ಉತ್ತರ ಪ್ರದೇಶ: ಕೃಷಿ ಆದ್ಯತೆ ನೀಡಲು "ಕಿಸಾನ್ ಸಮೃದ್ಧಿ ಯೋಜನೆ" ಜಾರಿ
ಲಕ್ನೋ, ಜೂನ್ 26; ರಾಜ್ಯದಲ್ಲಿನ ಬಂಜರು ಭೂಮಿಯನ್ನು ಕೃಷಿ ಯೋಗ್ಯ ಭೂಮಿಯನ್ನಾಗಿ ಮಾಡುವ ಮಹತ್ತರ ಯೋಜನೆಗೆ ಉತ್ತರ ಪ್ರದೇಶದ ಸರ್ಕಾರ ಕೋಟ್ಯಂತರ ಹಣ ವಿನಿಯೋಗಿಸುತ್ತಿದೆ. ಇದರಿಂದ ಕೃಷಿಯನ್ನೇ ನಂಬಿಕೊಂಡು ಬದುಕುತ್ತಿರುವ ಲಕ್ಷಾಂತರ ರೈತರ ಆದಾಯವು ಹೆಚ್ಚಾಗಲಿದೆ.
ಬಂಜರು ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಲು ನೆರವಾಗುವ 'ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಕಿಸಾನ್ ಸಮೃದ್ಧಿ ಯೋಜನೆ' ಯನ್ನು ಉತ್ತರ ಪ್ರದೇಶದ ಸರ್ಕಾರ ಭಾನುವಾರ ಜಾರಿಗೊಳಿಸಿದೆ.
ಕೃಷಿಕರ ಬದುಕಿನಲ್ಲಿ ಒಂದಷ್ಟು ಮಹತ್ತರ ಬದಲಾವಣೆ ತರಲು ಒಟ್ಟು 603 ಕೋಟಿ ರು. ಬೃಹತ್ ವೆಚ್ಚದಲ್ಲಿ ಯೋಜನೆ ಜಾರಿಗೆ ತರಲಾಗಿದೆ. ಅಲ್ಲದೇ ಈ ಯೋಜನೆಯಿಂದ ಲಕ್ಷಾಂತರ ಹೆಕ್ಟೆರ್ ಬಂಜರು ಪ್ರದೇಶ ಕೃಷಿ ಭೂಮಿಯಾಗಲಿದೆ. ಇದು ಯೋಜನೆಯ ಪ್ರಮುಖ ಉದ್ದೇಶವೇ ಆಗಿದೆ.
ಗೌತಮ್ ಬುದ್ಧ ನಗರ ಹೊರತುಪಡಿಸಿ ಉತ್ತರ ಪ್ರದೇಶದ ಉಳಿದ ಎಲ್ಲ 74 ಜಿಲ್ಲೆಗಳು ಈ ಯೋಜನೆ ವ್ಯಾಪ್ತಿಗೆ ಒಳಪಡುತ್ತವೆ. ಅಧಿಕಾರಿಗಳ ಪ್ರಕಾರ, ಉದ್ಯೋಗಿಗಳ ಕೊರತೆ ಹೆಚ್ಚಿರುವ ಕಾರಣಕ್ಕೆ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾಗಳನ್ನು ಕೃಷಿ ಚಟುವಟಿಕೆ ಮತ್ತು ಕೃಷಿ ಉದ್ಯೋಗಿಗಳ ಕೊರತೆ ಯಿಂದಾಗಿ ಯುಪಿ ಎನ್ಸಿಆರ್ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಎಂದು ತಿಳಿದು ಬಂದಿದೆ.
2.19ಲಕ್ಷ ಹೆಕ್ಟೇರ್ ಬಂಜರು ಪ್ರದೇಶ ಅಭಿವೃದ್ಧಿ
ಬೃಹತ್ 603 ಕೋಟಿ ರೂ. 'ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಕಿಸಾನ್ ಸಮೃದ್ಧಿ ಯೋಜನೆ' ಯಡಿ ರಾಜ್ಯದ ಎಲ್ಲ ಬಂಜರು ಭೂಮಿಯನ್ನು ಗುರುತಿಸಲಾಗುತ್ತದೆ. ಜಲಾವೃತಗೊಂಡ, ಅನುತ್ಪಾದಕ, ತಗ್ಗು ಪ್ರದೇಶದಲ್ಲಿ ಇದ್ದು ಕೃಷಿಗೆ ಯೋಗ್ಯಲ್ಲ ಭೂಮಿಯನ್ನು ಗುರುತಿಸಿ ಅದನ್ನು ಅಭಿವೃದ್ಧಿಪಡಿಸಲಾಗುತ್ತದೆ. ಅನುತ್ಪಾದನೆಯ ಅದರ ಸ್ಥಿತಿ ಬದಲಿಸಿ ಕೃಷಿ ಯೋಗ್ಯ ಭೂಮಿಯನ್ನಾಗಿ ಮಾಡಲಾಗುತ್ತದೆ. ಇದರಿಂದ ಬಂಜರು ಎಂದು ಗುರುತಿಸಿರುವ ರಾಜ್ಯದ 2.19ಲಕ್ಷ ಹೆಕ್ಟೇರ್ ಪ್ರದೇಶ ಕೃಷಿ ಭೂಮಿ ಆಗಲಿದೆ ಎನ್ನಲಾಗಿದೆ.
ಅಧಿಕ ಉದ್ಯೋಗ ಸೃಷ್ಟಿ
ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದೇವೇಶ್ ಚತುರ್ವೇದಿ ಅವರ ಪ್ರಕಾರ, "ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಕಿಸಾನ್ ಸಮೃದ್ಧಿ ಯೋಜನೆಯು ಕೃಷಿಯಲ್ಲಿ ಹಿಂದುಳಿದ ಜಿಲ್ಲೆಗಳ ರೈತರ ಆದಾಯ ಹೆಚ್ಚಿಸುತ್ತದೆ. ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿ ಕೃಷಿ ಆದ್ಯತೆ ನೀಡಿದಂತಾಗುವ ಜತೆಗೆ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಸಣ್ಣ, ಅತೀ ಸಣ್ಣ ರೈತರಿಗೂ ಕೃಷಿ ಕ್ಷೇತ್ರ ಶಾಶ್ವತ ನೆಲೆಯಾಗುತ್ತದೆ" ಎಂದು ಹೇಳಿದ್ದಾರೆ.
ಐದು ಕೃಷಿ ಸಂಸ್ಥೆಗಳಿಗೆ ಯೋಜನೆಯ ಹೋಣೆ
ಈ ಯೋಜನೆಯನ್ನು ರಾಜ್ಯದಾದ್ಯಂತ ಸಾಕಾರಗೊಳಿಸಲು ಸ್ಥಳಿಯ ಐದು ಕೃಷಿ ಸಂಸ್ಥೆಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಮೊದಲು ಬಂಜರು ಭೂಮಿಯಲ್ಲಿ ಕೆಲಸ ಆರಂಭಿಸುವ ಪ್ರಕ್ರಿಯೆ ಹಾಗೂ ಕಾಮಗಾರಿ ನಂತರ ಭೂಮಿ ಕುರಿತು ಒಂದಷ್ಟು ಮಾದರಿಗಳನ್ನು ನಿಡುವಂತೆ ಐದು ಸಂಸ್ಥೆಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಯೋಜನೆಯಡಿ ಅಗತ್ಯ ಹಣವನ್ನು ಸಂಸ್ಥೆಗಳಿಗೆ ವರ್ಗಾಯಿಸಲಾಗುತ್ತದೆ.
ಪ್ರತಿ ಹೆಕ್ಟೇರ್ ಗೆ ಅಂದಾಜು 25,000 ರು. ಖರ್ಚು
ಗುರುತಿಸಿರುವ ಬಂಜರು ಜಮೀನುಗಳಿಗೆ ನೀರು ಹರಿಸುವ ಚಾನಲ್ ಗಳನ್ನು ಆಯಾ ಪ್ರದೇಶದಲ್ಲಿ ಮೊದಲು ಅಭಿವೃದ್ಧಿ ಪಡಿಸಲಾಗುತ್ತದೆ. ಇದಕ್ಕೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಸ್ಥಳಿಯ ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತದೆ. ಪ್ರತಿ ಹೆಕ್ಟೇರ್ ಬಂಜರು ಭೂಮಿ ಕೃಷಿ ಉತ್ಪಾದಕ ಭೂಮಿಯನ್ನಾಗಿ ಮಾಡಲು 25,000 ರು.ತಗಲಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
Recommended Video