ಕೃಷಿ ಉತ್ತೇಜನಕ್ಕಾಗಿ 'ಹಸಿರು ಸೇನೆ' ರಚಿಸಿದ ಕೇರಳ ಗ್ರಾ.ಪಂ.
ತಿರುವನಂತಪುರಂ ಆಗಸ್ಟ್ 05: ಹವಾಮಾನ ವೈಪರಿತ್ಯ ಸೇರಿದಂತೆ ಅನೇಕ ಕಾರಣಗಳಿಂದ ಸವಾಲುಗಳನ್ನು ಎದುರಿಸುತ್ತಿರುವ ಕೃಷಿ ಕ್ಷೇತ್ರ ಉತ್ತೇಜಿಸಲು ಕೇಳರ ರಾಜ್ಯದ ಗ್ರಾಮಪಂಚಾಯಿತಿಗೆ ಒಂದು 'ಹಸಿರು ಸೈನ್ಯ' ರಚಿಸುವ ಮೂಲಕ ಕೌಶಲ್ಯಯುತ ಕಾರ್ಮಿಕರ ಕೊರತೆ ನೀಗಿಸಿದೆ.
ಹವಾಮಾನ ಬದಲಾವಣೆ ಕಾರಣದಿಂದ ತರಬೇತಿ ಪಡೆದ ಕಾರ್ಮಿಕರ ಕೊರತೆ ಹಿನ್ನೆಲೆ ಕೃಷಿ ವಲಯವು ವಿವಿಧ ಸಮಸ್ಯೆಗಳನ್ನು ಎದರಿಸುತ್ತಿದೆ. ಇದನ್ನು ಅರಿತ ಆಲಪ್ಪುಳ ಜಿಲ್ಲೆಯ ಚೆರ್ತಲ ತಾಲೂಕಿನ ತೈಕಟ್ಟುಸ್ಸರಿ ಗ್ರಾಮದಲ್ಲಿ ಎಂತಹ ಪರಿಸ್ಥಿತಿಯಲ್ಲೂ ಕೃಷಿ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಬಲ್ಲ 'ಹಸಿರು ಸೇನೆ' (ಟಾಸ್ಕ್ ಫೋರ್ಸ್) ರಚಿಸಿದೆ.
ಈ ತಂಡವನ್ನು ಪಂಚಾಯತಿಯ ಅಧಿಕಾರಿಗಳು ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಕೂಡಿಕೊಂಡು ರಚಿಸಿದ್ದಾರೆ. ಇದರಲ್ಲಿ 20 ಮಹಿಳೆಯರು ಮತ್ತು ಐದು ಪುರುಷರನ್ನು ಒಳಗೊಂಡ ಕೃಷಿ ಕಾರ್ಮಿಕರ ಸೇನೆಯನ್ನು ರಚಿಸಿದೆ. ಮುಖ್ಯವಾಗಿ ಕೃಷಿ ವಲಯದಲ್ಲಿ ಹೆಚ್ಚುತ್ತಿರುವ ಕಾರ್ಮಿಕರ ಕೊರತೆ ನೀಗಿಸಲು ಯೋಜನೆ ಜಾರಿಗೆ ತರಲಾಗಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಡಿ.ವಿಶ್ವಂಭರನ್ ತಿಳಿಸಿದರು.
ಹಸಿರು ಸೇನೆಗೆ ಸೂಕ್ತ ತರಬೇತಿ
ಸಮನ್ವಯದಿಂದ ಹಸಿರು ಸೇನೆಯ ಚಟುವಟಿಕೆಗಳು ನಡೆಯಲಿವೆ. ಇಲ್ಲಿ ಆಯ್ಕೆಯಾದ ಸದಸ್ಯರಿಗೆ ಕೃಷಿ ಯಂತ್ರೋಪಕರಣಗಳ ಬಳಕೆ ಕುರಿತು ಪ್ರಾಥಮಿಕ ತರಬೇತಿ ನೀಡಲಾಗಿದೆ. ಟ್ರ್ಯಾಕ್ಟರ್, ಟಿಲ್ಲರ್, ಕಳೆ ತೆಗೆಯುವ ಯಂತ್ರ, ತೆಂಗಿನಕಾಯಿ ಕೆತ್ತುವುದು ಸೇರಿದಂತೆ ಅನೇಕ ಕೃಷಿ ಯಂತ್ರಗಳ ಬಳಕೆ ಕುರಿತು ತರಬೇತಿ ನೀಡಲಾಗಿದೆ.
ಕೃಷಿ ಅಧಿಕಾರಿ ಪಿಂಟು ಎಂಬುವವರು ಮಾತನಾಡಿ, "ಸಾವಯವ ಕ್ರಿಮಿನಾಶಕ ತಯಾರಿಕೆ, ಬಳಕೆ ಹಾಗೂ ಸಸಿಗಳ ವೈಜ್ಞಾನಿಕ ತಯಾರಿಕೆಯ ತರಬೇತಿ ಪೂರ್ಣಗೊಂಡರೆ, ಸೇನೆಯ ಸಿಬ್ಬಂದಿ ಕ್ಷೇತ್ರದಲ್ಲಿ ಹೆಚ್ಚು ಕ್ರಿಯಾಶೀಲರಾಗುತ್ತಾರೆ. ರೈತರ ಬೇಡಿಕೆಗೆ ಅನುಗುಣವಾಗಿ ಕೃಷಿ ಕೆಲಸಕ್ಕೆ ನಿಯೋಜನೆ ಮಾಡಲಾಗುತ್ತದೆ," ಎಂದರು.
ಈ ಹಸಿರು ಸೇನೆ ಸದಸ್ಯರು ಸಮಂಜಸ ದರದಲ್ಲಿ ಬಿತ್ತುವ ಪ್ರಕ್ರಿಯೆಯಿಂದ ಬೆಳೆ ಕೊಯ್ಲು ಮಾಡುವವರೆಗೆ ಸೇವೆ ನೀಡಲಿದ್ದಾರೆ. ಕೆಲಸಕ್ಕೆ ಕೂಲಿಯನ್ನು ರೈತರೇ ಪಾವತಿಸಬೇಕು. ಅವರಿಗಾಗಿ ರೈತರು ಮುಂಚಿತವಾಗೇ ಬುಕ್ ಮಾಡುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.