ಸೋಮವಾರ ಕರ್ನಾಟಕ ಬಂದ್; ಏನಿರುತ್ತೆ, ಏನಿರಲ್ಲ?
ಬೆಂಗಳೂರು, ಸೆಪ್ಟೆಂಬರ್ 27: ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಸೆಪ್ಟೆಂಬರ್ 28ರ ಸೋಮವಾರ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ರೈತರು ಕರೆ ನೀಡಿರುವ ಬಂದ್ಗೆ ವಿವಿಧ ಸಂಘಟನೆಗಳು ಬೆಂಬಲ ಘೋಷಣೆ ಮಾಡಿವೆ.
ರೈತ, ದಲಿತ, ಕಾರ್ಮಿಕರ ಸಂಘಟನೆಗಳು ಒಟ್ಟಾಗಿ 'ಐಕ್ಯ ಹೋರಾಟ ಸಮಿತಿ' ಎಂಬ ಹೆಸರಿನಲ್ಲಿ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ಸೋಮವಾರ ಬೆಳಗ್ಗೆ 6 ರಿಂದ ಸಂಜೆ 6ರ ತನಕ ಬಂದ್ ನಡೆಯಲಿದೆ. ತುರ್ತು ಸೇವೆಗಳಿಗೆ ಬಂದ್ನಿಂದ ವಿನಾಯಿತಿ ನೀಡಲಾಗಿದೆ.
ಕರ್ನಾಟಕ ಬಂದ್; ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ಮುಂದೂಡಿಕೆ
ಬಂದ್ ಕರೆ ನೀಡಿರುವ ನಿಯೋಗ ಮುಖ್ಯಮಂತ್ರಿಗಳ ಆಹ್ವಾನದ ಮೇರೆಗೆ ಶುಕ್ರವಾರ ಬಿ. ಎಸ್. ಯಡಿಯೂರಪ್ಪ ಜೊತೆ ವಿಧಾನಸೌಧದಲ್ಲಿ ಸಭೆ ನಡೆಸಿತು. ಆದರೆ, ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದ ಹಿನ್ನಲೆಯಲ್ಲಿ ಸಭೆ ವಿಫಲವಾಯಿತು. ಕಂದಾಯ ಸಚಿವ ಆರ್. ಅಶೋಕ್, ಕೃಷಿ ಸಚಿವ ಬಿ. ಸಿ. ಪಾಟೀಲ್ ಮುಂತಾದವರೂ ಸಭೆಯಲ್ಲಿದ್ದರು.
ರೈತರ ಜೊತೆಗಿನ ಸಿಎಂ ಸಭೆ ವಿಫಲ; ಸೋಮವಾರ ಕರ್ನಾಟಕ ಬಂದ್
ಮುಖ್ಯಮಂತ್ರಿಗಳ ಜೊತೆಗಿನ ಸಭೆ ವಿಫಲವಾದ ಹಿನ್ನಲೆಯಲ್ಲಿ ಕರ್ನಾಟಕ ಬಂದ್ ನಡೆಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಬಂದ್ ದಿನ ಏನು ಇರಲಿದೆ?, ಏನು ಇರುವುದಿಲ್ಲ ಎಂಬ ಮಾಹಿತಿ ಇಲ್ಲಿದೆ ನೋಡಿ...
ಕರ್ನಾಟಕ ಬಂದ್ ಗೆ ಉಡುಪಿ ಜಿಲ್ಲೆಯ 14 ಸಂಘಟನೆಗಳ ಬೆಂಬಲ
ವಿವಿಧ ಸಂಘಟನೆಗಳ ಬೆಂಬಲ
ಸೋಮವಾರದ ಕರ್ನಾಟಕ ಬಂದ್ಗೆ ಕುರುಬೂರು ಶಾಂತಕುಮಾರ್ ನೇತೃತ್ವದ ರಾಜ್ಯ ಬೆಳೆಗಾರರ ಸಂಘ, ಕೋಡಿಹಳ್ಲಿ ಚಂದ್ರಶೇಖರ್ ನೇತೃತ್ವದ ಕರ್ನಾಟಕ ರಾಜ್ಯ ರೈತ ಸಂಫ ಹಾಗು ಹಸಿರು ಸೇನೆ, ಕರ್ನಾಟಕ ಪ್ರಾಂತ ರೈತ ಸಂಫ, ದಲಿತ ಸಂಫರ್ಷ ಸಮಿತಿ, ನಮ್ಮೂರು ಭೂಮಿ ನಮಗಿರಲಿ ಅಭಿಯಾನ ಸೇರಿದಂತೆ ವಿವಿಧ ಸಂಘಟನೆಗಳ ಬೆಂಬಲವಿದೆ. ಎಐಟಿಯುಸಿ, ಸಿಐಟಿಯು, ಓಲಾ & ಊಬರ್ ಚಾಲಕರ ಸಂಘ, ವಿವಿಧ ಕನ್ನಡಪರ ಸಂಘಟನೆಗಳು ಬೆಂಬಲ ಘೋಷಣೆ ಮಾಡಿವೆ.
ಎಪಿಎಂಸಿ ಬಂದ್, ತರಕಾರಿ ಮಾರಾಟವಿಲ್ಲ
ರೈತರು ಕರ್ನಾಟಕ ಬಂದ್ಗೆ ಕರೆ ನೀಡಿದ್ದು ಎಪಿಎಂಸಿಗಳು ಬಾಗಿಲು ಹಾಕಲಿವೆ. ಇದರಿಂದಾಗಿ ಬೀದಿ ಬದಿ ತರಕಾರಿ ವ್ಯಾಪಾರ ನಡೆಯುವುದಿಲ್ಲ. ಎಪಿಎಂಸಿಯಿಂದ ಮುಂಜಾನೆ ತರಕಾರಿ ತಂದು ಬೀದಿಬದಿ ವ್ಯಾಪಾರ ಮಾಡಲಾಗುತ್ತಿತ್ತು.
ವಿವಿಧ ಪರೀಕ್ಷೆಗಳು ಇಲ್ಲ
ಕರ್ನಾಟಕ ಬಂದ್ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರಲು ತೊಂದರೆಯಾಗಲಿದೆ. ಆದ್ದರಿಂದ, ಸೋಮವಾರ ನಡೆಯಬೇಕಿದ್ದ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ, ವಿವಿಧ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಆಟೋ, ಟ್ಯಾಕ್ಸಿ ಸೇವೆ ಇಲ್ಲ
ಕರ್ನಾಟಕ ಬಂದ್ಗೆ ಆಟೋ ಚಾಲಕರು ಬೆಂಬಲ ನೀಡಿದ್ದಾರೆ. ಆದ್ದರಿಂದ, ಸೋಮವಾರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಟೋಗಳ ಸಂಚಾರ ಇರುವುದಿಲ್ಲ. ಓಲಾ ಮತ್ತು ಊಬರ್ ಚಾಲಕರ ಸಂಘ ಸಹ ಬೆಂಬಲ ನೀಡಿದೆ. ಇದರಿಂದಾಗಿ ಟ್ಯಾಕ್ಸಿ ಸೇವೆ ಸಹ ಇರುವುದಿಲ್ಲ.
ಬಂದ್ ನಿಂದ ವಿನಾಯಿತಿ
ಕರ್ನಾಟಕ ಬಂದ್ನಿಂದ ಆಸ್ಪತ್ರೆ, ಅಂಬ್ಯುಲೆನ್ಸ್, ಔಷಧ ಅಂಗಡಿಗಳಿಗೆ ವಿನಾಯಿತಿ ನೀಡಲಾಗಿದೆ. ಬಂದ್ ಇದ್ದರೂ ಸಹ ಆರೋಗ್ಯ ಸೇವೆಗೆ ಯಾವುದೇ ತೊಂದರೆ ಆಗುವುದಿಲ್ಲ.
ನಮ್ಮ ಮೆಟ್ರೋ, ವಿಮಾನ ಸೇವೆ
ಕರ್ನಾಟಕ ಬಂದ್ ದಿನ ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಸಂಚಾರ ನಡೆಸಲಿದೆ. ವಿಮಾನ ಸೇವೆಗೆ ಸಹ ಯಾವುದೇ ತೊಂದರೆ ಇರುವುದಿಲ್ಲ. ಆದರೆ, ವಿಮಾನ ಮತ್ತು ಮೆಟ್ರೋದಿಂದ ಇಳಿದ ಮೇಲೆ ಸಂಚಾರ ನಡೆಸಲು ಜನರು ಕಷ್ಟ ಪಡಬೇಕಾಗಬಹುದು. ತೀರಾ ಅನಿವಾರ್ಯ ಇದ್ದರೆ ಮಾತ್ರ ಸಂಚಾರ ನಡೆಸಿ.
ಹೋಟೆಲ್, ದಿನಸಿ ಅಂಗಡಿ
ಸೋಮವಾರ ಹೋಟೆಲ್, ದಿನಸಿ ಅಂಗಡಿಗಳು ತೆರೆದಿರುತ್ತವೆ. ಹಾಲಿನ ಬೂತ್, ಪೆಟ್ರೋಲ್ ಬಂಕ್ ಎಂದಿನಂತೆ ಕಾರ್ಯ ನಿರ್ವಹಣೆ ಮಾಡಲಿವೆ.
ಬಸ್ ಸಂಚಾರವಿದೆಯೇ?
ಕರ್ನಾಟಕ ಬಂದ್ಗೆ ಎಐಟಿಯುಸಿ, ಸಿಐಟಿಯು ಬೆಂಬಲ ನೀಡಿದೆ. ಆದ್ದರಿಂದ, ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ಗಳು ಸಂಚಾರ ನಡೆಸುವ ಸಾಧ್ಯತೆ ಕಡಿಮೆ ಇದೆ. ಪರಿಸ್ಥಿತಿ ನೋಡಿಕೊಂಡು ಬಸ್ ಸಂಚಾರ ನಡೆಸಲು ತೀರ್ಮಾನಿಸಲಾಗಿದೆ.