ರೈತ ಮುಖಂಡರ ಆತ್ಮಾವಲೋಕನಕ್ಕೆ ಸಕಾಲ…
ದಿಲ್ಲಿಯ ರೈತ ಹೋರಾಟಕ್ಕೆ ಬೆಂಬಲವಾಗಿ ಕರ್ನಾಟಕ ರಾಜ್ಯದಲ್ಲೂ ಕಿಸಾನ್ ಪಂಚಾಯತ್ ಹಾಗೂ ಜಾಥಾ ಆಯೋಜನೆಗೊಂಡಿವೆ. ಮಾ.20 ರಂದು ಶಿವಮೊಗ್ಗ, 21 ರಂದು ಹಾವೇರಿಯಲ್ಲಿ ಕಿಸಾನ್ ಮಹಾ ಪಂಚಾಯತ್ ನಡೆಯಲಿದೆ. ಮಾ.22 ರಂದು ಬೆಂಗಳೂರಿನಲ್ಲಿ ವಿಧಾನಸೌಧ ಚಲೋ ಏರ್ಪಾಡಾಗಿದೆ.
ಈ ಕಾರ್ಯಕ್ರಮಗಳಲ್ಲಿ ದಿಲ್ಲಿಯಿಂದ ರೈತ ಮುಖಂಡರಾದ ರಾಕೇಶ್ ಟಿಕಾಯತ್, ಅಂತಾರಾಷ್ಟ್ರೀಯ ರೈತ ಸಮನ್ವಯ ಸಮಿತಿ ಸಂಚಾಲಕ ಯುದ್ಧವೀರ ಸಿಂಗ್ ಭಾಗವಹಿಸಲಿದ್ದಾರೆ. ಇವರೊಂದಿಗೆ ಕಿಸಾನ್ ಮೋರ್ಚಾದ ದರ್ಶನ್ ಪಾಲ್ ಕೂಡಾ ಜೊತೆಯಾಗಲಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ವಿವಿಧ ದಿಕ್ಕುಗಳಿಂದ ಬೆಂಬಲ ವ್ಯಕ್ತವಾಗುತ್ತಿರುವುದು ಸದ್ಯದ ಸಂದರ್ಭಕ್ಕೆ ಸ್ವಾಗತಾರ್ಹ ಬೆಳವಣಿಗೆ ಎನ್ನೋಣ.
ಬಿಜೆಪಿಗೇಕೆ ಮತ: ಪಂಚ ರಾಜ್ಯಗಳಲ್ಲಿ ಕೇಂದ್ರದ ವಿರುದ್ಧ ರೈತರ ಮಾಸ್ಟರ್ ಪ್ಲ್ಯಾನ್!
ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ರೈತ ಸಂಘಟನೆಗಳು ಮಾತ್ರ ಒಂದು ವೇದಿಕೆಯಡಿ ಬರಬೇಕಾದ ಅನಿವಾರ್ಯವನ್ನು ಮನಗಾಣಬೇಕಿದ್ದು, ಮತ್ತದಕ್ಕೆ ಬೇಕಾದ ರೂಪುರೇಷೆಗಳನ್ನು ಸಿದ್ಧಪಡಿಸಲು ಸಕಾಲವಿದು. ಪ್ರಸ್ತುತ ಮೈತ್ರಿಗಳು ಮತ್ತದರಲ್ಲಿ ಚದುರಿಹೋಗಿರುವ ರೈತ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯವೂ ಇದೇ ಆಗಿದೆ.
ಸ್ವಾತಂತ್ರ್ಯಾ ನಂತರ ದೇಶವನ್ನಾಳಿದ ಯಾವ ರಾಜಕೀಯ ಪಕ್ಷಗಳಿಂದಲೂ(ಸರ್ಕಾರಗಳಿಂದಲೂ) ರೈತರ ಏಳಿಗೆ ಆಗಿಲ್ಲ. ಇದೀಗ ಭಾಜಪ ತಂದಿರುವ ಮೂರು ಕೃಷಿ ಕಾಯಿದೆಗಳ ವಿರುದ್ಧ ದೇಶದಾದ್ಯಂತ ಎದ್ದಿರುವ ಚಳುವಳಿಯು ಪ್ರಸ್ತುತ ಸರ್ಕಾರದ ನೀತಿಗಳ ವಿರುದ್ಧ ಹೋರಾಟವಾಗಿಯೇ ಇರಬೇಕೇ ಹೊರತು, "ಶತ್ರುವಿನ ಶತ್ರು ಮಿತ್ರ" ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೋ, ಎಡಪಕ್ಷಗಳಿಗೋ ರೈತರು ಒಲವು ತೋರುವುದರಲ್ಲಿ ಯಾವುದೇ ಸಾಧನೆಯಾಗುವುದಿಲ್ಲ. ರೈತ ಚಳುವಳಿಗಳು ಸ್ವತಂತ್ರವಾಗಿರಬೇಕು. ಸಂಘಟನೆಗಳಿಗೆ ಸ್ವಾಯತ್ತತೆ ಇರಬೇಕು.
ಇದೀಗ ರೈತ ಹೋರಾಟಕ್ಕೆ ಬೆಂಬಲವಾಗಿ ನಿಂತಿರುವ ಯಾವುದೇ ರಾಜಕೀಯ ಪಕ್ಷ, ರಾಜಕೀಯೇತರ ಸಂಘಟನೆಗಳು ಅಥವಾ ವ್ಯಕ್ತಿಗಳಿಂದ ರೈತ ಕುಲದ ಉದ್ಧಾರ ಕನಸಿನ ಮಾತು. ಆ ಬಗ್ಗೆ ಈಗಾಗಲೇ ರಾಜ್ಯದ ಪ್ರಮುಖ ರೈತ ಮುಖಂಡರಿಗೆ ಮನವರಿಕೆ ಆಗಿದೆ ಎಂಬುದು ಅವರ ಸಂದರ್ಶನಗಳಲ್ಲಿ ವೇದ್ಯವಾಗಿದೆ.
ಮುಂದಿನ ದಿನಗಳಲ್ಲಿ ರೈತ ಚಳುವಳಿಗಳು ಹೊರಗಿನ ಜನರ ಸಲಹೆ-ಸೂಚನೆಗಳಲ್ಲಿ ನಡೆಯುವುದಿಲ್ಲವೆಂಬ ಸ್ಪಷ್ಟ ಸಂದೇಶವನ್ನು ರೈತ ಚಳುವಳಿಗಳೊಂದಿಗೆ ನುಸುಳಿರುವವರಿಗೆ ರವಾನಿಸುವುದೊಂದೇ ಬಾಕಿ. ಆ ದಿನವೂ ಶೀಘ್ರ ಬರಬಹುದೆಂಬ ನಿರೀಕ್ಷೆ ಇದೆ. ಎಲ್ಲವನ್ನೂ, ಎಲ್ಲದನ್ನೂ, ಕಾಲವೇ ನಿರ್ಧರಿಸಲಿದೆ.