ಮಹದಾಯಿ ಹೋರಾಟಗಾರರ ಮೇಲಿನ ಪ್ರಕರಣ ವಾಪಸ್
ಬುಧವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹದಾಯಿ ನೀರಿಗಾಗಿ ಹೋರಾಟ ನಡೆಸಿದ ರೈತರ ಮೇಲಿನ ಕೇಸ್ ಗಳನ್ನು ವಾಪಸ್ ಪಡೆದಿದೆ.
ಬೆಂಗಳೂರು, ಫೆಬ್ರವರಿ. 15 : ಮಹದಾಯಿ ನೀರಿಗಾಗಿ ಹೋರಾಟ ನಡೆಸಿದ ರೈತರ ಮೇಲೆ ಹೂಡಿರುವ 94 ಮೊಕದ್ದಮೆಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ.
ಬುಧವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ಈ ಹಿಂದೆ ಮಹದಾಯಿ ಹೋರಾಟದ ವೇಳೆ ಗಲಭೆ ಪ್ರಕರಣದಲ್ಲಿ ರೈತರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು ಎಂದು ಹಲವು ಹೋರಾಟಗಳು ನಡೆದಿದ್ದವು.
ಜುಲೈನಲ್ಲಿ ನಡೆದಿದ್ದ ಮಹದಾಯಿ ಹೋರಾಟದ ಹಿನ್ನಲೆಯಲ್ಲಿ ಗದಗ, ನವಲಗುಂದ, ನರಗುಂದ ಸೇರಿದಂತೆ ಹಲವು ಕಡೆಗಳಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು.
ಆ ವೇಳೆ ಪ್ರತಿಭನಾಕಾರರು ಪೊಲೀಸ್ ವಾಹನಗಳಿಗೆ ಸೇರಿದಂತೆ ಸರ್ಕಾರಿ ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಈ ಹಿನ್ನಲೆಯಲ್ಲಿ ಪೊಲೀಸರು ಮನೆ-ಮನೆಗೆ ತೆರಳಿ ಮಹಿಳೆಯರು, ಮುದುಕರು ಎನ್ನದೆ ಕೈಗೆ ಸಿಕ್ಕವರನ್ನು ಹಿಗ್ಗಾಮುಗ್ಗ ಥಳಿಸಿ ಬಂಧಿಸಿದ್ದರು.
ಬಳಿಕ ಜಾಮೀನಿನ ಮೇಲೆ ಬಳ್ಳಾರಿ, ಚಿತ್ರದುರ್ಗಾ ಜೈಲಿನಿಂದ ಹೊರ ಬಂದಿದ್ದರು. ಆ ಎಲ್ಲಾ ಪ್ರಕರಣಗಳನ್ನು ಈಗ ರಾಜ್ಯ ಸರ್ಕಾರ ವಾಪಸ್ ಪಡೆದುಕೊಂಡಿದೆ.