ಸಮಗ್ರ ಸಾವಯವ ಕೃಷಿಗೆ ಹೆಚ್ಚಿನ ಒತ್ತು: ಕೃಷಿ ಸಚಿವ ಕೃಷ್ಣ ಭೈರೇಗೌಡ
ಸಿರಿಧಾನ್ಯಗಳು ನಮ್ಮ ಸಮಾಜಕ್ಕೆ ಅನಿವಾರ್ಯವಾದ ಬೆಳೆಗಳಾಗಿವೆ. ಈ ಸಿರಿಧಾನ್ಯಗಳ ಬಳಕೆಯಿಂದ ಜನರ ಆರೋಗ್ಯದ ಗುಣಮಟ್ಟ ಹೆಚ್ಚಾಗುತ್ತದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.
ಬೆಂಗಳೂರು, ಜ 14: ಕೃಷಿ ಇಲಾಖೆಯ ವತಿಯಿಂದ ರಾಜ್ಯದಲ್ಲಿ ಸಮಗ್ರ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.
ನಗರದ ಶನಿವಾರ (ಜ 14) ಜೆಪಿ ನಗರ ದುರ್ಗಾ ಪರಮೇಶ್ವರಿ ಆಟದ ಮೈದಾನದಲ್ಲಿ ಕೃಷಿ ಇಲಾಖೆ ಬೆಂಗಳೂರು ಜಿಲ್ಲೆ, ಜೈವಿಕ್ ಕೃಷಿಕ್ ಸೊಸೈಟಿ ಸಹಯೋಗದಲ್ಲಿ ಆಯೋಜಿಸಿದ್ದ ಎರಡು ದಿನಗಳ ಸಾವಯವ ಮತ್ತು ಸಿರಿಧಾನ್ಯ ಮೇಳಕ್ಕೆ ಚಾಲನೆ ನೀಡಿ ಕೃಷ್ಣ ಭೈರೇಗೌಡ ಮಾತನಾಡಿದರು.
ಸಿರಿಧಾನ್ಯಗಳು ನಮ್ಮ ಸಮಾಜಕ್ಕೆ ಅನಿವಾರ್ಯವಾದ ಬೆಳೆಗಳಾಗಿವೆ. ಈ ಸಿರಿಧಾನ್ಯಗಳ ಬಳಕೆಯಿಂದ ಜನರ ಆರೋಗ್ಯದ ಗುಣಮಟ್ಟ ಹೆಚ್ಚಾಗುತ್ತದೆ. ಅಲ್ಲದೆ, ಪರಿಸರದ ಮೇಲೂ ಸಕಾರಾತ್ಮಕ ಪರಿಣಾವ ಬೀರುತ್ತದೆ. (ಕೇಂದ್ರದಿಂದ 3,760 ಕೋಟಿ ರುಗೆ ಮನವಿ)
ಭತ್ತ, ಗೋಧಿ ಹಾಗೂ ಕಬ್ಬಿನಂತಹ ಬೆಳೆಗಳನ್ನು ಬೆಳೆಯಲು ಹಿಡಿಯುವ ಶ್ರಮ ಮತ್ತು ನೀರಿನ ಪ್ರಮಾಣ ಸಿರಿಧಾನ್ಯಗಳನ್ನು ಬೆಳೆಯಲು ಬೇಕಾಗಿಲ್ಲ. ಅಲ್ಲದೆ, ಇದಕ್ಕೆ ಯಾವುದೇ ರಾಸಾಯನಿಕ ಗೊಬ್ಬರಗಳ ಅವಶ್ಯಕತೆ ಬೀಳುವುದಿಲ್ಲ. ಪರಿಸರದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಎಂದು ಕೃಷಿ ಸಚಿವರು ಅಭಿಪ್ರಾಯ ಪಟ್ಟಿದ್ದಾರೆ.
ಅನ್ನಕ್ಕಿಂತಲೂ ಸಿರಿಧಾನ್ಯಗಳು ಬಹಳ ಶ್ರೇಷ್ಟ. ಇವುಗಳ ಬಳಕೆಯಿಂದ, ಅನ್ನದ ಬಳಕೆಯಿಂದ ಬರುವ ಮಧುಮೇಹದಂತಹ ರೋಗಗಳನ್ನು ತಡೆಗಟ್ಟಬಹುದಾಗಿದೆ. ರಾಜ್ಯ ಸರಕಾರ ಇತ್ತಿಚಿನ ದಿನಗಳಲ್ಲಿ ಸಮಗ್ರವಾಗಿ ಸಾವಯವ ಬೆಳೆಗೆ ಬೇಕಾದ ಪ್ರೋತ್ಸಾಹವನ್ನು ಹೆಚ್ಚಿಸಿದೆ.
ಈ ಮೂಲಕ ಸಾವಯವ ಕೃಷಿಕರು ಸಾವಯವ ಪ್ರಮಾಣಪತ್ರ ಪಡೆಯಲು ಅನುಕೂಲವಾಗುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು. ಸಾವಯವ ಕೃಷಿಯಿಂದ ಉತ್ಪನ್ನವಾಗುವ ಪದಾರ್ಥಗಳಿಗೆ ಅಗತ್ಯ ಮಾರುಕಟ್ಟೆಯನ್ನೂ ಒದಗಿಸುವುದು ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ಸಾವಯವ ಮತ್ತು ಸಿರಧಾನ್ಯ ಮೇಳವನ್ನು ಆಯೋಜಿಸುತ್ತಿದ್ದೇವೆ ಕೃಷಿ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.
ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ವಿಜಯಕುಮಾರ್ ಮಾತನಾಡಿ, ಹಿಂದಿನ ಕಾಲದಲ್ಲಿ ಬಳಸಲಾಗುತ್ತಿದ್ದ ಬೆಳೆಗಳು ನಮ್ಮ ಆರೋಗ್ಯಕ್ಕೆ ಪೂರಕವಾಗಿವೆ. ಆದ್ದರಿಂದ ಈ ಬೆಳೆಗಳ ಉಪಯೋಗ ಮತ್ತು ಬೆಳೆಯನ್ನು ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ ಎಂದರು.
2ದಿನಗಳ ಕಾಲ ಈ ಸಾವಯವ ಮತ್ತು ಸಿರಧಾನ್ಯ ಮೇಳ ನಡೆಯಲಿದ್ದು, ಮೇಳದಲ್ಲಿ ಸಾವಯವ ಕೃಷಿಕರ ಸಂಘಗಳು, ಸಾವಯವ ಕೃಷಿಕರ ಸಂಘಗಳ ಪ್ರಾಂತೀಯ ಒಕ್ಕೂಟಗಳು, ಸಿರಿಧಾನ್ಯಗಳ ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳು ಭಾಗವಹಿಸಿದ್ದಾರೆ.
ಈ ಮೇಳದಲ್ಲಿ ಗ್ರಾಹಕರು, ವಿವಿಧ ರೀತಿಯ ಸಾವಯವ ಮತ್ತು ಸಿರಿಧಾನ್ಯ ಪದಾರ್ಥಗಳನ್ನು ಒಂದೇ ಸೂರಿನಡಿಯಲ್ಲಿ ಖರೀದಿಸುವುದರ ಜೊತೆಗೆ ಪಾಕ ತಜ್ಞರಿಂದ ವಿವಿಧ ಸಿರಿಧಾನ್ಯ ಅಡುಗೆ ತಯಾರಿಕೆಯ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಬಹುದಾಗಿದೆ.