ಕೃಷಿ ಕಾಯ್ದೆ; ನಿರ್ಣಯ ಮಂಡಿಸಿದ ನಂತರ ಯು ಟರ್ನ್ ಹೊಡೆದ ಕೇರಳ ಬಿಜೆಪಿ ಶಾಸಕ
ತಿರುವನಂತಪುರಂ, ಡಿಸೆಂಬರ್ 31: ಕೇಂದ್ರದ ಮೂರು ನೂತನ ಕೃಷಿ ಕಾಯ್ದೆಗಳ ರದ್ದುಪಡಿಗೆ ಆಗ್ರಹಿಸಿ ಕೇರಳ ಸಿಎಂ ಪಿಣರಾಯಿ ವಿಜಯನ್ ಗುರುವಾರ ರಾಜ್ಯ ವಿಧಾನ ಸಭೆಯಲ್ಲಿ ನಿರ್ಣಯ ಮಂಡಿಸಿದ್ದು, ಸರ್ವಾನುಮತದೊಂದಿಗೆ ನಿರ್ಣಯ ಮಂಡನೆಯಾಗಿದೆ.
ವಿಧಾನ ಸಭೆಯಲ್ಲಿ ಆಡಳಿತ ಪಕ್ಷ ಎಲ್ ಡಿಎಫ್, ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹಾಗೂ ಕೇರಳದ ಏಕೈಕ ಬಿಜೆಪಿ ಶಾಸಕ ಓ ರಾಜಗೋಪಾಲ್ ಅವರೂ ಬೆಂಬಲ ವ್ಯಕ್ತಪಡಿಸಿದ ನಂತರ ನಿರ್ಣಯ ಮಂಡನೆ ಮಾಡಲಾಗಿತ್ತು.
ಕೃಷಿ ಕಾಯ್ದೆಗಳ ವಿರುದ್ಧ ನಿರ್ಣಯ ಮಂಡಿಸಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಕೇರಳ ಸಿಎಂ
ಆದರೆ ಸಿಎಂ ಪಿಣರಾಯಿ ವಿಜಯನ್ ಅವರ ಈ ನಿರ್ಣಯಕ್ಕೆ ಬೆಂಬಲ ನೀಡಿದ್ದ ಕೆಲವೇ ಗಂಟೆಗಳ ನಂತರ ಬಿಜೆಪಿ ಶಾಸಕ ರಾಜಗೋಪಾಲ್ ತಮ್ಮ ನಿಲುವಿನಿಂದ ಹಿಂದೆ ಸರಿದಿದ್ದಾರೆ. "ನಾನು ಕೇರಳ ವಿಧಾನಸಭೆ ನಿರ್ಣಯವನ್ನು ವಿರೋಧಿಸುತ್ತೇನೆ. ಕೃಷಿ ಕಾಯ್ದೆಗಳ ವಿರುದ್ಧದ ನಿರ್ಣಯಕ್ಕೆ ನನ್ನ ವಿರೋಧವಿದೆ. ವಿಧಾನಸಭೆಯಲ್ಲಿ ನನ್ನ ನಿಲುವನ್ನು ಸ್ಪಷ್ಟವಾಗಿ ತಿಳಿಸಿದ್ದೇನೆ. ನಾನು ಕೇಂದ್ರದ ಕಾಯ್ದೆಯನ್ನು ವಿರೋಧಿಸುತ್ತಿಲ್ಲ. ಈ ಕಾಯ್ದೆಗಳನ್ನು ರೈತರ ಒಳಿತಿಗೆ ರೂಪಿಸಲಾಗಿದೆ. ಪ್ರಧಾನಿ ಈ ಕುರಿತು ಮಾತುಕತೆಗೆ ಸಿದ್ಧವಾಗಿರುವುದಾಗಿ ನಾನು ಈ ಹಿಂದೆಯೂ ತಿಳಿಸಿದ್ದೆ" ಎಂದು ಹೇಳಿಕೆ ನೀಡಿದ್ದಾರೆ.
ಕೇಂದ್ರ ಪರಿಚಯಿಸಿರುವ ಕೃಷಿ ಮಾರುಕಟ್ಟೆ ಕಾಯ್ದೆ, ಬೆಲೆ ಭರವಸೆಗಳ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ, ಅಗತ್ಯ ಸರಕು (ತಿದ್ದುಪಡಿ) ಕಾಯ್ದೆಗಳಿಗೆ ಸಂಬಂಧಿಸಿದಂತೆ ರೈತರ ಸಮಸ್ಯೆಗಳ ಕುರಿತು ಚರ್ಚೆ ನಡೆಸಲು ಗುರುವಾರ ವಿಶೇಷ ಅಧಿವೇಶನ ಕರೆಯಲಾಗಿತ್ತು. ಈ ಸಂದರ್ಭ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂಬ ನಿರ್ಣಯಕ್ಕೆ ರಾಜಗೋಪಾಲ್ ಬೆಂಬಲ ನೀಡಿದ್ದರು. ಈ ನಿರ್ಣಯಕ್ಕೆ ನನ್ನ ಬೆಂಬಲವಿದೆ. ಈ ಮೂರು ಕಾಯ್ದೆಗಳನ್ನು ಕೇಂದ್ರ ರದ್ದುಪಡಿಸಬೇಕು ಎಂದಿದ್ದರು.
ಯಾವುದೇ ಆಕ್ಷೇಪವಿಲ್ಲದೇ ನಿರ್ಣಯ ಮಂಡನೆಯಾಗಿರುವುದಾಗಿ ಸ್ಪೀಕರ್ ಪಿ ಶ್ರೀರಾಮಕೃಷ್ಣನ್ ತಿಳಿಸಿದ್ದರು. ಇದೀಗ ಬೇರೆ ರೀತಿಯ ಹೇಳಿಕೆಯನ್ನು ರಾಜಗೋಪಾಲ್ ನೀಡಿದ್ದಾರೆ.