ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೊರೊನಾ ಕಾಲದಲ್ಲಿ ರೈತರಿಗಾಗಿ ಸರ್ಕಾರ ಏನು ಮಾಡಬೇಕು?
ಕೊರೊನಾ ಸಂಕಷ್ಟದಲ್ಲಿರುವ ರೈತರು ಹಾಗೂ ಗ್ರಾಮೀಣ ಜನರ ಹಿತರಕ್ಷಣೆಗಾಗಿ ಸರ್ಕಾರ ಕೂಡಲೇ ಧಾವಿಸಬೇಕೆಂದು ಕರ್ನಾಟಕ ರಾಜ್ಯದ ಸಂಯುಕ್ತ ಕಿಸಾನ್ ಮೋರ್ಚಾ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದೆ. ಪತ್ರಕ್ಕೆ ಸಹಿ ಮಾಡಿರುವ ರೈತ ಮುಖಂಡರಾದ ಬಾಬಾಗೌಡ ಪಾಟೀಲ, ಕೆ.ಟಿ ಗಂಗಾಧರ್, ಕುರುಬೂರು ಶಾಂತಕುಮಾರ್, ಚುಕ್ಕಿ ನಂಜುಂಡಸ್ವಾಮಿ ಮುಂತಾದವರು ಈ ಕೂಡಲೇ ಆಗಬೇಕಾದ ಕೆಲಸಗಳ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದಾರೆ.
ಪತ್ರದ ಸಾರಾಂಶ ಇಂತಿದೆ
- ಗ್ರಾಮೀಣ ಭಾಗದಲ್ಲಿ ಕೊರೊನಾ ಲಸಿಕೆ ಅಭಿಯಾನ ಹೆಚ್ಚಿಸಬೇಕು.
- ರೈತರ, ಬಡಜನರ, ಗ್ರಾಮೀಣ ಮಹಿಳೆಯರ ಸಹಕಾರಿ, ಖಾಸಗಿ ಬ್ಯಾಂಕ್, ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ವಸೂಲಾತಿಗೆ ಮುಂದಿನ ಮೂರು ವರ್ಷಗಳ ಅವಧಿಗೆ ತಡೆ ಹಾಕಿ ಸಂಕಷ್ಟದಲ್ಲಿರುವ ಎಲ್ಲರಿಗೂ ಹೊಸ ಸಾಲ ನೀಡುವ ನಿಯಮ ಜಾರಿಗೆ ತರಬೇಕು.
- ರಸಗೊಬ್ಬರ ಬೆಲೆ ಶೇಕಡ 54ರಷ್ಟು ಏರಿಕೆಯಿಂದ ರೈತರ ಕೊರೊನಾ ಸಂಕಷ್ಟದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹಾಗಾಗಿ ರಸಗೊಬ್ಬರ ಬೆಲೆ ಏರಿಕೆಗೆ ತಡೆಹಾಕಬೇಕು.
- ಕೊರೊನಾ ಲಾಕ್ ಡೌನ್ ಸಂಕಷ್ಟದಿಂದ ರೈತರು ಬೆಳೆದ ಉತ್ಪನ್ನಗಳ ಬೆಲೆ ಕುಸಿದು ರೈತರು ಹಣ್ಣು-ತರಕಾರಿಗಳನ್ನು ಬೀದಿ ಬೀದಿಯಲ್ಲಿ ಸುರಿಯುತ್ತಿದ್ದಾರೆ. ಖರೀದಿದಾರರು ಇಲ್ಲದ ಕಾರಣ ಕೆಲವು ರೈತರು ಕಟಾವು ಮಾಡದೆ ಹೊಲದಲ್ಲಿಯೇ ಬಿಟ್ಟಿದ್ದಾರೆ. ಸಾಲ ಮಾಡಿದ ರೈತ ಅಂಗೈಯಲ್ಲಿ ಆಕಾಶ ನೋಡುವಂತಾಗಿದೆ. ಎಲ್ಲಾ ಹಣ್ಣು-ತರಕಾರಿ ಬೆಳೆದ ರೈತರು ಈಗಾಗಲೇ ಬೆಳೆ ನಷ್ಟ ಅನುಭವಿಸಿರುವ ಕಾರಣ ಇಂತಹ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಬೇಕು.
- ರೈತರ ಹಣ್ಣು-ತರಕಾರಿ ಹೂ ಉತ್ಪನ್ನಗಳಿಗೆ ಸರ್ಕಾರ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ ಸರ್ಕಾರದ ವತಿಯಿಂದ ರೈತ ಉತ್ಪಾದಕ ಕಂಪನಿಗಳು ಹಾಗೂ ಹಾಪ್ ಕಾಮ್ಸ್ಗಳ ಮೂಲಕ ರೈತರಿಂದ ಖರೀದಿ ಮಾಡಬೇಕು ಹಾಗೂ ಗ್ರಾಹಕರಿಗೆ ಮಾರಾಟ ಮಾಡುವಂತಹ ಯೋಜನೆ ಜಾರಿಗೆ ತರಬೇಕು. ಈ ವ್ಯವಸ್ಥೆಗೆ ಬೇಕಾಗುವ ಸೌಲಭ್ಯಗಳನ್ನು ಎಫ್.ಪಿ.ಓ ಗಳಿಗೆ ಕಲ್ಪಿಸಲು ಬ್ಯಾಂಕ್ಗಳ ಮೂಲಕ ಬಡ್ಡಿ ರಹಿತವಾಗಿ ಸಾಲ ಕೊಡಿಸಿ ಸೌಲಭ್ಯ ಕಲ್ಪಿಸಬೇಕು. ಇದರಿಂದ ಸರ್ಕಾರಕ್ಕೆ ಯಾವುದೇ ಹೊರೆಯಾಗುವುದಿಲ್ಲ.
- ರಾಜ್ಯಾದ್ಯಂತ ಕನಿಷ್ಠ ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ರೈತರಿಂದ ಖರೀದಿಸಿದ ಭತ್ತ, ರಾಗಿ, ಶೇಂಗಾ ಬಾಬ್ತು ಹಣವನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು.
- ಈಗಾಗಲೇ ತಜ್ಞರು ಸೂಚಿಸಿರುವಂತೆ ರಾಜ್ಯದಲ್ಲಿ ಕೊರೊನಾ ಸೇವೆಗೆ ಬೇಕಾಗುವ ನರ್ಸ್ ಗಳನ್ನು ಅಂತಿಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಗೌರವ ಭತ್ಯ ನಿಗದಿ ಮಾಡಿ ಸೇವೆಗೆ ಬಳಸಿಕೊಳ್ಳಬೇಕು.
- ಮುಂಗಾರು ಆರಂಭವಾಗಿರುವುದರಿಂದ ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಖರೀದಿಗೆ ಹೋಗಿಬರಲು ಲಾಕ್ ಡೌನ್ ಸಮಸ್ಯೆಯಾಗುತ್ತಿದೆ. ಸರ್ಕಾರದ ವತಿಯಿಂದ ನೀಡುವ ಉಚಿತ ಬಿತ್ತನೆ ಬೀಜಗಳನ್ನು ಕೂಡಲೇ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿತರಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.
Comments
English summary
Kisan Morcha of Karnataka has written to the CM Yediyurappa, urging the government to take immediate action for the welfare of the farmers and rural people during in the covid period.
Story first published: Monday, May 17, 2021, 18:46 [IST]