ಸರ್ಕಾರದ ಪರಿಹಾರ ಮತ್ತು ರೈತರ ನೈಜ ಬದುಕು
ಕೊರೊನಾ ಸಂಕಷ್ಟದ ಈ ಸಮಯದಲ್ಲಿ ರೈತರ ನೆರವಿಗೆ ನಿಲ್ಲುವುದಾಗಿ ಘೋಷಿಸಿರುವ ಸರ್ಕಾರ ಒಂದಿಷ್ಟು ಪರಿಹಾರವನ್ನು ಘೋಷಿಸಿದೆ. ಈ ಪರಿಹಾರ "ಆನೆ ಹೊಟ್ಟೆಗೆ ಮೂರು ಕಾಸಿನ ಮಜ್ಜಿಗೆ" ಎಂಬ ಮಾತಿಗೂ ನಿಲುಕುವುದಿಲ್ಲ. ಆನೆ ಹೊಟ್ಟೆಗೆ ಮಜ್ಜಿಗೆಯ ವಿಡಿಯೋ ತೋರಿದಂತಷ್ಟೇ. ಮರೀಚಿಕೆ.
ಈಗ ಹೆಸರುಘಟ್ಟದ ಹೂ ಬೆಳೆಗಾರರೊಬ್ಬರನ್ನು ಮಾತನಾಡಿಸಿದೆ. ಅವರು ಕ್ರೈಜಾಂತಮಮ್ ಬೆಳೆಯುತ್ತಿದ್ದೇನೆ ಅಂದರು. ಒಂದು ಎಕರೆಗೆ ಬೇಕಾಗುವ ಸಸಿ ತರಲು 1,80,000 ರೂಪಾಯಿ ಬೇಕು. ಇಡೀ ಬೆಳೆಯ ಅವಧಿಯಲ್ಲಿ ಸುಮಾರು ಮೂರರಿಂದ ಮೂರೂವರೆ ಲಕ್ಷ ರೂಪಾಯಿ ಖರ್ಚು ಬರುತ್ತೆ. ಯಾಕೆ ಇದೆಲ್ಲಾ ಕೇಳ್ತಿದ್ದೀರಿ ಅಂದರು.
ವಿಶೇಷ ಪ್ಯಾಕೇಜ್ ಘೋಷಣೆ; ಯಡಿಯೂರಪ್ಪ ಪತ್ರಿಕಾಗೋಷ್ಠಿ ವಿವರ
ಈಗ ಸರ್ಕಾರ ಹೂ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಗೆ 10,000 ಪರಿಹಾರ ಕೊಡುವುದಾಗಿ ಘೋಷಿಸಿದೆ, ಹಾಗಾಗಿ ನಿಮಗೆ ಖರ್ಚೆಷ್ಟು ಬರುತ್ತೆ ಎಂದು ತಿಳ್ಕೋಳೋಣ ಅಂತಾ ಫೋನ್ ಮಾಡಿದೆ ಎಂದೆ. ಓಹೋ ಕಳೆದ ವರ್ಷನೂ ಘೋಷಣೆ ಮಾಡಿದ್ರು, ಆಗ 25,000 ಅಂತಾ, ಇನ್ನೂ ಬಂದಿಲ್ಲ ಅಂದರು.
ಮತ್ತೊಬ್ಬ ದ್ರಾಕ್ಷಿ ಬೆಳೆಗಾರರ ಜೊತೆ ಮಾತನಾಡಿದೆ. ಸಾರ್, ಕಳೆದ ವರ್ಷ ನಾನು ಹೂ ಬೆಳೆದಿದ್ದೆ. ಆಗ ಪರಿಹಾರ ಘೋಷಿಸಿದ್ದರು. ಬಂದು ಫೋಟೋ ತೆಕ್ಕೊಂಡೋದ್ರು, ಇಷ್ಟು ಬತ್ತದೆ ಅಷ್ಟು ಬತ್ತದೆ ಅಂತಾ ಹೇಳಿದ್ರು. ನಾವೂ ಗಿಣಿ ಒಣಗಿದ್ ಮರ ಕಾಯ್ಕೊಂಡು ಕೂತಂಗೆ ಕೂತಿದ್ದೇ ಆಯ್ತು, ಇನ್ನೂ ಬಂದಿಲ್ಲ. ಹಂಗಾದ್ರೆ ಈ ಸಾರಿನೂ ಕೊಡ್ತಾರಂತೇನು ಎಂದು ನಕ್ಕರು. ಆಮೇಲೆ ಪ್ರತಿ ಎಕರೆ ದ್ರಾಕ್ಷಿ ಬೆಳೆಯೋಕೆ ನಲವತ್ತೈವತ್ತು ಸಾವಿರ ಖರ್ಚು ಬರುತ್ತದೆ ಎಂದರು.
ಕೋಲಾರದ ಟೊಮೆಟೊ ಬೆಳೆಗಾರರೊಬ್ಬರನ್ನು ಮಾತನಾಡಿಸಿದೆ. ಏನ್ ಸ್ವಾಮಿ ಹೆಕ್ಟೇರ್ ಗೆ 10,000 ಪರಿಹಾರ ಕೊಡ್ತಾರಂತೆ ಅಂದೆ. ಹೋದ್ ವರ್ಷದ್ದೇ ಬಂದಿಲ್ಲವೆಂದು ಅವರೂ ಹೇಳಿದರು.
ಅಲ್ಲದೆ ಪ್ರತಿ ಎಕರೆಗೆ ಮೂರು ಲಕ್ಷ ಖರ್ಚೇ ಮಾಡ್ತೀವಿ. 10,000 ತಗೊಂಡು ಏನ್ ಮಾಡೋಣ ಎಂದರಲ್ಲದೆ, ನಿಜವಾದ ಬೆಳಗಾರ ಇವರ ಪರಿಹಾರ ತೊಗೊಳೋದೇ ಇಲ್ಲ, ಒಂದು ಕೋಟ್ ಔಷಧಿಗೂ ಸಾಲಲ್ಲ ಅವರು ಕೊಡೋದು. ನಾನು ಒಂದು ಎಕರೆಗೆ ಬರೀ ಕೊಟ್ಟಿಗೆ ಗೊಬ್ಬರಾನೇ 70,000 ರೂಪಾಯಿದು ಕೊಟ್ಟಿದ್ದೀನಿ ಎಂದು ಗಂಭೀರ ನಗೆ ಹೊಮ್ಮಿಸಿದರು. ಸರಿಯಣ್ಣಾ ಥ್ಯಾಂಕ್ಸ್ ಮಾತಾಡಿದ್ದಕ್ಕೆ ಎಂದು ಫೋನಿಟ್ಟೆ.