ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ನೆರವಿಗೆ ಸರಕಾರ, 3500 ಕೋಟಿ ರು ಸಾಲ ಮನ್ನಾ

By Prasad
|
Google Oneindia Kannada News

ಬೆಂಗಳೂರು, ಜು. 24 : ಭೀಕರ ಬರಗಾಲದಿಂದ ತತ್ತರಿಸಿರುವ ರಾಜ್ಯದ ಅನ್ನದಾತರ ನೆರವಿಗೆ ಕಡೆಗೂ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರಕಾರ ಧಾವಿಸಿದೆ. 16 ಲಕ್ಷ ರೈತರು ಪಡೆದಿರುವ 3,500 ಕೋಟಿ ರು. ಸಾಲವನ್ನು ಬಡ್ಡಿಸಮೇತ ಮನ್ನಾ ಮಾಡುವುದಾಗಿ ಹೇಳಿ, ರೈತರಲ್ಲಿ ಮತ್ತೆ ಉಸಿರು ತುಂಬಿದೆ.

Shettar govt rushes to the aid of drought hit farmers

ವಿಧಾನಮಂಡಲ ಮುಂಗಾರು ಅಧಿವೇಶನದಲ್ಲಿ ಜಗದೀಶ್ ಶೆಟ್ಟರ್ ಅವರು, ರೈತರ ಹಿತದೃಷ್ಟಿಯಿಂದ ಈ ಹೊರೆಯನ್ನು ಹೊರಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಮಂಗಳವಾರ ಘೋಷಿಸಿದರು. ಬರ ಪರಿಹಾರ ಕುರಿತಂತೆ ಇಂದು ಕೂಡ ಮುಂದುವರಿದ ಚರ್ಚೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಅವರು, 2011ರ ಆಗಸ್ಟ್‌ನಿಂದ 2012ರ ಜೂನ್‌ವರೆಗೆ, ಸಹಕಾರ ಸಂಘದಲ್ಲಿ 25 ಸಾವಿರ ರು.ಗಿಂತ ಕಡಿಮೆ ಇರುವ ಸಾಲಗಳಿಗೆ ಮಾತ್ರ ಮನ್ನಾ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಸೋಮವಾರ ಆರಂಭವಾಗಿದ್ದ ಚರ್ಚೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು, ಬರ ಪೀಡಿತ ಪ್ರದೇಶಗಳಲ್ಲಿ ಸಂಕಷ್ಟಕ್ಕೀಡಾಗಿರುವ ರೈತರ ನೆರವಿಗೆ ಬಿಜೆಪಿ ಸರಕಾರದ ಮಂತ್ರಿಗಳು ಮತ್ತು ಅಧಿಕಾರಿಗಳು ಧಾವಿಸುತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕರಂತೆ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ರೈತರ ಬಳಿ ಈಗಲಾದರೂ ಹೋಗದಿದ್ದರೆ ಮುಂದಿನ ಚುನಾವಣೆಯಲ್ಲಿ ಸೋಲೇ ಗತಿ ಎಂದು ಅವರು ಎಚ್ಚರಿಸಿದ್ದರು. ಅವರ ಈ ಆಕ್ರೋಶಕ್ಕೆ ಪಕ್ಷದಲ್ಲಿಯೇ ಟೀಕೆಗಳು ಕೇಳಿಬಂದಿದ್ದರೂ, ಅಂತಿಮವಾಗಿ ಗೆಲುವಿನ ನಗೆ ಯಡಿಯೂರಪ್ಪನವರದೇ ಆಗಿದೆ.

ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಆರಂಭಿಸಿದ್ದ ಅವರ ನೆಚ್ಚಿನ ಸುವರ್ಣ ಭೂಮಿ ಯೋಜನೆಗಾಗಿ 125 ಕೋಟಿ ರು. ಮತ್ತು ಸಾಮಾಜಿಕ ಸುರಕ್ಷತಾ ಯೋಜನೆಯಡಿ ಹಿರಿಯ ನಾಗರಿಕರು ಮತ್ತು ಅಂಗವಿಕಲರ ಪಿಂಚಣಿಗಾಗಿ ಹಣ ಬಿಡುಗಡೆ ಮಾಡುವುದಾಗಿ ಶೆಟ್ಟರ್ ನುಡಿದರು. ಪಿಂಚಣಿ ಹಣ ಬಿಡುಗಡೆಗೆ ತಡವಾಗದಂತೆ ಕ್ರಮ ತೆಗೆದುಕೊಳ್ಳಬೇಕು ಮತ್ತು ಯಾವುದೇ ದೂರುಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಸಂಬಂಧಿತ ಅಧಿಕಾರಿಗಳಿಗೆ ತಾಕೀತು ಮಾಡಿರುವುದಾಗಿ ಶೆಟ್ಟರ್ ತಿಳಿಸಿದರು.

2009ರ ನೆರೆ ಸಂತ್ರಸ್ತರಿಗೆ ಖಾತಾ ವರ್ಗಾವಣೆಯಲ್ಲಿ ಯಾವುದೇ ವಿಳಂಬವಾಗಬಾರದು ಎಂದು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ತಿಳಿಸಿರುವುದಾಗಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಆದರೆ, ಶೆಟ್ಟರ್ ಅವರ ಉತ್ತರಗಳಿಂದ ವಿರೋಧ ಪಕ್ಷದ ಶಾಸಕರಿಗೆ ಸಮಾಧಾನವಾದಂತೆ ಕಂಡುಬರಲಿಲ್ಲ. ಸರಕಾರ ರೈತ ವಿರೋಧಿ ನೀತಿ ತಳೆದಿದೆ ಎಂದು ಆರೋಪಿಸಿ, ಸದನದ ಬಾವಿಗಿಳಿದು ಪ್ರತಿಭಟಿಸಿದರು ಮತ್ತು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಸಭಾತ್ಯಾಗ ಮಾಡಿದರು.

ಸಿದ್ದರಾಮಯ್ಯ ಲೇವಡಿ : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶೆಟ್ಟರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬರ ಪೀಡಿತ ಪ್ರದೇಶದಲ್ಲಿರುವ ಸಾಲ ಪಡೆಯದಿರುವ ರೈತರ ಗತಿಯೇನು? ರಾಷ್ಟ್ರೀಕೃತ ಬ್ಯಾಂಕಿನಿಂದ ಸಾಲ ಪಡೆದ ರೈತರು ಏನು ಮಾಡಬೇಕು? ಎಂದು ಪ್ರಶ್ನಿಸಿರುವ ಅವರು, ರೈತರ ಮೇಲೆ ಸರಕಾರಕ್ಕೆ ನಿಜವಾಗಿಯೂ ಕಾಳಜಿ ಇದ್ದಿದ್ದರೆ ಯಾವುದೇ ಷರತ್ತುಗಳಿಲ್ಲದೆ ಇಡೀ ಬೆಳೆ ಸಾಲವನ್ನು ಸರಕಾರ ಮನ್ನಾ ಮಾಡಬೇಕಿತ್ತು. ಹಾಗೆ ನೋಡಿದರೆ, ಶೇ.90ರಷ್ಟು ರೈತರು ಸಾಲ ಮರುಪಾವತಿ ಮಾಡಿದ್ದಾರೆ. ಇದು ರೈತರ ಕಣ್ಣೊರೆಸುವ ತಂತ್ರ ಮತ್ತು ಗಿಮಿಕ್ ಮಾತ್ರ ಅಂತ ಅವರು ಲೇವಡಿ ಮಾಡಿದರು.

English summary
Jagadish Shettar govt has rushed to the aid of farmers in drought hit areas in Karnataka by waiving farm loan to the tune of 3,500 cr, as suggested by former CM Yeddyurappa. But opposition leader has ridiculed it by saying it is just eye washing tactic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X