ಕೃಷಿ ಕಾಯ್ದೆ ವಿರುದ್ಧ ಸುಪ್ರೀಂಕೋರ್ಟ್ಗೆ ಕೇರಳ ಕಾಂಗ್ರೆಸ್ ಸಂಸದ
ನವದೆಹಲಿ, ಸೆಪ್ಟೆಂಬರ್ 28: ದೇಶದಾದ್ಯಂತ ರೈತರ ಆಕ್ರೋಶಕ್ಕೆ ಕಾರಣವಾಗಿರುವ ಕೇಂದ್ರ ಸರ್ಕಾರದ ಕೃಷಿ ಸಂಬಂಧಿಸಿದ ಹೊಸ ಕಾಯ್ದೆಗಳ ವಿರುದ್ಧ ಕಾಂಗ್ರೆಸ್ ಸಂಸದರೊಬ್ಬರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ನೂತನ ಕೃಷಿ ಕಾಯ್ದೆಗಳಲ್ಲಿನ ವಿವಿಧ ನಿಯಮಗಳ ಸಾಂವಿಧಾನಿಕ ಮಾನ್ಯತೆಯನ್ನು ಕೇರಳದ ತ್ರಿಶೂರ್ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಸಂಸದ ಟಿಎನ್ ಪ್ರತಾಪನ್ ಪ್ರಶ್ನಿಸಿದ್ದಾರೆ. ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಖಾತರಿ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ 2020, ಸಂವಿಧಾನದ 16ನೇ ವಿಧಿ (ಸಮಾನತೆಯ ಹಕ್ಕು), 15 (ತಾರತಮ್ಯ ನಿರ್ಬಂಧ) ಮತ್ತು 21ರ (ಜೀವಿಸುವ ಹಕ್ಕು ಮತ್ತು ಸ್ವಾತಂತ್ರ್ಯ) ಉಲ್ಲಂಘನೆಯಾಗಿದೆ ಎಂದಿದ್ದಾರೆ.
ಕೈ ನಾಯಕರ ಸಲಹೆಯಂತೆ ಕೃಷಿ ಕಾಯ್ದೆ ತಿದ್ದುಪಡಿ: ಬಿ.ಸಿ. ಪಾಟೀಲ್!
ರಾಷ್ಟ್ರಪತಿಯವರ ಒಪ್ಪಿಗೆ ಪಡೆದಿರುವ ಈ ಕಾಯ್ದೆಯನ್ನು ಅಸಾಂವಿಧಾನಿಕ, ಅಕ್ರಮ ಮತ್ತು ನಿರರ್ಥಕ ಎಂದು ರದ್ದುಗೊಳಿಸಬೇಕಿದೆ ಎಂದು ಅವರು ಹೇಳಿದ್ದಾರೆ.
ಕೃಷಿ ಸಂಬಂಧಿತ 3 ಮಸೂದೆಗೆ ರಾಷ್ಟ್ರಪತಿ ಅಂಕಿತ
ಭಾರತದ ಕೃಷಿ ಕ್ಷೇತ್ರವು ಸಣ್ಣ ಹಿಡುವಳಿದಾರರ ಕಾರಣದಿಂದ ವಿಘಟನೆಯಾಗಿದ್ದು, ಹವಾಮಾನ ಅವಲಂಬನೆ, ಉತ್ಪಾದನೆಯಲ್ಲಿನ ಅನಿಶ್ಚಿತತೆ ಮತ್ತು ಅಂದಾಜಿಸಲಾಗದ ಮಾರುಕಟ್ಟೆಯಂತಹ ತಮ್ಮ ನಿಯಂತ್ರಣ ಮೀರಿದ ಹಲವು ದೌರ್ಬಲ್ಯಗಳನ್ನು ಹೊಂದಿದೆ. ಇದರಿಂದ ಹೂಡಿಕೆ ಮತ್ತು ಲಾಭ ಎರಡರ ನಿರ್ವಹಣೆಯಲ್ಲಿಯೂ ಕೃಷಿಯು ಅಪಾಯಕಾರಿ ಹಾಗೂ ಅದಕ್ಷತೆ ಹೊಂದಿದೆ. ಈ ಕಾಯ್ದೆಗಳ ಬದಲು ಎಪಿಎಂಸಿಗೆ ಹೆಚ್ಚಿನ ಹೂಡಿಕೆಯ ಮೂಲಕ ಅದನ್ನು ಬಲಪಡಿಸಿ ಮತ್ತು ಎಂಎಸ್ಪಿಯ ಪರಿಣಾಮಕಾರಿ ನಿರ್ವಹಣೆ ಮಾಡಿ ಎಂದು ಪ್ರತಾಪನ್ ಹೇಳಿದ್ದಾರೆ.