ಬಳ್ಳಾರಿ: ರೈತರ ಸಾಲಗಳ ಮೇಲೆ ಚಕ್ರಬಡ್ಡಿ ವಿಧಿಸುವುದಕ್ಕೆ ಕರ್ನಾಟಕ ರೈತಸಂಘ ಆಕ್ಷೇಪ
ಬಳ್ಳಾರಿ, ಏಪ್ರಿಲ್ 19: ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಆಶ್ರಯದಲ್ಲಿ ಸೋಮವಾರ (18-4-2022) ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಧಾನ ಕಚೇರಿ ಎದುರು ಧರಣಿ ನಡೆಸಲಾಯಿತು.
ರೈತರ ಸಾಲಗಳ ಮೇಲೆ ಚಕ್ರಬಡ್ಡಿ ವಿಧಿಸುವುದನ್ನು ತಪ್ಪಿಸಿ (ಬಡ್ಡಿಯ ಮೇಲಿನ ಬಡ್ಡಿ)ಯಾವುದೇ ಸಂದರ್ಭದಲ್ಲಿ ಬಡ್ಡಿಯು ಮೂಲವನ್ನು ಮೀರಬಾರದು. ಸರಕಾರ ರೈತರ ಕಷ್ಟಕ್ಕೆಂದು ವಿವಿಧ ಯೋಜನೆಗಳಡಿ ಕೊಡುವ ಸಹಾಯಧನವನ್ನು ಯಾವುದೇ ಕಾರಣಕ್ಕೆ ಸಾಲದ ಖಾತೆಗೆ ಜಮೆ ಮಾಡಿಕೊಳ್ಳಬಾರದು. ಇಂತಹ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕಿನವರು ಅನುಸರಿಸುತ್ತಿರುವ ಬಡ್ಡಿ ನೀತಿಯನ್ನು ಕೈಬಿಡಬೇಕೆಂದು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮಾದರಿಯಲ್ಲಿ ಸಾಲ ಸೆಟ್ಲಮೆಂಟ್ ಮಾಡಬೇಕೆಂದು ತೀವ್ರವಾಗಿ ಒತ್ತಾಯಿಸಿದರು.
ರೈತರ ಒತ್ತಾಯಕ್ಕೆ ಮಣಿದ ಕರ್ನಾಟಕ ಗ್ರಾಮೀಣ ಬ್ಯಾಂಕ್ನ ಉನ್ನತ ಅಧಿಕಾರಿಗಳು ಮತ್ತು ಅಧ್ಯಕ್ಷರು ಪ್ರತಿಭಟನಾಕಾರರ ಮುಂದೆ ಹಾಜರಾಗಿ ರೈತರಿಗೆ ಸಿಗುವ ಪರಿಹಾರ ಧನ, ವೃದ್ಧಾಪ್ಯ ವೇತನ ಉದ್ಯೋಗ ಖಾತ್ರಿ ಯೋಜನೆ, ಅಂಗವಿಕಲ ವೇತನ ಹಣವನ್ನು ಸಾಲದ ಖಾತೆಗೆ ಜಮೆ ಮಾಡಿಕೊಳ್ಳುವುದಿಲ್ಲವೆಂದು ಭರವಸೆ ನೀಡಿದರು.
ಈಗಾಗಲೇ ಜಮೆ ಮಾಡಿಕೊಂಡಿರುವ ಇಂತಹ ಬಾಬ್ತುಗಳ ಹಣವನ್ನು ಸಂಬಂಧಪಟ್ಟ ಖಾತೆದಾರರಿಗೆ ಪಾವತಿಸುವಂತೆ ಆದೇಶಿಸಲಾಗಿದೆ. ಒಂದು ವೇಳೆ ಯಾವ ಶಾಖೆಯವರಾದರೂ ಇಂತಹ ಹಣವನ್ನು ವಾಪಸ್ಸು ಮಾಡದಿದ್ದರೆ ಪ್ರಧಾನ ಕಚೇರಿಗೆ ಲಿಖಿತ ದೂರು ಸಲ್ಲಿಸಬೇಕೆಂದು ಹೇಳಿದರು.
ಧರಣಿಗೂ ಮುನ್ನ ಬಳ್ಳಾರಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ರಾಜ್ಯದ 60 ಗ್ರಾಮಗಳಲ್ಲಿ 15 ದಿನಗಳ ಪ್ರಚಾರ ಸಭೆ ನಡೆಸಿ ರೈತರಿಗೆ ಸಾವಿರಾರು ಕರಪತ್ರಗಳನ್ನು ಹಂಚಲಾಯಿತು.
ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಡಿ, ಸಾಲಮನ್ನಾ ಮಾಡುವ ತನಕ ಮುಂಬರುವ ದಿನಗಳಲ್ಲಿ ಪ್ರತಿಭಟನೆಯನ್ನು, ಹೋರಾಟವನ್ನು ವಿವಿಧ ರೂಪಗಳಲ್ಲಿ ಸಂಘಟಿಸಲಾಗುವುದು. ಇದನ್ನು ರಾಜ್ಯ ವ್ಯಾಪಿಯಾಗಿ ನಡೆಸಲಾಗುತ್ತದೆ ಆಗ ರೈತಕುಲ ಒಂದಾಗಿ ಬರಬೇಕೆಂದು ಘೋಷಿಸಿ ರೈತರಿಗೆ ಅನುಕೂಲವಾಗುವ ನಿರ್ಣಯ ತೆಗೆದುಕೊಳ್ಳಲು ಬ್ಯಾಂಕಿನವರಿಗೆ 30 ದಿನಗಳ ಗಡುವು ನೀಡಲಾಯಿತು.
ಪ್ರತಿಭಟನಾ ಸಭೆಯಲ್ಲಿ ರೈತ ಹೋರಾಟಗಾರ ಆರ್.ಮಾಧವರೆಡ್ಡಿ, ಸ. ರಘುನಾಥ, ಬಸವರಾಜ, ಕಾಳಿದಾಸ, ಬಸವನಗೌಡ ಪಾಟೀಲ, ಬಸವರಾಜ, ಅಸುಂಡಿ ಲೇಪಾಕ್ಷಿ, ಟಿ.ಜಿ. ವಿಠಲ್, ಕೋಟೇಶ್ವರ ರಾವ್, ಶ್ರೀಶೈಲ ಸಂಡೂರು, ಲಕ್ಷ್ಮೀಕಾಂತ ರೆಡ್ಡಿ ಹಾಗೂ ಗಂಗಿರೆಡ್ಡಿ ಮುಂತಾದವರು ಮಾತನಾಡಿದರು.