ನಕಲಿ ಕ್ರಿಮಿನಾಶಕ ಕಂಪನಿಗಳಿಂದ ರೈತರಿಗೆ ಮೋಸ: ಪರಿಹಾರಕ್ಕೆ ಆಗ್ರಹ
ದಾವಣಗೆರೆ, ಅಕ್ಟೋಬರ್ 29: ರೈತರಿಗೆ ಮೋಸವಾದರೂ ಬಿಜೆಪಿ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ರಾಜ್ಯದಲ್ಲಿ ನಕಲಿ ಬಿತ್ತನೆ ಬೀಜ, ಕ್ರಿಮಿನಾಶಕ ಮಾರಾಟ ಮಾಡುವ ಖಾಸಗಿ ಕಂಪನಿಗಳು, ಏಜೆಂಟರ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜು ವಿ ಶಿವಗಂಗಾ ಸರ್ಕಾರಕ್ಕೆ ಆಗ್ರಹಿಸಿದರು.
ಇತ್ತೀಚೆಗೆ ನಕಲಿ ಕ್ರಿಮಿನಾಶಕ ಕಂಪನಿಗಳಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಸೂಕ್ತ ಮಾಹಿತಿ ನೀಡದೇ ರೈತರಿಗೆ ಕ್ರಿಮಿನಾಶಕ ಔಷಧ ನೀಡಿ ವಂಚನೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
"ರೈತರಿಗೆ ತೊಂದರೆ ಕೊಟ್ಟರೆ ಪರಿಣಾಮ ಎದುರಿಸಬೇಕಾಗುತ್ತದೆ'
ತಾಲ್ಲೂಕಿನ ಕೊಡಗನೂರು ಗ್ರಾಮದಲ್ಲಿ ಟೊಮೆಟೊ ಬೆಳೆ ಹಾನಿಯಾದ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಿತ್ತನೆ ಬೀಜ, ಕ್ರಿಮಿನಾಶಕ ಔಷಧ ಕಂಪನಿಗಳಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಈ ಕುರಿತು ಬೀದಿಗಿಳಿದು ರಾಜ್ಯಮಟ್ಟದಲ್ಲಿ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಕಲಿ ಕ್ರಿಮಿನಾಶಕ ಔಷಧ ನೀಡಿ ರೈತರಿಗೆ ವಂಚಿಸಿದ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ರೈತರಾದ ಮಂಜುನಾಥ್ ಹಾಗೂ ಶಿವಮೂರ್ತಿ ಅವರು ಟೊಮೆಟೊ ಬೆಳೆದಿದ್ದು, ಕೈಗೆ ಫಸಲು ಬರುವ ಸಂದರ್ಭದಲ್ಲಿ ನಕಲಿ ಕ್ರಿಮಿನಾಶಕ ಸಿಂಪಡಿಸಿ ನಷ್ಟ ಅನುಭವಿಸುವಂತಾಗಿದೆ. ಇದಕ್ಕೆ ಕ್ರಿಮಿನಾಶಕ ಔಷಧ ನೀಡಿದ ಕಂಪನಿಗಳೇ ನೇರ ಹೊಣೆ ಎಂದರು.
ಖಾಸಗಿ ಕ್ರಿಮಿನಾಶಕ ಕಂಪನಿಗಳು ರೈತರನ್ನೇ ಬಂಡವಾಳವನ್ನಾಗಿಸಿಕೊಂಡು ಮೋಸ ಮಾಡುತ್ತಿವೆ. ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು ಬೀದಿಗೆ ಬಿದ್ದಿದ್ದಾರೆ. ಸರ್ಕಾರ ಯಾವುದೇ ಪರಿಶೀಲನೆ ನಡೆಸದೆ ಔಷಧ ಕಂಪನಿಗಳಿಗೆ ಪರವಾನಗಿ ನೀಡುತ್ತದೆ. ಇದರಿಂದ ಮೋಸ ಆಗುತ್ತಿರುವುದು ರೈತರಿಗೆ ಎಂದು ಕಿಡಿಕಾರಿದರು.
ಸರ್ಕಾರ ಇಂಥ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಔಷಧದಿಂದ ಬೆಳೆ ಹಾನಿಯಾಗಿದೆ ಎಂದು ಸಾಬೀತಾದರೆ ರೈತರಿಗೆ ಕನಿಷ್ಠ 1 ಎಕರೆಗೆ 10 ಲಕ್ಷ ಪರಿಹಾರವನ್ನು ಕಂಪನಿಯಿಂದ ಕೊಡಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಕಿಸಾನ್ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾತಿ ಶಿವಕುಮಾರ್, ಪ್ರವೀಣ್ ಕುಮಾರ್ ಎಸ್.ಕೆ. ಜಿಕ್ರಿಯಾ, ಜಿಲ್ಲಾ ಉಪಾಧ್ಯಕ್ಷ ಮಾಲತೇಶ್, ಸೋಮಶೇಖರ್ ಮಾಯಕೊಂಡ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.