ಮಳೆರಾಯನ ಕೃಪೆ: ತಮಿಳುನಾಡಿಗೆ ಅಗತ್ಯಕ್ಕಿಂತ ಹೆಚ್ಚಿನ ನೀರು
Recommended Video
ಬೆಂಗಳೂರು, ಜುಲೈ 16: ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಬಿಡುವಂತೆ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಸೂಚನೆ ನೀಡಿ, ವಾರ ಕಳೆಯುವುದರೊಳಗೆ ಎರಡು ರಾಜ್ಯಗಳ ಅಣೆಕಟ್ಟುಗಳು ಮೈದುಂಬಿಕೊಂಡಿದ್ದು, ಉಭಯ ರಾಜ್ಯಗಳ ರೈತರು ಸಂತಸದಿಂದ ಕುಣಿದಾಡುತ್ತಿದ್ದಾರೆ.
ಮಳೆರಾಯನ ಕೃಪೆಯಿಂದ ತಮಿಳುನಾಡಿಗೆ ಜೂನ್ ತಿಂಗಳಲ್ಲಿ ಕಾವೇರಿ ಪ್ರಾಧಿಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ನೀರು ಹರಿದಿದೆ.
ಚಿತ್ರಗಳು : ಉಗ್ರಗೊಂಡ ಕಾವೇರಿ ಶಾಂತಳಾಗಲು ತೀರ್ಥ ಪೂಜೆ
ಜೂನ್ ತಿಂಗಳಲ್ಲಿ ರಾಜ್ಯದಿಂದ ತಮಿಳುನಾಡಿಗೆ 9.19 ಟಿಎಂಸಿ ನೀರು ಹರಿಸಬೇಕಿತ್ತು, ಆದರೆ, ಆ ತಿಂಗಳಲ್ಲೇ 13.29 ನೀರು ಹರಿದುಹೋಗಿದೆ. ಜುಲೈನಲ್ಲಿ 31.24 ಟಿಎಂಸಿ ನೀರು ಹರಿಸಬೇಕಿದ್ದು, ಎರಡು ತಿಂಗಳಿಂದ ಹರಿಸಬೇಕಿರುವ ಬಾಕಿ 12.09 ಟಿಎಂಸಿ. ಆದರೆ, ತಿಂಗಳ ಪ್ರಾರಂಭದಲ್ಲೇ 14.72 ಟಿಎಂಸಿ ನೀರು ಹರಿದು ಹೋಗಿದೆ.
ತಮಿಳುನಾಡಿನ ಮೆಟ್ಟೂರು ಜಲಾಶಯದ ಶೇಖರಣಾ ಸಾಮರ್ಥ್ಯ 79 ಅಡಿ ಇದ್ದು, ಈಗಾಗಲೇ 78.9 ಅಡಿ ತುಂಬಿದೆ. ರಾಜ್ಯ ಜಲಾನಯನ ಪ್ರದೇಶದ ಕಬಿನಿ ಮತ್ತು ಹಾರಂಗಿ ಭರ್ತಿಯಾಗಿದ್ದು, ಕೆಆರ್ ಎಸ್ ಜಲಾಶಯ ಭರ್ತಿಯಾಗಿದೆ. ಮಳೆ ಹಾಗೂ ಒಳಹರಿವಿನ ಪ್ರಮಾಣ ಇದೇ ರೀತಿ ಮುಂದುವರೆದರೆ ಕೆಲವೇ ದಿನದಲ್ಲಿ ಎರಡು ರಾಜ್ಯಗಳ ಜಲಾಶಯಗಳೂ ಭರ್ತಿಯಾಗಲಿವೆ.
ಕಾವೇರಿ ತುಂಬಿ ಹರಿಯುತ್ತಿದ್ದಾಳೆ
ರಾಜ್ಯ ಜಲಾನಯನ ಪ್ರದೇಶದ ಕಬಿನಿ ಮತ್ತು ಹಾರಂಗಿ ಭರ್ತಿಯಾಗಿದ್ದು, ಕೆಆರ್ ಎಸ್ ಜಲಾಶಯ ಭರ್ತಿಯಾಗಿದೆ. ಮಳೆ ಹಾಗೂ ಒಳಹರಿವಿನ ಪ್ರಮಾಣ ಇದೇ ರೀತಿ ಮುಂದುವರೆದರೆ ಕೆಲವೇ ದಿನದಲ್ಲಿ ಎರಡು ರಾಜ್ಯಗಳ ಜಲಾಶಯಗಳೂ ಭರ್ತಿಯಾಗಲಿವೆ. ನಾಲ್ಕು ವರ್ಷಗಳ ಬಳಿಕ ಕೃಷ್ಣರಾಜ ಸಾಗರ ಭರ್ತಿಯಾಗಿದೆ. ಅತ್ತ ಮೆಟ್ಟೂರು ಅಣೆಕಟ್ಟಿನ ನೀರಿನ ಪ್ರಮಾಣ ಭಾನುವಾರಕ್ಕೆ 79 ಅಡಿಗೆ ಬಂದಿದೆ.
ಕಳೆದ ಫೆಬ್ರವರಿಯಲ್ಲಿ ನೀರು ಹಂಚಿಕೆ ಬಗ್ಗೆ ಅಂತಿಮ ತೀರ್ಪು
ಕಳೆದ ಫೆಬ್ರವರಿಯಲ್ಲಿ ನೀರು ಹಂಚಿಕೆ ಬಗ್ಗೆ ಅಂತಿಮ ತೀರ್ಪು ನೀಡಿದ ಸುಪ್ರೀಂಕೋರ್ಟ್ ತಮಿಳುನಾಡಿಗೆ 177.25 ಟಿಎಂಸಿ ನೀರನ್ನಷ್ಟೇ ನೀಡುವ ಬಾಧ್ಯತೆಯನ್ನು ಕರ್ನಾಟಕದ ಮೇಲೆ ಹೊರೆಸಿತ್ತು. ಅಂದರೆ ನ್ಯಾಯಾಧೀಕರಣದ ತೀರ್ಪಿನಿಂದ 14.75 ಟಿಎಂಸಿ ನೀರನ್ನು ಕಡಿತ ಮಾಡಿತ್ತು.
ಕಾವೇರಿ ನಿರ್ವಹಣಾ ಪ್ರಾಧಿಕಾರ(CWWA) ಸ್ಥಾಪನೆಯಾಗಿ ಪ್ರಾಧಿಕಾರದ ಮಧ್ಯಂತರ ಮುಖ್ಯಸ್ಥ ಮಸೂದ್ ಹುಸೇನ್ ನೇತೃತ್ವದಲ್ಲಿ ಉಭಯ ರಾಜ್ಯಗಳ 9 ಜನ ಸದಸ್ಯರ ಜತೆ ಮಹತ್ವದ ಸಭೆ ನಡೆಸಲಾಯಿತು.
ಒಟ್ಟಾರೆ 177.25 ಟಿಎಂಸಿ ಅಡಿ ನೀರು
ಆಗಸ್ಟ್ ತಿಂಗಳಿನಲ್ಲಿ ತಮಿಳುನಾಡು 45.95 ಟಿಎಂಸಿ ಅಡಿ ನೀರು, ಸೆಪ್ಟೆಂಬರ್ ನಲ್ಲಿ 36.76 ಟಿಎಂಸಿ ಅಡಿ ನೀರು, ಅಕ್ಟೋಬರ್ ನಲ್ಲಿ 20.22 ಟಿಎಂಸಿ ಅಡಿ ನೀರು, ನವೆಂಬರ್ ನಲ್ಲಿ 13.78 ಟಿಎಂಸಿ ಅಡಿ ನೀರು, ಡಿಸೆಂಬರ್ ನಲ್ಲಿ 7.35 ಟಿಎಂಸಿ ಅಡಿ ನೀರು, ಜನವರಿಯಲ್ಲಿ 2.76 ಟಿಎಂಸಿ ಅಡಿ, ಫೆಬ್ರವರಿಯಿಂದ ಮೇ ತನಕ 2.50 ಟಿಎಂಸಿ ಅಡಿ, ಒಟ್ಟಾರೆ 177.25 ಟಿಎಂಸಿ ಅಡಿ ನೀರು ಸಿಗಲಿದೆ. ಈಗ ಮಳೆ ಹೆಚ್ಚಾಗಿರುವುದರಿಂದ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ( ಸುಮಾರು 5 ಟಿಎಂಸಿಯಾದರೂ) ನೀರು ತಮಿಳುನಾಡಿಗೆ ಸಿಗಲಿದೆ.
ಅಂತಿಮ ಆದೇಶ 15 ವರ್ಷಗಳ ಮಾನ್ಯ
ಸುಪ್ರೀಂಕೋರ್ಟ್ ಅಂತಿಮ ಆದೇಶ 15 ವರ್ಷಗಳ ಮಾನ್ಯವಾಗಲಿದ್ದು, ತಮಿಳುನಾಡಿಗೆ ಸಿಗಬೇಕಿರುವ 177.25 ಟಿಎಂಸಿ ಅಡಿ ನೀರಿನಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಪ್ರತಿತಿಂಗಳು ತಲಾ 2.5 ಟಿಎಂಸಿ ವಾಡಿಕೆ ಮಳೆಯಾದ ಜಲ ವರ್ಷಗಳಲ್ಲಿ ಈ ನೀರು ಹಂಚಿಕೆಯೇ ಇರಲಿದೆ.