆಹಾರ ಭದ್ರತೆ ಮತ್ತು ಗುಣಮಟ್ಟ ಕಾಯ್ದೆಯ ಪ್ರಕಾರ ನೈಸರ್ಗಿಕವಾಗಿ ಮಾಗದ ಹಣ್ಣನ್ನು ಮಾರಾಟ ಮಾಡಿದರೆ ದಂಡ ವಿಧಿಸಬಹುದು. ಅಸುರಕ್ಷಿತ ಆಹಾರ ಮಾರಾಟ, ಆಮದು ಮಾಡಿಕೊಳ್ಳುವುದು, ದಾಸ್ತಾನು ಮಾಡುವುದು ಅಥವಾ ವಿತರಣೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.