ಕೊಡಗು: ಬ್ಯಾಂಕ್ ಮ್ಯಾನೇಜರ್, ಗೊಬ್ಬರ ವಿತರಕನಿಂದ 7.80 ಲಕ್ಷ ರೂ. ವಂಚನೆ
ಮಡಿಕೇರಿ, ಏಪ್ರಿಲ್ 16: ಕೊಡಗು ಜಿಲ್ಲೆ ಮಡಿಕೇರಿ ಸಮೀಪದ ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಒಳಪಡುವ 12 ಗ್ರಾಮಗಳ ವ್ಯಾಪ್ತಿಯ 24 ರೈತರಿಗೆ ಪ್ರಿಯ ಸೀಡ್ಸ್ 555 ಭತ್ತದ ಬೀಜವನ್ನು ವಿತರಣೆ ಮಾಡಲಾಗಿತ್ತು.
ಈ ಬೀಜವನ್ನು ತೆಗೆದುಕೊಂಡ ರೈತರು ಬಿತ್ತನೆ ಮಾಡಿ ಬೇಸಾಯ ಮಾಡಿದರೂ, ಸಮರ್ಪಕವಾಗಿ ಬೆಳೆ ಬಾರದೆ ಹಾಗೂ ಭತ್ತದ ಕಾಳು ಕಟ್ಟದೆ ಎಕರೆವಾರು ನಷ್ಟವಾಗಿತ್ತು. ನಷ್ಟಕ್ಕೊಳಗಾದ ರೈತರು ಸಹಕಾರ ಸಂಘಕ್ಕೆ ದೂರು ನೀಡಿದ್ದರು.
ಕೊಡಗಿಗೂ ಬಂತು ಕ್ಯಾಂಪ್ಕೊ ಖರೀದಿ ಕೇಂದ್ರ: ಗೋಣಿಕೊಪ್ಪಲುವಿನಲ್ಲಿ ಏ.13ರಂದು ಉದ್ಘಾಟನೆ
ದೂರಿನನ್ವಯ ಸಂಘದ ಅಧ್ಯಕ್ಷ ಕೆ.ಕೆ ಹೇಮಂತ್ಕುಮಾರ್ ಅವರು ಹೈದರಾಬಾದ್ ಕಂಪೆನಿಯ ಪ್ರಿಯ ಸೀಡ್ಸ್ ಕಂಪೆನಿಯ ಮೈಸೂರು ವಿಭಾಗದ ವಿತರಕ ವೆಂಕಟೇಶ್ ರನ್ನು ಮೊದಲು ಕರೆಸಿ ಸ್ಥಳ ಪರಿಶೀಲನೆ ನಡೆಸಿದ್ದರು. ಈ ವ್ಯಕ್ತಿಯಿಂದ ಸಮರ್ಪಕ ಉತ್ತರ ಬಾರದ ಕಾರಣ ಕಂಪೆನಿಯ ಮುಖ್ಯ ಕೇಂದ್ರ ಹೈದರಾಬಾದ್ನ ವಿಭಾಗೀಯ ಅಧಿಕಾರಿ ಹಾಗೂ ದೇಶೀಯ ಮಾರುಕಟ್ಟೆ ವ್ಯವಸ್ಥಾಪಕರನ್ನು ಕೂಡಿಗೆಗೆ ಕರೆಸಿ ಆಯಾ ರೈತರ ಜಮೀನುಗಳಿಗೆ ಭೇಟಿ ನೀಡಿ ಮೂರು ದಿನಗಳ ಕಾಲ ಸ್ಥಳ ಪರಿಶೀಲನೆ ನಡೆಸಲಾಗಿತ್ತು.
ನಂತರ ಸಂಘದ ಸಭಾಂಗಣದಲ್ಲಿ ರೈತರ ಸಮ್ಮುಖದಲ್ಲಿ ಸಭೆ ನಡೆಸಿ ಕಳಪೆ ಬಿತ್ತನೆ ಬೀಜ ಎಂಬ ರೈತರ ಆರೋಪದ ಮೇರೆಗೆ ಆಯಾ ರೈತರ ಬೆಳೆ ನಷ್ಟವಾಗಿರುವ ಆಧಾರದ ಮೇಲೆ ಪರಿಹಾರ ಕೊಡುವುದಾಗಿ ಪ್ರಧಾನ ವ್ಯವಸ್ಥಾಪಕರು ನಿಯಮಾನುಸಾರ ಒಪ್ಪಿ ತೆರಳಿದ್ದರು.
ಅದರಂತೆ 16.12.2020 ರಂದು ಕಂಪೆನಿಯ ಪರವಾಗಿ ಕರಾರುಪತ್ರ ಒಪ್ಪಂದದ ಮೂಲಕ ವೆಂಕಟೇಶ್ ಬಿನ್ ದೇವಪ್ಪ 7,79,700 ಮೊತ್ತದ ಚೆಕ್ಅನ್ನು ಸಂಘಕ್ಕೆ ನೀಡಿದ್ದರು.
ಈ ಹಣವು ವೆಂಕಟೇಶನ ಮೂಲಕ ರೈತರಿಗೆ ಪರಿಹಾರ ನೀಡುವ ಸಲುವಾಗಿ 20.03.2021ರಲ್ಲಿ ಕೂಡಿಗೆ ಕೆನರಾ ಬ್ಯಾಂಕ್ ಖಾತೆಗೆ ಜಮಾ ಆಗಿದೆ. ಇದರನ್ವಯ ಬಿತ್ತನೆ ಬೀಜದ ಕಂಪೆನಿಯಿಂದ ರೈತರಿಗೆ ಪರಿಹಾರ ಬಂದಿದೆ ಎಂದು ಆಡಳಿತ ಮಂಡಳಿಯವರು ತೀರ್ಮಾನ ಮಾಡಿ ಸಂಘದ ವ್ಯಾಪ್ತಿಗೆ ಒಳಪಡುವ 24 ರೈತರಿಗೆ ಭತ್ತ ಮತ್ತು ಹುಲ್ಲಿನ ನಷ್ಟದ ಮೊತ್ತವಾಗಿ 5,54,350 ರೂಗಳನ್ನು ಸಂಘದಿಂದ ರೈತರಿಗೆ ವಿತರಣೆ ಮಾಡಿದರು.
ಸಂಘದ ಸ್ಥಳೀಯ ಕೆನರಾ ಬ್ಯಾಂಕ್ ಖಾತೆಗೆ ಹಣ ಸಂದಾಯವಾಗಿದೆ ಎಂದು ಸಂಘದ ಕೆನರಾ ಬ್ಯಾಂಕ್ ಪಾಸ್ ಪುಸ್ತಕಕ್ಕೆ 7,79,700 ರೂ. ಮಾರ್ಚ್ 23, 2021ರಂದು ನಮೂದಾಗಿದೆ. ಅದೇ ದಿನ ಸಂಘದ ಖಾತೆಗೆ ಬೇರೆ ಮೂಲಗಳ ಹಣ ಸಂದಾಯವಾಗಿರುವ ದಾಖಲೆಗಳು ಪಾಸ್ಬುಕ್ನಲ್ಲಿ ನೋಂದಣಿಯಾಗಿವೆ.
ಮಾ.30, 2021ರಂದು ರೈತರಿಗೆ ಹಣ ವಿತರಣೆಯಾದ ನಂತರ ಸ್ಥಳೀಯ ಕೆನರಾ ಬ್ಯಾಂಕ್ನಲ್ಲಿ ಏಪ್ರಿಲ್ ಮೊದಲ ವಾರದಲ್ಲಿ ಬ್ಯಾಂಕ್ ವ್ಯವಹಾರಕ್ಕೆ ತೆರಳಿದ ಸಂದರ್ಭ ಖಾತೆಯಲ್ಲಿ ಹಣ ಇಲ್ಲದಿರುವುದು 7,79,700 ರೂ. ಮರಳಿ ವಾಪಾಸ್ ಹೋಗಿರುವುದು ಕಂಡುಬಂದಿದೆ.
ಇದಕ್ಕೆ ಸಂಬಂಧಪಟ್ಟಂತೆ ವಿತರಕ ವೆಂಕಟೇಶನನ್ನು ಸಂಘದ ಅಧ್ಯಕ್ಷ ಮತ್ತು ಆಡಳಿತ ಮಂಡಳಿಯವರು ದೂರವಾಣಿ ಮೂಲಕ ಸಂಪರ್ಕಿಸಿದಾಗ ಅದೇ ದಿನ ಹಣ ಮರಳಿ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ. ಇದರಿಂದಾಗಿ ವೆಂಕಟೇಶ್ ಮತ್ತು ಕೆನರಾ ಬ್ಯಾಂಕ್ ವ್ಯವಸ್ಥಾಪಕರು ಸಂಘಕ್ಕೆ ವಂಚನೆ ಮಾಡಿರುವುದು ಗಮನಕ್ಕೆ ಬಂದಿದೆ ಎಂದು ಸಂಘದ ಅಧ್ಯಕ್ಷ ಕೆ.ಕೆ ಹೇಮಂತ್ಕುಮಾರ್ ಹೇಳಿದ್ದಾರೆ.
ಈ ಬೆಳವಣಿಗೆ ಸಂಘದ ವ್ಯವಸ್ಥಾಪಕಿ ಮೀನಾ ಅವರ ಗಮನಕ್ಕೆ ಬಂದ ಬಳಿಕ ಆಡಳಿತ ಮಂಡಳಿ ಅಧ್ಯಕ್ಷರ ಗಮನಕ್ಕೆ ತಂದು ಹಣ ಕೆನರಾ ಬ್ಯಾಂಕ್ ಮೂಲಕ ಸಂಘದ ಖಾತೆಗೆ ಬಂದು ಪಾಸ್ಬುಕ್ಗೆ ನೋಂದಣಿಯಾಗಿ ವಾಪಾಸ್ ವೆಂಕಟೇಶ್ಗೆ ಹೋಗಿರುವುದು ಆಶ್ಚರ್ಯಕರ ವಿಷಯವಾಗಿದೆ.
ಈ ವಿಷಯ ತಿಳಿಯುತ್ತಿದ್ದಂತೆ ಆಡಳಿತ ಮಂಡಳಿಯು ಈ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಏಪ್ರಿಲ್ 9, 2021 ರಂದು ಮೋಸ ಮಾಡಿರುವ ಬಗ್ಗೆ ಕೂಡಿಗೆ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಮತ್ತು ವೆಂಕಟೇಶ್ ವಿರುದ್ಧ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಕಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತಿದ್ದಾರೆ.